ಬೆಂಗಳೂರು, ಮೇ 3- 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿತ ರೈತರಿಂದ ರಾಗಿ ಖರೀದಿಸುವ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಖರೀದಿ ಕೇಂದ್ರಗಳಿಗೆ ಇನ್ನೂ ನೀಡದ ರೈತರಿಂದ ಮಾತ್ರ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 30 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.
ರಾಗಿ ಖರೀದಿ ಪ್ರಕ್ರಿಯೆಗೆ ಮಾ.1 ರಿಂದ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಮಾ.3 ರಿಂದ ಜೂನ್ 30 ರವರೆಗೆ ರಾಗಿ ಖರೀದಿಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ನೋಂದಾಯಿತ ರೈತರು ಸಂಬಂಧಪಟ್ಟ ತಾಲ್ಲೂಕುಗಳ ಖರೀದಿ ಕೇಂದ್ರಗಳಿಗೆ ರಾಗಿಯನ್ನು ನಿಯಮಾನುಸಾರ ನೀಡಬಹುದಾಗಿರುತ್ತದೆ.
2024-25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು, ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ನೋಂದಾಯಿಸಿಕೊಳ್ಳಲಾಗಿದೆ.
ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಖರೀದಿ ಅಧಿಕಾರಿಗಳು ದೇವನಹಳ್ಳಿ ತಾಲ್ಲೂಕಿನ ಎ.ಅಚ್ಯುತ (9900136687), ದೊಡ್ಡಬಳ್ಳಾಪುರ ತಾಲ್ಲೂಕಿನ ಎಚ್.ಎನ್. ನಾರಾಯಣ (9886141435), ನೆಲಮಂಗಲ ತಾಲ್ಲೂಕಿನ ವೈ.ಎಸ್.ನಾರಾಯಣ (9482991630), ಹೊಸಕೋಟೆ ತಾಲ್ಲೂಕಿನ ಶಿವಕುಮಾರ್ (9880361514) ಸಂಪರ್ಕಿಸಬಹುದಾಗಿದೆ.