Thursday, July 4, 2024
Homeರಾಜಕೀಯಸಿಎಂ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ ಹಿಡಿದಿದೆ : ಆರ್‌.ಅಶೋಕ್‌

ಸಿಎಂ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ ಹಿಡಿದಿದೆ : ಆರ್‌.ಅಶೋಕ್‌

ಬೆಂಗಳೂರು,ಜೂ.13- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ ಹಿಡಿದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಇಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರ ಬಂದ ಮೇಲೆ ನಿರಂತರವಾಗಿ ಹಲ್ಲೆ ಪ್ರಕರಣಗಳು ಆಗುತ್ತಿದೆ. ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಅಂದರೆ ಹಲ್ಲೆ ನಡೆಯುತ್ತದೆ. ಮಂಗಳೂರಿನಲ್ಲಿ ಹಲ್ಲೆ ನಡೆದಿದೆ. ಚಾಕು ಇರಿತವಾಗಿದೆ. ಈ ಗಲಾಟೆಗಳು ಕಾಂಗ್ರೆಸ್‌‍ ಸರ್ಕಾರ ಬಂದ ಮೇಲೆಯೇ ಆಗುತ್ತಿವೆ ಎಂದರು.

ಭಾರತ್‌ ಮಾತಾ ಕೀ ಜೈ ಎನ್ನುವುದಕ್ಕೆ ಸಾಕ್ಷಿಗಳಿದೆ. ಡಿಕೆಶಿ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಮುಸ್ಲಿಂರ ಸರ್ಕಾರ ಅಂದಿದ್ದಾರೆ. ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಬ್ರದರ್ಸ್‌ ಅಂದರು. ನಾಳೆ ಸಭೆ ಮಾಡುತ್ತೇವೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರುತ್ತಿದ್ದೇವೆ. ಹೋರಾಟದ ರೂಪುರೇಷೆ ತೀರ್ಮಾನ ಮಾಡುತ್ತೇವೆ. ಇದೊಂದು ತಾಲಿಬಾನ್‌ ಸರ್ಕಾರ ಆಗಿದೆ. ಈ ರೀತಿ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡ ಸರ್ಕಾರ ಇದು ಎಂದು ಕಿಡಿಕಾರಿದರು.

ಅಶೋಕ್‌ ಕಿಡಿ: ನಗರದ ಅನ್ನಪೂರ್ಣೇಶ್ವರಿ ಪೊಲೀಸ್‌‍ ಠಾಣೆಗೆ ಶಾಮಿಯಾನ ಹಾಕಲು ಸೂಚನೆ ನೀಡಿರುವ ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ್‌ ಅವರ ಕ್ರಮಕ್ಕೆ ಅಶೋಕ್‌ ತೀವ್ರವಾಗಿ ಕಿಡಿಕಾರಿದ್ದಾರೆ. ಬಿ.ದಯಾನಂದ್‌ ಯಾರನ್ನು ಮೆಚ್ಚಿಸಲು ಪೊಲೀಸ್‌‍ ಠಾಣೆಗೆ ಶಾಮಿಯಾನ ಹಾಕಿದ್ದಾರೆ. ಠಾಣೆಯ 200 ಸುತ್ತಮುತ್ತ 144 ಸೆಕ್ಷನ್‌ ಹಾಕಲು ಇವರಿಗೆ ಅಧಿಕಾರವಿದೆಯೇ? ಮೊದಲು ದಯಾನಂದ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ನಾನು ಕೂಡ ಗೃಹಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಎಂಥದ್ದೇ ಪ್ರಕರಣ ನಡೆದರೂ ಠಾಣೆಗೆ ಶಾಮಿಯಾನ ಹಾಕಲು ಅಧಿಕಾರಿಗಳಿಗೆ ಸೂಚಿಸಿರಲಿಲ್ಲ. ಇದಕ್ಕೆ ಸರ್ಕಾರ ಅನುಮತಿ ನೀಡಿದೆಯೇ ಇಲ್ಲವೇ ಪೊಲೀಸರು ಸ್ವಯಂಪ್ರೇರಿತರಾಗಿ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ದಯಾನಂದ್‌ ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಸಂವಿಧಾನವೇ ಹೇಳುತ್ತದೆ. ಠಾಣೆಗೆ ಶಾಮಿಯಾನ ಹಾಕಿರುವ ಉದ್ದೇಶವೇ ದರ್ಶನ್‌ ಪ್ರಕರಣವನ್ನು ಮುಚ್ಚಿ ಹಾಕಲು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ತಮ ಪಕ್ಷದ ಪರವಾಗಿ ಪ್ರಚಾರ ನಡೆಸಿದವರನ್ನು ರಕ್ಷಣೆ ಮಾಡಲು ಹೊರಟಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ನಟ ದರ್ಶನ್‌ ಅವನ್ನು ಸಿನಿಮಾದಿಂದ ದೂರ ಇಡಬೇಕು ಎಂಬ ಚರ್ಚೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಫಿಲಂಚೇಂಬರ್‌ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸತ್ಯಾಸತ್ಯಾತೆ ಹೊರಗೆ ಬರಲಿ. ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಕೊಲೆಯಾದವನು ರೌಡಿಶೀಟರ್‌ ಅಲ್ಲ. ಯಾವುದೇ ಕ್ರಿಮಿನಲ್‌ ಚಟುವಟಿಕೆಯ ಹಿನ್ನೆಲೆಯವನ್ನಲ್ಲ. ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಇದು ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಬೇಕು. ನಮ ಮಗನಿಗೆ ಯಾರು ಗತಿ? ಎಂದು ಮೃತನ ಪತ್ನಿ ಕೇಳುತ್ತಿದ್ದಾರೆ. ಆಕೆ ಗರ್ಭಿಣಿಯಾಗಿದ್ದು, ಇಂಥ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿರುವುದು ನೋಡಿದರೆ ಕರುಳು ಕಿತ್ತುಬರುತ್ತಿದೆ ಎಂದು ವಿಷಾದಿಸಿದರು.

ಕೆಲ ಜನಪ್ರತಿನಿಧಿಗಳಿಂದ ದರ್ಶನ್‌ ಬಿಡಿ ಎಂಬ ಒತ್ತಡ ಕೇಳಿಬರುತ್ತಿದೆ. ಗೃಹ ಸಚಿವರು ಹಾಗೇನೂ ಇಲ್ಲ ಎಂದಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಬಿಡಿ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.

RELATED ARTICLES

Latest News