Saturday, September 21, 2024
Homeರಾಷ್ಟ್ರೀಯ | Nationalಕೃತಕ ಬುದ್ಧಿಮತ್ತೆ (AI) ಜಾಗತಿಕ ಆರ್ಥಿಕತೆಗೆ ಹೊಸ ಸವಾಲು : RBI

ಕೃತಕ ಬುದ್ಧಿಮತ್ತೆ (AI) ಜಾಗತಿಕ ಆರ್ಥಿಕತೆಗೆ ಹೊಸ ಸವಾಲು : RBI

ಬೆಂಗಳೂರು,ಆ.8- ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಿಂದಾಗಿ ಎದುರಾಗುವ ಜಾಗತಿಕ ಆರ್ಥಿಕ ಸವಾಲುಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಸತತ 9 ಅವಧಿಯಲ್ಲೂ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ನಿರ್ಧಾರ ಕೈಗೊಂಡಿದ್ದು, ಬ್ಯಾಂಕಿಂಗ್ ಸೇವೆಗಳ ಸುಧಾರಣೆ, ಅನಧಿಕೃತ ಸಾಲದ ವಹಿವಾಟುಗಳ ಮೇಲೆ ನಿಗಾವಣೆ ಹಾಗೂ ಡಿಜಿಟಲ್ ಆರ್ಥಿಕತೆಯ ಉತ್ತೇಜನಕ್ಕೆ ಗಮನಾರ್ಹ ಕ್ರಮಗಳನ್ನು ಘೋಷಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ರೆಪೋ ದರವನ್ನು ಶೇ.6.5 ಕ್ಕೆ ಹೆಚ್ಚಿಸಲಾಯಿತು. ಅನಂತರ ಆರ್ಥಿಕತೆ ಸುಧಾರಣೆಯ ಹೊರತಾಗಿಯೂ ರೆಪೋ ದರವನ್ನು ಬದಲಾಯಿಸದೇ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. 250 ಮೂಲ ಅಂಶಗಳ ಆಧಾರದ ಮೇಲೆ 2022 ರ ಮೇ ಯಿಂದ ಈವರೆಗೂ ಸತತ 9 ದ್ವೈವಾರ್ಷಿಕ ಸಭೆಗಳಲ್ಲಿ ರೆಪೆಪೋ ದರವನ್ನು ಚರ್ಚಿಸಲಾಗಿದೆ.

ಆದರೆ ಯಾವುದೇ ಬದಲಾವಣೆಯ ನಿರ್ಧಾರ ಕೈಗೊಂಡಿಲ್ಲ. ಕಳೆದ ವರ್ಷದ ಏಪ್ರಿಲ್‍ನಲ್ಲಿ ರೇಪೋ ದರವನ್ನು ಸ್ಥಿರೀಕರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‍ಬಿಐನ ಮಹತ್ವದ ನಿರ್ಧಾರದಿಂದಾಗಿ ಬ್ಯಾಂಕ್ ಬಡ್ಡಿ ದರಗಳು ಯಥಾಸ್ಥಿತಿಯಲ್ಲೇ ಮುಂದುವರೆಯಲಿವೆ. ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳವಣಿಗೆಯ ಅಂದಾಜನ್ನು 7.2 ದರದಲ್ಲಿ ಕಾಯ್ದಿರಿಸಲಾಗಿದೆ. ಹಣದುಬ್ಬರ ವಿಸ್ತೃತ ವಲಯದಲ್ಲಿ ತಗ್ಗುವ ಅಂದಾಜುಗಳಿವೆ ಎಂದು ವಿತ್ತ ನಿರ್ವಹಣಾ ಸಮಿತಿಯ ದ್ವೆ ವಾರ್ಷಿಕ ಸಭೆಯ ಬಳಿಕ ಆರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್ ವಿಶ್ಲೇಷಿಸಿದ್ದಾರೆ.

ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ ಹಣದುಬ್ಬರ ಇಳಿಮುಖವಾಗುವ ನಿರೀಕ್ಷೆಯಿದೆ. ಆದರೆ ಆಹಾರ ವಲಯದ ಬೆಲೆ ಏರಿಕೆ ಮೊಂಡಾಟವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕತೆಯ ಹೊರನೋಟ ಸ್ಥಿರವಾಗಿರಲಿದೆ. ಭೌಗೋಳಿಕ, ರಾಜಕೀಯ ಸಂಘರ್ಷ ತಹಬಂದಿಗೆ ಬಂದರೆ ವಿಸ್ತರಣೆಗೊಳ್ಳುವ ಅವಕಾಶಗಳಿವೆ ಎಂದು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆ -ಎಐ ಹೊಸತಂತ್ರಜ್ಞಾನ ಜಾಗತಿಕ ಆರ್ಥಿಕತೆಗೆ ಹೊಸ ಸವಾಲುಗಳನ್ನು ತಂದೊಡ್ಡಲಿದೆ ಎಂಬ ಎಚ್ಚರಿಕೆ ನೀಡಿರುವ ಆರ್‍ಬಿಐ ದೇಶೀಯ ಉತ್ಪಾದನಾ ಚಟುವಟಿಕೆಗಳು ಲಾಭದಾಯಕವಾಗಿರಲಿವೆ. ಸ್ಥಳೀಯ ಬೇಡಿಕೆಗಳು ಹೆಚ್ಚಳವಾಗುವುದರಿಂದ ಸೇವಾವಲಯ ಮತ್ತಷ್ಟು ಹಿಗ್ಗಲಿದೆ ಎಂದು ತಿಳಿಸಿದ್ದಾರೆ.ಗೃಹ ಬಳಕೆಯ ಬೇಡಿಕೆಗಳು ಹೆಚ್ಚಳವಾಗಬಹುದು. ಕೃಷಿ ಚಟುವಟಿಕೆಗಳು ಪ್ರಕಾಶಮಾನವಾಗಲಿದ್ದು, ಗ್ರಾಮೀಣ ಭಾಗದ ಬಳಕೆ ಸಮೃದ್ಧವಾಗಲಿದೆ.

ನೈರುತ್ಯ ಮುಂಗಾರು ಚೇತರಿಕೆ ಕಾಣುವುದರಿಂದ ಚಿಲ್ಲರೆ ಹಣದುಬ್ಬರದಲ್ಲಿ ಬಿಡುವಿನ ವಾತಾವರಣ ಕಂಡುಬಂದಿದೆ. 2020-25 ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಚಿಲ್ಲರೆ ಹಣದುಬ್ಬರ ಶೇ.4.5 ರಷ್ಟಾಗಬಹುದು. ಇದು ಗರಿಷ್ಠ ಮಿತಿಯ ಶೇ.6 ರ ಒಳಗಿನ ನಿಯಂತ್ರಣ ಎಂದು ವಿವರಿಸಿದ್ದಾರೆ. ಆಹಾರೋತ್ಪನ್ನಗಳ ಬೆಲೆ ಕ್ರಮೇಣ ನಿಯಂತ್ರಣಕ್ಕೆ ಬರಲಿವೆ. ಗೃಹೋಪಕರಣಗಳ ಬೆಲೆ ಏರಿಕೆ ಇಲ್ಲ. ಆಹಾರದ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ ಹಣದುಬ್ಬರವನ್ನು ಆರ್‍ಬಿಐ ಅಗತ್ಯಾನುಸಾರ ನಿಗಾವಣೆ ವಹಿಸುತ್ತಿದೆ ಎಂದರು.
ನಗದು ನಿರ್ವಹಣೆಯಲ್ಲಿನ ಹೊಂದಾಣಿಕೆ ಮತ್ತು ವೇಗವನ್ನು ಮುಂದುವರೆಸಲು ಪೂರಕವಾಗುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದ್ದು, ಸದೃಢಗೊಳ್ಳುತ್ತಿದೆ. ಸೂಕ್ಷ್ಮ ಆರ್ಥಿಕತೆಯ ಗಡಿಯಲ್ಲಿ ಸ್ಥಿರತೆಯನ್ನು ಹೊಂದಿದೆ.

ಆಗಸ್ಟ್ ತಿಂಗಳಿನಲ್ಲಿ ಭಾರತದ ರೂಪಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಕಾಯ್ದುಕೊಂಡಿದೆ. ಬ್ಯಾಂಕುಗಳಲ್ಲಿನ ಸಾಂಸ್ಥಿಕ ನಗದು ಸಮಸ್ಯೆಗಳು ಠೇವಣಿಯ ಪ್ರಮಾಣವನ್ನು ಕಡಿಮೆ ಮಾಡುವ ಆತಂಕವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಬ್ಯಾಂಕ್ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಶಕ್ತಿಕಾಂತ್‍ದಾಸ್ ತಿಳಿಸಿದ್ದಾರೆ.

ಗೃಹಸಾಲಗಳ ವಿತರಣೆಯಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಪ್ರಸಕ್ತ ಖಾತೆಯ ಕೊರತೆ ಈ ಆರ್ಥಿಕ ವರ್ಷದಲ್ಲಿ ನಿಭಾಯಿಸುವ ಪ್ರಮಾಣದಲ್ಲಿದೆ. ಜೊತೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಆಧರಿತ ಆ್ಯಪ್‍ಗಳು ಅನಧಿಕೃತವಾಗಿ ಸಾಲದ ವಹಿವಾಟು ನಡೆಸುವುದಕ್ಕೆ ಸಾರ್ವಜನಿಕ ಹೊಣೆಗಾರಿಕೆಯನ್ನು ನಿಗದಿಪಡಿಸುವ ಪ್ರಸ್ತಾವನೆಯನ್ನು ಆರ್‍ಬಿಐ ಮಾಡಿದೆ.

ಆ.2 ರ ವೇಳೆಗೆ ಭಾರತದ ವಿದೇಶಿ ವಿನಿಮಯ ದಾಖಲೆಯನ್ನು ತಲುಪಿದ್ದು, 675 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹ ಹೊಂದಿದೆ. ಯುಪಿಐ ಆಧರಿತ ಡಿಜಿಟಲ್ ವಹಿವಾಟಿನಲ್ಲಿ ತೆರಿಗೆ ಪಾವತಿಯ ಮಿತಿಯನ್ನು 1 ರಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಬ್ಯಾಂಕುಗಳು ಕಂಪೆನಿಗಳಿಗೆ ನೀಡುವ ಸಾಲದ ಮಾಹಿತಿಯನ್ನು ಮಾಸಿಕದ ಬದಲಾಗಿ 15 ದಿನಗಳಿಗೆ ಆರ್‍ಬಿಐಗೆ ನೀಡಬೇಕು ಎಂದು ಬದಲಾವಣೆ ಮಾಡಲಾಗಿದೆ. ಚೆಕ್ ನಗದೀಕರಣದ ವ್ಯವಸ್ಥೆಯನ್ನು ಕೆಲವೇ ಘಂಟೆಗಳಲ್ಲಿ ಇತ್ಯರ್ಥಗೊಳಿಸಲು ವೇಗದ ಕ್ರಮಗಳನ್ನು ಅನುಸರಿಸುವಂತೆ ಆರ್‍ಬಿಐ ಮಾರ್ಗದರ್ಶನ ನೀಡಿದೆ.

ಹಣದುಬ್ಬರ ಮತ್ತು ಬೆಳವಣಿಗೆಯ ದರ ಸಮತೋಲಿತ ಮಾನದಂಡದಲ್ಲಿದ್ದು, ಮುಂಚೂಣಿ ಆಹಾರ ಬೆಲೆ ಏರಿಕೆಯ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News