ಲಕ್ನೋ, ನ. 10- ರಾಮ ಇದ್ದ ಜಾಗದಲ್ಲಿ ರಾವಣ ಇರಲೇಬೇಕು. ಹೀಗಾಗಿ ಶ್ರೀ ರಾಮಮಂದಿರ ಸ್ಥಾಪನೆಯಾಗಿರುವ ಅಯೋಧ್ಯೆಯಲ್ಲಿ ರಾವಣನ ಪ್ರತಿಮೆ ನಿರ್ಮಾಣವಾಗಲಿದೆ.
ಅಯೋಧ್ಯೆಯಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಭವ್ಯ ರಾಮಾಯಣ ಉದ್ಯಾನದಲ್ಲಿ 25 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ತಿಳಿದುಬಂದಿದೆ.
ಈ ಪ್ರತಿಮೆಯು ಭಗವಾನ್ ರಾಮ ಮತ್ತು ರಾವಣನ ನಡುವಿನ ಯುದ್ಧವನ್ನು ಚಿತ್ರಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಪ್ತಾರ್ ಘಾಟ್ ಬಳಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಮತ್ತೊಂದು ಪ್ರಮುಖ ಆಕರ್ಷಣೆ ರಾಮ ದರ್ಬಾರ್ ಆಗಿದ್ದು, ಇದರಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರ ಪ್ರತಿಮೆಗಳಿವೆ. ರಾಮಾಯಣದ ಪ್ರಮುಖ ಕ್ಷಣಗಳ ಆಧ್ಯಾತ್ಮಿಕ ಅನುಭವವನ್ನು ಜನರಿಗೆ ಒದಗಿಸುವುದು ಇದರ ಉದ್ದೇಶವಾಗಿದೆ. ಹೀಗಾಗಿ ರಾಮ-ರಾವಣ ಯುದ್ಧದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಲಂಕಾಸುರನ ಪ್ರತಿಮೆ ಸ್ಥಾಪಿಸಲಾಗುತ್ತಿದೆ.
