ನವದೆಹಲಿ,ಏ.12- ಮುಂಬೈ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಉಗ್ರ ಶಹಪೂರ್ ಹುಸೇನ್ ರಾಣಾ ವಿಚಾರಣೆ ವೇಳೆ ಪ್ರತಿ ಇಂಚಿನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು 12 ಎನ್ ಬಿಎ ಅಧಿಕಾರಿಗಳಿಗೆ ಮಾತ್ರ ಈ ಕೊಠಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ ಪ್ರಕರಣ ಆರೋಪಿಗೆ ನೆಲದ ಮೇಲೆ ಹಾಸಿಗೆ ಹಾಸಲಾಗಿದೆ. ಸೆಲ್ ಒಳಗಡೆಯೇ ಸ್ನಾನ ಗೃಹ ಮತ್ತು ಶೌಚಾಲಯವಿದೆ. ಊಟ, ಕುಡಿಯುವ ನೀರು, ವೈದ್ಯಕೀಯ ಸರಬರಾಜು ಎಲ್ಲವನ್ನೂ ಒಳಗಡೆಗೆ ತಲುಪಿಸಲಾಗುತ್ತದೆ.
ಡ್ಯುಯಲ್ ಕ್ಯಾಮೆರಾ ಕಣ್ಣಾವಲಿನಲ್ಲಿ ಬಂಧಿಯಾಗಿರುವ ಕೊಠಡಿಯಲ್ಲೇ ವಿಚಾರಣೆ ನಡೆಯಲಿದೆ. ಎಂಟು ಕೇಂದ್ರ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕೋರಿವೆ.
ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆ ತಂದ ನಂತರ ರಾಣಾನನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್ 18 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿದ ಬಳಿಕ ರಾಣಾನನ್ನು ಈ ವಿಶೇಷ ಸೆಲ್ನಲ್ಲಿ ಬಂಧಿಸಿ ಇಡಲಾಗಿದೆ.
ಎನ್ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14/114 ಅಡಿ ಅಳತೆಯ ಕೋಣೆಗೆ ಸಿಸಿಟಿವಿ ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.
ರಾಣಾ ಆಗಮನದ ನಂತರ ಎನ್ಐಎ ಪ್ರಧಾನ ಕಚೇರಿ ಕೋಟೆಯಾಗಿ ಬದಲಾಗಿದೆ. ಹೆಚ್ಚುವರಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದೆ. ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.