ಮಂಗಳೂರು, ಮೇ 29– ಬಂಟ್ವಾಳದಲ್ಲಿ ಅಬ್ದುಲ್ ರಹೀಂಖಾನ್ ಹತ್ಯೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ್ದಾರೆ. ಪಕ್ಷದಲ್ಲಿ ನೀಡಲಾದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ನಿನ್ನೆ ಅಬ್ದುಲ್ ರಹೀಂ ಖಾನ್ ಹತ್ಯೆಯಾದ ಬೆನ್ನಲ್ಲೆ ಮುಸ್ಲಿಂ ಮುಖಂಡರು ಸಭೆ ನಡೆಸಿ ಸಾಮೂಹಿಕ ರಾಜೀನಾಮೆ ನೀಡುವ ಕುರಿತು ಚರ್ಚಿಸಿದ್ದರು. ಮುಂದುವರೆದ ಭಾಗವಾಗಿ ಇಂದು ಇಲ್ಲಿನ ಬೋಳಾರದಲ್ಲಿರುವ ಶಾದಿ ಮಹಲ್ ಹಾಲ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಪಕ್ಷದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.
ಮಾಜಿ ಮೇಯರ್ ಆಗಿರುವ ಆಶ್ರಫ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಶ್ರಫ್, ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶ್ರೀರಾಮ ಸೇನೆ, ಬಜರಂಗದಳ ಸೇರಿ ಮುಸ್ಲಿಂರನ್ನು ನಿಂದಿಸುತ್ತಿದ್ದರು. ಇದು ಸರಿಯಾಗಬೇಕು ಎಂದು ಜನ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದರು. ಈಗಲೂ ಮುಸ್ಲಿಂರ ನಿಂದನೆ ನಿಂತಿಲ್ಲ, ಎರಡು ವರ್ಷವಾದರೂ ಕಾಂಗ್ರೆಸ್ ಸರ್ಕಾರದ ಅದಕ್ಕೆ ಕಡಿವಾಣ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ನಡುವೆ ಕೇರಳದ ಆಶ್ರಫ್ ರನ್ನು ಕುಡಪಲ್ಲಿಯಲ್ಲಿ ಜನ ಸಾಮೂಹಿಕ ಗುಂಪು ಸೇರಿ ಹತ್ಯೆ ಮಾಡಿದ್ದರು. ಆಗಲೇ ಜನ ಆಕ್ರೋಶಗೊಂಡಿದ್ದರು. ಆದರೂ ನಮಗೆ ಶಾಂತಿ ಪಾಲನೆಯಾಗಬೇಕು ಎಂದು ಎಲ್ಲರನ್ನೂ ಸಮಾಧಾನ ಪಡಿಸಿ ಶವವನ್ನು ಕೇರಳಕ್ಕೆ ಕಳುಹಿಸಲಾಗಿತ್ತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ ಬಂದು ಸಭೆ ನಡೆಸಿದಾಗ ನಾವು ನಮ್ಮ ಆಕ್ರೋಶವನ್ನು ತಿಳಿಸಿದ್ದೇವು. ಇನ್ನೂ ಮುಂದೆ ಈ ರೀತಿಯಾಗಲು ಬಿಡುವುದಿಲ್ಲ ಎಂದು ಸಚಿವರಿಬ್ಬರೂ ಭರವಸೆ ನೀಡಿದ್ದರು.
ಸಚಿವರು ಬೆಂಗಳೂರಿಗೆ ಹೋದ ಬೆನ್ನಲ್ಲೆ ಇಲ್ಲಿ ಶಾಸಕ ಭರತ್ ಶೆಟ್ಟಿ ಹಾಗೂ ಇತರರು ಮುಸ್ಲಿಂರ ವಿರುದ್ಧ ಪ್ರಚೋದನಕಾರಿ ಭಾಷಣ ಆರಂಭಿಸಿದರು. ಅವಹೇಳನಕಾರಿ ಭಾಷೆ ಬಳಸಿದರು ಎಂದು ಆಶ್ರಫ್ ಅಸಮಧಾನ ವ್ಯಕ್ತ ಪಡಿಸಿದರು.
ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ ಬಂದ್ ವೇಳೆ ಗಲಭೆಗಳಾಗಿ, ಮೂತ್ನಾಲ್ಕು ಮಂದಿಗೆ ಚೂರಿ ಇರಿತಗಳಾಗಿವೆ. ಕಣ್ಣೂರಿನ ನೌಶಾದ್ ಹೊಟ್ಟೆಗೆ ದೊಡ್ಡದೊಂದು ಚೂರಿ ಇಳಿದು, ಅಲ್ಲಿಯೆ ಉಳಿದಿತ್ತು. ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಹೊರ ತೆಗೆಯಬೇಕಾಯಿತು ಎಂದರು.
ಸುಹಾಸ್ ಶೆಟ್ಟಿ ಮತ್ತು ಕೇರಳದ ಆಶ್ರಫ್ ಹತ್ಯೆಗೆ ಬಹಳ ವ್ಯತ್ಯಾಸವಿದೆ. ಆಶ್ರಫ್ ದುಡಿದು ತಿನ್ನಲೆಂದೆ ಕೇರಳದಿಂದ ಮಂಗಳೂರಿಗೆ ಬಂದಿದ್ದ. ಆತನಿಗೆ ಮಂಗಳೂರಿನ ಬಗ್ಗೆ ಗೊತ್ತಿರಲಿಲ್ಲ. ಯಾವ ರೌಡಿ ಚಟುವಟಿಕೆಯಲ್ಲೂ ಭಾಗಿಯಾಗಿರಲಿಲ್ಲ. ಈ ಕೊಲೆಯ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡಿ, ಘಟನೆಗೆ ಕಾರಣವಾದವರನ್ನು ಪೊಲೀಸರು ಬಂಧಿಸಿಲ್ಲ ಎಂದು ಹೇಳಿ ಬರುವಾಗಲೇ ಇಲ್ಲಿ ಸುಹಾಶ್ ಶೆಟ್ಟಿ ಹತ್ಯೆಯಾಗಿತ್ತು.
ಸುಹಾಸ್ ಶೆಟ್ಟಿ ಕೊಲೆ, ಮತ್ತೊಂದು ಹತ್ಯೆಯ ಪ್ರತಿಕಾರವಾಗಿತ್ತು. ಅದು ಸಾಮೂಹಿಕ ಗುಂಪಿನಿಂದ ನಡೆದ ಕೊಲೆಯಾಗಿರಲಿಲ್ಲ. ರೌಡಿ ಚಟುವಟಿಕೆಯಲ್ಲಿದ್ದವರು ಪರಸ್ಪರ ಹೊಡೆದಾಡಿಕೊಳ್ಳುವುದು ಸಾಮಾನ್ಯ. ಆ ರೀತಿ ಘಟನೆಯಲ್ಲಿ ಮುಸ್ಲಿಂ ರೌಡಿ ಸತ್ತರೂ ನಾವು ಬೆಂಬಲ ನೀಡುವುದಿಲ್ಲ. ಆದರೆ ಕೇರಳದ ಆಶ್ರಫ್ ಹಾಗೂ ನಿನ್ನೆ ಅಬ್ದುಲ್ಹೀಂಖಾನ್ ಯಾವುದೇ ರೌಡಿ ಚಟುವಟಿಕೆಯಲ್ಲಿ ಇರಲಿಲ್ಲ, ಅಂತಹವರ ಕೊಲೆಯಾದಾಗ ಸಮುದಾಯ ಸಿಟ್ಟಾಗಿದೆ. ನಮ್ಮನ್ನು ಪ್ರಶ್ನಿಸಲಾರಂಭಿಸಿದೆ ಎಂದರು.
ಇನ್ನೂ ಮುಂದೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ, ಪಕ್ಷದಲ್ಲಿ ನೀಡಲಾಗಿರುವ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುತ್ತೇವೆ ಎಂದರು. ವೈಯಕ್ತಿಕ ವಿಚಾರಕ್ಕೆ ಅಬ್ದುಲ್ ರಹೀಂಖಾನ್ ಕೊಲೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿರುವುದು ಖಂಡನೀಯ. ಅವರಿಗೆ ಯಾರು ಮಾಹಿತಿ ನೀಡಿದರು.
ಯಾವ ಆಧಾರದ ಮೇಲೆ ಆ ರೀತಿ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಗೃಹ ಸಚಿವರು ಮಾತನಾಡುವಾಗ ಸ್ಥಳೀಯ ಮುಖಂಡರಿಂದ ವಾಸ್ತವಾಂಶಗಳನ್ನು ಕೇಳಿ ತಿಳಿದುಕೊಳ್ಳಬೇಕು. ರಹೀಂಖಾನ್ ಶವಯಾತ್ರೆಯಲ್ಲಿ ಹಿಂದೆಂದೂ ಸೇರದಷ್ಟು ಜನ ಸೇರಿದ್ದರು. ಆದರೂ ಶಾಂತಿ ಪಾಲನೆ ಮಾಡಿದ್ದೇವೆ. ದಿನೇಶ್ ಗುಂಡೂರಾವ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಅವರು ಜಿಲ್ಲೆಗೆ ಬಂದಾಗ ನಾವು ಪ್ರಶ್ನಿಸುತ್ತೇವೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ನಾಯಕರು ದೂರವಾಗುವುದರಿಂದ ಎಸ್ಡಿಪಿಐಗೆ ಅನುಕೂಲವಾಗಿದೆ ಎಂಬುದಾದರೆ ಅದಕ್ಕೆ ನಾವು ಜವಾಬ್ದಾರರಲ್ಲ, ಕಾಂಗ್ರೆಸ್ ನಾಯಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.