ಬೆಂಗಳೂರು, ಮೇ 5-ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 27 ನೇ ವಾರ್ಷಿಕ ಘಟಿಕೋತ್ಸವ ನಾಳೆ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಗಣ್ಯರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ಅವರು, ಘಟಿಕೋತ್ಸವದಲ್ಲಿ ಡಾ.ಹೊಂಬೇಗೌಡ ಶರತ್ಚಂದ್ರ, ಡಾ.ಗಿರೀಶ್ ರಾವ್ ಹಾಗೂ ಡಾ.ಜಿ.ಟಿ.ಸುಭಾಸ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ ಎಂದರು.
ನಾಳೆ ಬೆಳಿಗ್ಗೆ 11.30 ಗಂಟೆಗೆ ಪ್ರಾರಂಭವಾಗುವ ಘಟಿಕೋತ್ಸವದ ಅಧ್ಯಕ್ಷತೆಯನ್ನ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಆರ್. ಪಾಟೀಲ್, ಅಜೀಂ ಪ್ರೇಮ್ಜಿ ಫೌಂಡೇಶನ್ ಅಧ್ಯಕ್ಷ ಉದ್ಯಮಿ ಅಜೀಂ ಪ್ರೇಮ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಚಿನ್ನದ ಪದಕ: ಬೆಂಗಳೂರಿನ ಪಿಇಎಸ್ ಫಾರ್ಮಸಿ ಕಾಲೇಜಿನ ಡಾ.ಗಿರೀಶ್ ಬಿ.ಎಸ್.ಅವರಿಗೆ 6 ಚಿನ್ನದ ಪದಕಗಳು, ಉಜಿರೆಯ ಡಿ.ಎಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ. ಗನ್ಯಾಶ್ರೀ ಅವರಿಗೆ 4 ಚಿನ್ನದ ಪದಕಗಳು, ಶಿವಮೊಗ್ಗದ ಶರಾವತಿ ದಂತ ಕಾಲೇಜಿನ ಡಾ. ಪ್ರಕೃತಿ ಸಿ ಪಟೇಲ್ ಅವರಿಗೆ 3 ಚಿನ್ನದ ಪದಕಗಳು ಹಾಗೂ 4 ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಅಲೀನ ಜೋಸ್ ಅವರಿಗೆ 3 ಚಿನ್ನದ ಪದಕಗಳು, ಡಾ.ನಮಿತಾ ಅವರಿಗೆ 2 ಚಿನ್ನದ ಪದಕಗಳು ಮತ್ತು 2 ನಗದು ಬಹುಮಾನಗಳು, ಹರ್ಷಿತಾ ಎಂ., ಅಶ್ಮಿತಾ ಶ್ರೇಷ್ಠ, ರಾಚೆಲ್ ಮೋರೆನ್ ಅವರಿಗೆ ತಲಾ 2 ಚಿನ್ನದ ಪದಕಗಳನ್ನು ನೀಡಲಾಗುವುದು. ಒಟ್ಟು 93 ವಿದ್ಯಾರ್ಥಿಗಳು 109 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಚಿನ್ನದ ಪದಕವು 2 2ಕ್ಯಾರೆಟ್ ಬಂಗಾರವುಳ್ಳ 5 ಗ್ರಾಂ ತೂಕ ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.
ಒಟ್ಟು 63,982 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 82 ಪಿಎಚ್ ಡಿ.265 ಸೂಪರ್ ಸ್ಪೆಶಾಲಿಟಿ, 8,588 ಸ್ನಾತಕೋತ್ತರ ಪದವಿ, 6 ಸ್ನಾತಕೋತ್ತರ ಡಿಪ್ಲೊಮಾ ಪದವಿ, 515 ಫೆಲೋಷಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್, 54,517 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿಶ್ವವಿದ್ಯಾನಿಲಯದ ಒಟ್ಟಾರೆ ಫಲಿತಾಂಶ ಶೇ.87.49 ರಷ್ಟಾಗಿದೆ ಎಂದರು.ಶೇ.30ರಷ್ಟು ಕಾಮಗಾರಿ ಪೂರ್ಣ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು 2007ರ ಗೆಜೆಟ್ನ ಪ್ರಕಾರ ರಾಮನಗರದಲ್ಲಿ ಸ್ಥಾಪಿಸಲಾಗುತ್ತಿದೆ.
ಸಾಕಷ್ಟು ಅಡೆತಡೆಗಳ ಬಳಿಕ ಮತ್ತೆ ಈಗ ಕಾಮಗಾರಿ ಆರಂಭವಾಗಿದ್ದು, ಶೇ.30ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ರಾಮನಗರದ ಅರ್ಚಕರಹಳ್ಳಿಯಲ್ಲಿ 215 ಎಕರೆ ಪ್ರದೇಶದಲ್ಲಿ ವಿವಿಯ ಕಾಮಗಾರಿ ನಡೆಯುತ್ತಿದೆ. 2026ರ ಮಾರ್ಚ್ 26ರ ವೇಳೆಗೆ ಮೆಡಿಕಲ್ ಕಾಲೇಜು ಹಾಗೂ ಆಡಳಿತ ಮಂಡಳಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂಬ ಮಾಹಿತಿ ನೀಡಲಾಗಿದೆ.
600 ಕೋಟಿ ರೂ. ಅನುದಾನದಲ್ಲಿ ಈಗಾಗಲೇ 300 ಕೋಟಿ ರೂ.ನೀಡಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.ಕಾಮಗಾರಿ ಪೂರ್ಣಗೊಂಡ ಬಳಿಕ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯವನ್ನು ರಾಮನಗರಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.