Wednesday, June 25, 2025
Homeರಾಜ್ಯದೇವನಹಳ್ಳಿ ಸುತ್ತ ಭೂಸ್ವಾಧೀನ ಕೈಬಿಡದಿದ್ದರೆ ಹೋರಾಟ : ಪ್ರಕಾಶ್‌ ರೈ

ದೇವನಹಳ್ಳಿ ಸುತ್ತ ಭೂಸ್ವಾಧೀನ ಕೈಬಿಡದಿದ್ದರೆ ಹೋರಾಟ : ಪ್ರಕಾಶ್‌ ರೈ

Protest if land acquisition around Devanahalli is not abandoned: Prakash Rai

ಬೆಂಗಳೂರು,ಜೂ.25– ದೇವನಹಳ್ಳಿಯ ಸುತ್ತಮುತ್ತ ಭೂ ಸ್ವಾಧೀನವನ್ನು ಕೈಬಿಡದೇ ಇದ್ದರೆ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತಹ ಹೋರಾಟ ರೂಪಿಸಬೇಕಾಗುತ್ತದೆ ಎಂದು ಹಿರಿಯ ನಟ ಪ್ರಕಾಶ್‌ ರೈ ಎಚ್ಚರಿಕೆ ನೀಡಿದ್ದಾರೆ.

ದೇವನಹಳ್ಳಿ ಹಾಗೂ ಸುತ್ತಮುತ್ತ 13 ಗ್ರಾಮಗಳಲ್ಲಿನ ಭೂಸ್ವಾಧೀನವನ್ನು ವಿರೋಧಿಸಿ ಕಳೆದ 3 ವರ್ಷಗಳಿಂದಲೂ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ನಿನ್ನೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ 1700 ಎಕರೆ ಭೂ ಸ್ವಾಧೀನಕ್ಕೆ ಕೆಐಡಿಬಿಯಿಂದ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ ಸುಮಾರು 500 ಎಕರೆಯನ್ನು ಭೂಸ್ವಾಧೀನದಿಂದ ಕೈಬಿಡಲಾಗುವುದು. ಉಳಿದ 1500 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದಿದ್ದರು.

ಅದರ ಬೆನ್ನಲ್ಲೇ ಇಂದು ಹೋರಾಟವನ್ನು ತೀವ್ರಗೊಳಿಸಲಾಗಿದ್ದು, ಸರ್ಕಾರ ಸ್ಪಂದಿಸದೇ ಇದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ರೈತ ಸಂಘದ ಬಡಗಲಪುರ ನಾಗೇಂದ್ರ, ನಟ ಪ್ರಕಾಶ್‌ ರೈ, ಆಮ್‌ ಆದಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್‌ ಕಮರಡಿ, ಮುಖಂಡರಾದ ಬಸವರಾಜಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್‌, ಸಾಹಿತಿ ಎಸ್‌‍.ಜಿ.ಸಿದ್ಧರಾಮಯ್ಯ, ರೈತ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಮತ್ತಿತರರು ಭಾಗವಹಿಸಿದ್ದರು.

ಆರಂಭದಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, ಭೂ ಸ್ವಾಧೀನಕ್ಕೆ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಕಾಂಗ್ರೆಸ್‌‍ ಸರ್ಕಾರ ಅದನ್ನು ಮುಂದುವರೆಸಿದೆ. ಈ ಹಿಂದೆ ಭೂ ಸ್ವಾಧೀನದ ಪರಿಹಾರವಾಗಿ ಹಣದ ಬದಲಿಗೆ ಅಭಿವೃದ್ಧಿಪಡಿಸಿದ ಶೇ.50ರಷ್ಟು ಭೂಮಿ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಕಾಂಗ್ರೆಸ್‌‍ ಸರ್ಕಾರ ಅದನ್ನು ಶೇ.25ಕ್ಕೆ ಇಳಿಸಿದೆ.

ಎಲ್ಲಾ ಪಕ್ಷಗಳೂ ಅವಳಿ ಜವಳಿ ಇದ್ದಂತೆ. ಕೃಷಿ ಭೂಮಿಯ ರೈತ ವಿಚಾರದಲ್ಲಿ ಕಾಳಜಿಗಿಂತ ಕಾರ್ಪೊರೇಟ್‌ ಸಂಸ್ಥೆಯ ಮೇಲೆಯೇ ಹೆಚ್ಚಿನ ಒಲವು ಹೊಂದಿದೆ. ಸಿದ್ದರಾಮಯ್ಯ ಅವರು ವಿರೋಧಪಕ್ಷದ ನಾಯಕರಾಗಿದ್ದಾಗ ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದ್ದರು. ಬಲವಂತದ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರೈತರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಇದು ಕೇವಲ 13 ಹಳ್ಳಿಗಳ ಸಮಸ್ಯೆ ಅಲ್ಲ. ರಾಜ್ಯದ ಹೋರಾಟವಾಗಿ ಪರಿವರ್ತನೆಯಾಗಿದೆ. ಬೆಳಗಾವಿಯಿಂದ , ಚಾಮರಾಜನಗರದಿಂದ, 31 ಜಿಲ್ಲೆಗಳಿಂದಲೂ ಇಂದು ಪ್ರತಿಭಟನೆಯಲ್ಲಿ ಮುಖಂಡರು ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ಪ್ರಕಾಶ್‌ ರೈ ಮಾತನಾಡಿ, ರೈತರು ಭೂಮಿಯೊಂದಿಗಿನ ಸಂಬಂಧವನ್ನು ಬಿಡಲು ಬಯಸುವುದಿಲ್ಲ. ಕಾರ್ಖಾನೆಗಳನ್ನು ಮಾಡಿ ಏನು ಸಾಧಿಸುತ್ತೀರ. ಉದ್ಯೋಗ ಸೃಷ್ಟಿ ಎಂದು ರೈತರನ್ನು ವಾಚ್‌ಮ್ಯಾನ್‌ಗಳನ್ನಾಗಿ ಕಸ ಹೊಡೆಯಲು ಬಳಸಿಕೊಳ್ಳುತ್ತೀರ ಇದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸದಿದ್ದರೆ ನಮಗೆ ಬೇರೆ ದಾರಿ ಇಲ್ಲ. ಸಿದ್ದರಾಮಯ್ಯ ಅಧಿಕಾರದಿಂದ ತೆರಳಲೇಬೇಕು ಎಂಬ ಹೋರಾಟ ಆರಂಭಿಸಬೇಕಾಗುತ್ತದೆ. ಜನರಿಗೆ ಸ್ಪಂದಿಸುವ ಸಿದ್ದರಾಮಯ್ಯ ಅವರು ನಮ ಸಹನೆ ಕೆಣಕಬಾರದು. ನಮ ಬೇಡಿಕೆಗಳಿಗೆ ಉತ್ತರ ನೀಡುವ ಪರಿಪಾಠವನ್ನು ಬದಿಗಿಟ್ಟು ಭೂ ಸ್ವಾಧೀನವನ್ನು ಕೈ ಬಿಡಿ. ನಮ ಭೂಮಿ, ನಮ ಬದುಕು ನಮಗೆ ಉಳಿಯಬೇಕು. ಯಾವ ರೀತಿಯ ರಾಜಕೀಯ ಇದೆ, ಸರ್ವಾಧಿಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.

ಪ್ರಕಾಶ್‌ ಕಮರಡಿ ಸರ್ಕಾರದ ಸ್ಥಾನಮಾನದಲ್ಲಿದ್ದ ವ್ಯಕ್ತಿಯಾಗಿ ನಾನು ಮಾತನಾಡುತ್ತಿದ್ದೇನೆ. ಬೆಂಗಳೂರಿಗೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಿಂದ ಹಾಲು, ತರಕಾರಿ, ಹಣ್ಣು ಸರಬರಾಜಾಗುತ್ತಿದೆ. ಬೆಂಗಳೂರಿನ ಪ್ರತಿಯೊಬ್ಬ ವ್ಯಕ್ತಿಗೆ ಒಂದು ಕೆ.ಜಿ. ಹಣ್ಣು, ತರಕಾರಿಯನ್ನು ಇಲ್ಲಿನ ರೈತರು ಒದಗಿಸುತ್ತಿದ್ದಾರೆ. ಸರ್ಕಾರ ಕಾರ್ಪೊರೇಟ್‌ ಶಕ್ತಿಗಳಿಗೆ ಮಣಿಯುತ್ತಿದೆ. ರೈತರು ಒಂದು ದಿನ ಹಾಲು ಸರಬರಾಜನ್ನು ನಿಲ್ಲಿಸಿ ಒಂದು ವಾರ ಹಣ್ಣು ತರಕಾರಿಯನ್ನು ಸ್ಥಗಿತಗೊಳಿಸಿದರೆ ಸಾಕು. ಒಂದು ವರ್ಷ ಕೃಷಿ ಉತ್ಪನ್ನ ಮಾಡದೇ ಇದ್ದರೆ ಎಲ್ಲರೂ ದಾರಿಗೆ ಬರುತ್ತಾರೆ ಎಂದು ಸಲಹೆ ನೀಡಿದರು.

RELATED ARTICLES

Latest News