ಬೆಂಗಳೂರು, ಜು.7-ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನೈರುತ್ಯ ಮುಂಗಾರು ಕ್ರಿಯಾಶೀಲವಾಗಿದ್ದು, ನಿರಂತರ ಮಳೆಯಿಂದ ಅತಿವೃಷ್ಟಿಯಾಗಿದೆ. ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಅಭಾವ ಉಂಟಾಗಿ ಮುಂಗಾರು ಹಂಗಾಮಿನ ಬಿತ್ತನೆಗೆ ಹಿನ್ನಡೆಯಾಗಿದೆ.
ಬಿತ್ತನೆಗೆ ಜಮೀನು ಸಿದ್ಧಗೊಳಿಸಲು ಹಾಗೂ ಬಿತ್ತನೆ ಮಾಡಲು ರೈತರಿಗೆ ಮಳೆಯಾಗದೇ ತೇವಾಂಶದ ಕೊರತೆ ಉಂಟಾಗಿದೆ. ಮೇನಲ್ಲಿ ಉತ್ತಮ ಮಳೆಯಾಗಿ ರೈತರಲ್ಲಿ ಉತ್ಸಾಹ ಮೂಡಿಸಿತ್ತು. ಜೂನ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಜುಲೈ ತಿಂಗಳ ಮೊದಲ ವಾರದಲ್ಲೂ ಮಳೆ ಅಭಾವ ಮುಂದುವರೆದಿದೆ.
ಮುಂಗಾರು ಹಂಗಾಮಿನ ಬಿತ್ತನೆ ಕಾಲದಲ್ಲೇ ಮಳೆ ಕೈಕೊಟ್ಟಿದ್ದು, ಬಿತ್ತಿದ ಬೆಳೆಗಳು ಒಣಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆ ಸತತ ಮಳೆ ಕೊರತೆಯಿಂದಾಗಿ ಬರದ ಛಾಯೆ ಮತ್ತೆ ಕಾಡುವ ಭೀತಿ ರೈತ ಸಮುದಾಯದಲ್ಲಿ ಕಂಡುಬರುತ್ತಿದೆ.
ಸತತ ನಾಲೈದು ವಾರಗಳಿಂದ ಒಣಹವೆ ರಾಜ್ಯದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕಂಡುಬಂದಿದೆ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೂ ಆಗಾಗ್ಗೆ ಬೀಸುವ ಮೇಲ್ಫ್ ಗಾಳಿಯಿಂದ ತೇವಾಂಶದಲ್ಲೂ ಕುಸಿತವಾಗಿದೆ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ಪ್ರಕಾರ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಉತ್ತರ ಹಾಗೂ ದಕ್ಷಿಣ ಒಳನಾಡಿ ಹಲವು ಜಿಲ್ಲೆಗಳಲ್ಲಿ ನಿರಂತರ ಒಣ ಹವೆ ಮುಂದುವರೆದಿದ್ದು, ಮಳೆ ಕೊರತೆ ತೀವ್ರವಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು. ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಭಾಗದಲ್ಲಿ 8.1 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.24ರಷ್ಟು ಮಳೆ ಕೊರತೆಯಾಗಿರುವುದು ಕಂಡು ಬಂದಿದೆ.
ಅದೇ ರೀತಿ ಉತ್ತರ ಒಳನಾಡಿನ ಬಳ್ಳಾರಿ, ಕೊಪ್ಪಳ, ವಿಜಯನಗರ ಬೀದರ್, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ 19.6 ಮಿ.ಮೀ.ನಷ್ಟು ಮಳೆಯಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಬಿದ್ದಿರುವ ಹೆಚ್ಚಿನ ಮಳೆಯಿಂದಾಗಿ ವಾಡಿಕೆಗಿಂತ ಶೇ.11ರಷ್ಟು ಅಧಿಕ ಮಳೆಯಾಗಿದೆ. ಇನ್ನು ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
- 73.72 ಲಕ್ಷ ರೂ ವಂಚಿಸಿದ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಮಹಿಳೆ..!
- ಬ್ರಿಕ್ಸ್ ರಾಷ್ಟ್ರಗಳ ಜೊತೆ ನಿಲ್ಲುವ ದೇಶಗಳಿಗೆ ಟ್ರಂಪ್ ‘ಟ್ಯಾಕ್ಸ್ ವಾರ್ನಿಂಗ್’
- ಆಪರೇಷನ್ ಸಿಂಧೂರ ವೇಳೆ ರಫೇಲ್ ಯುದ್ಧ ವಿಮಾನಗಳ ಬಗ್ಗೆ ಅಪಪ್ರಚಾರ ಮಾಡಿದ ನರಿಬುಬುದ್ದಿಯ ಚೀನಾ
- ಸದ್ಯಕ್ಕೆ ಗ್ರೇಟರ್ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆ ಇಲ್ಲ : ಡಿಕೆಶಿ
- ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ಮುಂದಾದ ಸರ್ಕಾರ