Friday, June 27, 2025
Homeರಾಜ್ಯರಾಜಣ್ಣ ಹೇಳಿಕೆ ನಿರ್ಲಕ್ಷಿಸುವುದೇ ಸೂಕ್ತ : ಸಿಎಂ

ರಾಜಣ್ಣ ಹೇಳಿಕೆ ನಿರ್ಲಕ್ಷಿಸುವುದೇ ಸೂಕ್ತ : ಸಿಎಂ

Rajanna's statement should be ignored: Seeme

ಬೆಂಗಳೂರು,ಜೂ.27- ರಾಜಕೀಯ ಬದಲಾವಣೆಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನೀಡಿರುವ ಹೇಳಿಕೆಯನ್ನು ನಿರ್ಲಕ್ಷಿಸುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್‌ನಲ್ಲಿ ರಾಜಕೀಯ ಬೆಳವಣಿಗೆಯಾಗಲಿದೆ ಎಂದು ರಾಜಣ್ಣ ಹೇಳಿದ್ದಾರೆ. ಆದರೆ ಇದೇ ರೀತಿಯ ಬೆಳವಣಿಗೆ ಎಂದು ಹೇಳಿಲ್ಲ. ಅದನ್ನು ಮಾಧ್ಯಮಗಳು ತಮಗೆ ಬೇಕಾದಂತೆ ಊಹೆ ಮಾಡಿಕೊಂಡು ವರದಿ ಮಾಡಿವೆ ಎಂದರು.

ಕಾಂಗ್ರೆಸ್‌‍ನಲ್ಲಿ ಯಾವುದೇ ಆಂತರಿಕ ಬಿಕ್ಕಟ್ಟಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ. ಪಕ್ಷದಲ್ಲಿ ಸಮಸ್ಯೆ ಇದೆ ಎಂಬ ಕಾರಣಕ್ಕಾಗಿ ಅವರು ಬರುತ್ತಿದ್ದಾರೆ ಎಂಬ ವ್ಯಾಖ್ಯಾನ ಸರಿಯಲ್ಲ ಎಂದು ಹೇಳಿದರು.

ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷಿಸುವುದು ಸೂಕ್ತ. ಸಣ್ಣಪುಟ್ಟ ಬದಲಾವಣೆಯಾಗಲಿದೆ ಎಂದು ಹೇಳಿರುವುದನ್ನು ಹೀಗೆಯೇ ವರದಿ ಮಾಡಬೇಕೆಂದು ಹೇಳಲು ನಾನು ಪತ್ರಕರ್ತ ಅಲ್ಲ ಎಂದರು.
ಮಲೈಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವಿನ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡರ ಗುಣಗಾನ :
ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳ ದಕ್ಷ ಆಡಳಿತಗಾರರಾಗಿದ್ದರು. ಅವರ 516 ನೇ ಜಯಂತಿಯನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಈ ಮೊದಲು ತಾವು ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮಿಯವರ ಜೊತೆ ಚರ್ಚಿಸಿ ಕೆಂಪೇಗೌಡರ ಜನದಿನವನ್ನು ನಿಗದಿಪಡಿಸಿದ್ದು, ಅಂದಿನಿಂದ ಜಯಂತಿ ನಿಯಮಿತವಾಗಿ ಆಚರಣೆಯಾಗುತ್ತಿದೆ ಎಂದರು.

ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅಡಿಪಾಯ ಹಾಕಿದ್ದು ಕೆಂಪೇಗೌಡರು. ವೃತ್ತಿ ಆಧಾರಿತವಾಗಿ ಬಳೆಪೇಟೆ, ಚಿಕ್ಕಪೇಟೆ, ನಗರ್ತಪೇಟೆ ಸೇರಿದಂತೆ ಹಲವಾರು ಪ್ರದೇಶಗಳನ್ನು ನಿರ್ಮಿಸಿದರು. ನಗರದ 4 ದಿಕ್ಕುಗಳಲ್ಲೂ ಗೋಪುರ ನಿರ್ಮಿಸಿ ಬೆಂಗಳೂರಿನ ವಿಸ್ತರಣೆಗೆ ಬುನಾದಿ ಹಾಕಿದರು ಎಂದು ಹೇಳಿದರು.

ಅಂದಿನ ದಿನಗಳಲ್ಲೇ ಬೆಂಗಳೂರಿನ ಕಲ್ಪನೆ ಹಾಗೂ ಆಡಳಿತದ ಬಗ್ಗೆ ಅವರಿಗೆ ದೂರದೃಷ್ಟಿ ಇತ್ತು. ಕೆಂಪೇಗೌಡರ ಕನಸಿನಂತೆಯೇ ನಗರವನ್ನು ಅಭಿವೃದ್ಧಿಪಡಿಸಲು ತಮ ಸರ್ಕಾರ ಬದ್ಧವಾಗಿದೆ. ಅವರ ಆಡಳಿತ ನಮಗೆ ಮಾದರಿ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಅನೇಕ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News