Wednesday, February 26, 2025
Homeರಾಜ್ಯಮಹಾದಾಯಿ, ಗೋದಾವರಿ, ಕೃಷ್ಣ, ಕಾವೇರಿ, ಪೆನ್ನಾರ್ ನದಿಗಳ ಜೋಡಣೆಗೆ ಪ್ರಸ್ತಾವನೆ : ಡಿಕೆಶಿ

ಮಹಾದಾಯಿ, ಗೋದಾವರಿ, ಕೃಷ್ಣ, ಕಾವೇರಿ, ಪೆನ್ನಾರ್ ನದಿಗಳ ಜೋಡಣೆಗೆ ಪ್ರಸ್ತಾವನೆ : ಡಿಕೆಶಿ

Proposal for linking Mahadayi, Godavari, Krishna, Cauvery, Pennar rivers: DK Shivakumar

ಬೆಂಗಳೂರು, ಫೆ.26 – ಮಹಾದಾಯಿ, ಗೋದಾವರಿ, ಕೃಷ್ಣ,ಕಾವೇರಿ, ಪೆನ್ನಾರ್ ನದಿಗಳ ಜೋಡಣೆಗೆ ರಾಜಸ್ಥಾನದ ಉದಯಪುರ್‌ನಲ್ಲಿ ನಡೆದ ಜಲಶಕ್ತಿ ಸಚಿವರ ಸಮ್ಮೇಳನಲ್ಲಿ ಪ್ರಸ್ತಾವನೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿ ಜೋಡಣೆಯ ವೇಳೆ ಎಲ್ಲರಿಗೂ ಅವರ ಪಾಲಿನ ನೀರಿನ ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

ಪರಿಸರದ ಕಾರಣಕ್ಕೆ ನದಿ ಜೋಡಣೆಗೆ ವಿರೋಧ ವ್ಯಕ್ತ ಪಡಿಸುವುದು ಸರಿಯಲ್ಲ, ಒಂದು ಮರಕ್ಕೆ ನಾಲ್ಕು ಮರ ನೆಡಲಾಗುವುದು. ರಸ್ತೆ, ನೀರಿನ ಯೋಜನೆಗಳಿಗೆ ಸಂಬಂಧ ಪಟ್ಟಂತೆ ವಿರೋಧ ವ್ಯಕ್ತ ಪಡಿಸುವುದು ಅನಗತ್ಯ ಎಂದು ಹೇಳಿದರು.ತುಂಗ ಭದ್ರ ನದಿಯ ಹೂಳು ತುಂಬಿ 30 ಟಿಎಂಸಿ ನಷ್ಟವಾಗುತ್ತಿದೆ.

ಸುಮಾರು 24 ಟಿಎಂಸಿ ಹೂಳನ್ನು ತೆಗೆಯಲು ಯೋಜನಾ ವೆಚ್ಚ, ತೆಗೆದ ಹೂಳನ್ನು ಎಲ್ಲಿ ಹಾಕುವುದು ಎಂಬೆಲ್ಲಾ ಚರ್ಚೆಗಳಿವೆ. ಸದ್ಯಕ್ಕೆ ಹೂಳು ತೆಗೆಯುವ ವಿಚಾರಕ್ಕೆ ಹೋಗುತ್ತಿಲ್ಲ. ಪರ್ಯಾಯವಾಗಿ ನವಿಲೇ ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂದರು .ನಮ್ಮ ಅಧಿಕಾರಿಗಳು ಪರ್ಯಾಯವಾಗಿ ಮತ್ತೊಂದು ಯೋಜನೆ ಪ್ರಸ್ತಾವನೆ ಮಾಡಿದ್ದರು. ಅದರ ಕುರಿತು ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ನಾವು ಪ್ರತ್ಯೇಕ ಸಭೆ ನಡೆಸಿದ್ದೇವೆ.

ಅಲ್ಲಿಂದಲೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಿಗೆ ಕರೆ ಮಾಡಿ ಮಾತನಾಡಿ, ಮಾರ್ಚ್ ಮೊದಲ ವಾರ ನಮ್ಮ ತಂಡ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲಿದೆ. ಸಮಯ ನೀಡಿ ಎಂದು ಕೇಳಿದ್ದೇನೆ. ಅವರು ಒಪ್ಪಿದ್ದಾರೆ. ಪರ್ಯಾಯ ಯೋಜನೆ ಏನು ಎಂದು ಸದ್ಯಕ್ಕೆ ಬಹಿರಂಗ ಪಡಿಸಲು ಸಾಧ್ಯವಿಲ್ಲ.

ಚಂದ್ರ ಬಾಬು ನಾಯ್ಡು ದೇಶದ ಹಿರಿಯ ನಾಯಕರು. ಅವರನ್ನು ನಾನೇ ಭೇಟಿ ಮಾಡುತ್ತೇನೆ ಎಂದರು. ಜಲಸಂಪನ್ಮೂಲ ಇಲಾಖೆಯಿಂದ 11,122 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಮೂರು ಸಾವಿರ ಕೋಟಿ ರೂಪಾಯಿಗಳ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಲು ಮನವಿ ಮಾಡಿದ್ದೇವೆ. ರಾಜಕೀಯ ವಿಚಾರವಾಗಿ ಏನೇ ಇರಲಿ, ಕೇಂದ್ರ ನೀರಾವರಿ ಸಚಿವರು ನ್ಯಾಯ ಸ್ಥಾನದಲ್ಲಿದ್ದುಕೊಂಡು ನಿರ್ಧಾರ ತಿಳಿಸಬೇಕಿದೆ ಎಂದರು. ನಾಲೆಗಳ ಆಧುನಿಕರಣವಾಗಬೇಕು. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೂ ನೀರು ಹರಿಯಬೇಕಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಪೆನ್ನಾರ್ ನದಿ ವಿಷಯವಾಗಿ ವಿವಾದ ಇದೆ. ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಪರಿಶೀಲನೆ ನಡೆಯುತ್ತಿದೆ. ಗೇಟ್ ತೆರೆಯಲು ಮನವಿ ಮಾಡಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕಿಂತಲೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಯಾರು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದರು.

ಕೃಷ್ಣ ನದಿಯ ವಿವಾದವಾಗಿ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್ ನೋಟಿಫಿಕೇಷನ್ ಮಾಡಿ, ಆಲಮಟ್ಟಿ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ಭೂ ಸ್ವಾದೀನಕ್ಕೆ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.ಕಳಸಾ-ಬಂಡೂರಿ ಯೋಜನೆಗೂ ಅರಣ್ಯ ಇಲಾಖೆ ಅನುಮತಿ ಬೇಕಿದೆ. ಕೇಂದ್ರ ಸಚಿವರು ಸಭೆ ನಡೆಸಿದ್ದರು.

ಈ ಮೊದಲು ಪ್ರಧಾನಿ ಭೇಟಿ ಮಾಡಿದಾಗ ಜಲಶಕ್ತಿ ಸಚಿವರಿಗೆ ಅಧಿಕಾರ ನೀಡಿರುವುದಾಗಿ ತಿಳಿಸಿದರು. ಅದರಂತೆ ಆಣೆಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು. ರಾಜ್ಯದ ಎಲ್ಲಾ ಸಂಸದರಿಗೆ ಕ್ಷೇತ್ರಗಳಿಗೆ ಸೇರಿದ ಹಾಗೂ ರಾಜ್ಯದ ಹಿತಾಸಕ್ತಿಗೆ ಸೇರಿದ ಯೋಜನೆಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಲು ಪತ್ರ ಬರೆಯಲಾಗುವುದು. ಎತ್ತಿನಹೊಳೆ ವಿಚಾರವಾಗಿಯೂ ಪ್ರಸ್ತಾವನೆ ಮಾಡಲಾಗಿದೆ ಎಂದರು.

5400 ಕೋಟಿ ವಿಚಾರದಲ್ಲೂ ತಾಂತ್ರಿಕ ಅಂಶ ಹೇಳುತ್ತಿದ್ದರೂ, ನಾವು ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆರು ಜಿಲ್ಲೆಗಳ ವ್ಯಾಪ್ತಿಗೆ ಒಳ್ಳೆ ಪಡುವ ಸಂಸದರು ಬಿಜೆಪಿಯವರೇ ಇದ್ದಾರೆ. ಅವರು ಈ ವಿಚಾರವಾಗಿ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ವ್ಯವಸಾಯಕ್ಕೆ ನಿಯಂತ್ರಣ ಮಾಡಲಾಗಿದೆ ಎಂದು ತಿಳಿಸಿದರು. ನೆರೆ ಹೊರೆಯ ರಾಜ್ಯಗಳ ನಡುವೆ ನೀರು ಕೊಡುವ ತೆಗೆದುಕೊಳ್ಳುವ ಸಂಬಂಧ ಇದೆ. ಅದರಂತೆ ಆಲಮಟ್ಟಿಯಿಂದ ಆಂಧ್ರ ಪ್ರದೇಶಕ್ಕೆ ಒಂದು ಟಿಎಂಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದೇನೆ. ನಾನೇ ಸಹಿ ಮಾಡಿದ್ದೇನೆ. ಕುಡಿಯುವ ನೀರು ಹಾಗೂ ಕೃಷಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.

RELATED ARTICLES

Latest News