Wednesday, June 11, 2025
Homeರಾಜ್ಯರಾಜ್ಯದಲ್ಲಿ ಇನ್ನೂ ಒಂದು ವಾರ ವ್ಯಾಪಕ ಮಳೆ ಸಾಧ್ಯತೆ

ರಾಜ್ಯದಲ್ಲಿ ಇನ್ನೂ ಒಂದು ವಾರ ವ್ಯಾಪಕ ಮಳೆ ಸಾಧ್ಯತೆ

Rain likely for another week in the state

ಬೆಂಗಳೂರು, ಮೇ 26-ನೈರುತ್ಯ ಮುಂಗಾರು ಮಳೆ ಆರಂಭದಲ್ಲೇ ಅಬ್ಬರಿಸಿ ಆರ್ಭಟಿಸುತ್ತಿದ್ದು, ಈ ವಾರಾಂತ್ಯದವರೆಗೂ ಮಳೆ ಮುಂದುವೆಯುವ ಮುನ್ಸೂಚನೆಗಳಿವೆ. ಮೇ 29ರವರೆಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಗಳಿವೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಗಳಿದ್ದು, ಮೇ 29ರ ವರೆಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಭಾರಿ ಮಳೆಯಾಗುವ ಜಿಲ್ಲೆಗಳಲ್ಲಿ ಅಗತ್ಯ ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬೆಳಗಾವಿ,ಧಾರವಾಡ, ವಿಜಯಪುರ, ಬೀದರ್‌, ಕಲಬುರಗಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಹಾಗೂ ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ಹಾಸನ ಜಿಲ್ಲೆಗಳಿಗೆ ಮೇ 29ರ ವರೆಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕೆಲವೆಡೆ ಗಂಟೆಗೆ 40-50 ಕಿ.ಮೀ.ವೇಗದ ಬಿರುಗಾಳಿ, ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಕ್ಕೆ ಹತ್ತು ದಿನ ಮೊದಲೇ ಪ್ರವೇಶ ಮಾಡಿದ ನೈರುತ್ಯ ಮುಂಗಾರು ರಾಜ್ಯಾದ್ಯಂತ ವ್ಯಾಪಿಸಿದೆ. ಅಲ್ಲದೆ, ಕರಾವಳಿ, ಮಲೆನಾಡು ಭಾಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಆಗಾಗ್ಗೆ ಜಿಟಿ ಜಿಟಿ ಮ=ಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ದೈನಂದಿನ ಕೆಲಸ-ಕಾರ್ಯಗಳಿಗೆ ಹೋಗುವವರಿಗೆ ತೊಂದರೆಯಾಯಿತು. ಮಳೆಯಿಂದ ರಕ್ಷಣೆ ಪಡೆಯಲು ಜನರು ಜರ್ಕಿನ್‌, ರೈನ್‌ ಕೋಟ್‌,ಕೊಡೆಗಳ ಮೊರೆ ಹೋಗಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಶೀತಗಾಳಿ ಜೊತೆಗೆ ಆಗಾಗ್ಗೆ ಬೀಳುವ ತುಂತುರು ಮಳೆಯಿಂದ ಬೇಸಿಗೆಯ ಬಿರು ಬಿಸಿಲಿರಬೇಕಾಗಿದ್ದ ಮೇನಲ್ಲಿ ತಂಪಾದ ವಾತಾವರಣ ಉಂಟಾಗಿ ಚಳಿಯ ಅನುಭವವಾಗುತ್ತಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಅತಿಯಾದ ಮಳೆಯಿಂದ ಮಲೆನಾಡು ಭಾಗದ ಕೆಲವೆಡೆ ಭೂ ಕುಸಿತವಾಗಿದೆ.

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮೇಲೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕೆಲವೆಡೆ ಭಾರಿ ಮಳೆಯಾಗುತ್ತಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕೊಡಗಿನ ಬಾಗಮಂಡಲದಲ್ಲಿ 23 ಸೆ.ಮೀ., ಕೊಟ್ಟಿಗೇಹಾರ 22 ಸೆ.ಮೀ., ಮುಲ್ಕಿ 20 ಸೆ.ಮೀ. ನಷ್ಟು ಭಾರಿ ಮಳೆಯಾಗಿದೆ.ನಾಪೋಕ್ಲು 16 ಸೆ.ಮೀ., ಸುಳ್ಯ, ಧರ್ಮಸ್ಥಳದಲ್ಲಿ ತಲಾ 13 ಸೆ.ಮೀ., ಉಪ್ಪಿನಂಗಡಿ, ಆಗುಂಬೆ, ಸೋಮವಾರಪೇಟೆ, ಗೇರುಸೊಪ್ಪದಲ್ಲಿ 12 ಸೆ.ಮೀ., ಪೊನ್ನಂಪೇಟೆ 11 ಸೆ.ಮೀ., ಮಾಣಿ 10 ಸೆ.ಮೀ., ಕಳಸ, ನಿಪ್ಪಾಣಿ 9 ಸೆ.ಮೀ. ನಷ್ಟು ಮಳೆಯಾಗಿದೆ.

ರಾಜ್ಯಾದ್ಯಂತ ಮಳೆಯಗಾಗಿದ್ದು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಬೆಂಗಳೂರು ಸುತ್ತಮುತ್ತಲೂ ಮೋಡ ಕವಿದ ವಾತಾವರಣ ಇರಲಿದ್ದು, ಮೇ 28ರ ವರೆಗೆ ಸಾಧಾರಣ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ.

RELATED ARTICLES

Latest News