ಬೆಂಗಳೂರು, ಜೂ.4 – ಐಪಿಎಲ್ ಸರಣಿ ವಿಜೇತ ತಂಡವನ್ನು ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲು ವಿಶೇಷ ಬಸ್ಸನ್ನು ಸಜ್ಜುಗೊಳಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ಹಾಗೂ ತೆರೆದ ಮೇಲ್ಪಾವಣಿಯ ಬಸ್ಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಸ್ಟಿಕ್ಟರ್ ಅಂಟಿಸಲಾಗಿದೆ. ಮುಂದೆ ಅಂಬಾರಿ ಎಂದು ಬರೆಯಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಈ ಬಸ್ನ ಒಳಗೆ ಹವಾನಿಯಂತ್ರಿತ ವ್ಯವಸ್ಥೆ ಇದ್ದು 20 ಜನರಿಗೆ ಆಸನ ಕಲ್ಪಿಸಲಾಗಿದೆ. ಒಳಗಿನಿಂದಲೇ ಮೆಟ್ಟಿಲುಗಳ ಮೂಲಕ ಮೇಲಾವಣಿಗೆ ತಲುಪಲು ವ್ಯವಸ್ಥೆ ಇದ್ದು, ಮೇಲ್ಬಾವಣಿಯಲ್ಲಿ ತೆರೆದ ಆಸನ ವ್ಯವಸ್ಥೆಗಳಿವೆ. 20 ಜನ ಕುಳಿತು ಅಥವಾ ನಿಂತು ಅಭಿಮಾನಿಗಳತ್ತ ಕೈ ಬೀಸಲು ಅವಕಾಶ ಕಲ್ಪಿಸಲಾಗಿದೆ.
RCB ಹಬ್ಬ : ಬೆಂಗಳೂರಲ್ಲಿ ರಾಯಲ್ ಚಾಂಪಿಯನ್ಸ್ ಗ್ರ್ಯಾಂಡ್ ಸೆಲೆಬ್ರೆಷನ್ (Live)
ಪ್ರವಾಸೋದ್ಯಮ ಇಲಾಖೆಯ ಈ ಬಸ್ಸನ್ನು ಸಜ್ಜುಗೊಳಿಸಲು ವಾರದಿಂದಲೂ ತಯಾರಿಗಳಾಗಿದ್ದವು. ಆರ್ಸಿಬಿ ಫೈನಲ್ಗೆ ತಲುಪುತ್ತಿದ್ದಂತೆ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ನಾಲ್ಕು ದಿನಗಳ ಹಿಂದೆಯೇ ಸ್ಟಿಕ್ಕರಿಂಗ್ಗೆ ಆದೇಶ ನೀಡಲಾಗಿತ್ತು. ಇಂದು ಬೆಳಿಗ್ಗೆ ಅಂತಿಮ ಹಂತದ ಸಿದ್ದತೆಗಳು ನಡೆದಿದ್ದವು.
ಕೊನೆ ಕ್ಷಣದಲ್ಲಿ ಆಟಗಾರರ ವಿಜಯ ಮೆರವಣಿಗೆಗೆ ಅವಕಾಶ ನಿರಾಕರಿಸುವ ಸಾಧ್ಯತೆಗಳೂ ಇವೆ. ಅಭಿಮಾನಿಗಳ ನಿಯಂತ್ರಣ ಕಷ್ಟಸಾಧ್ಯ ಎಂಬ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸುವ ನಿರೀಕ್ಷೆಯಿದೆ. ವಿಮಾನನಿಲ್ದಾಣದಿಂದ ವಿಧಾನಸೌಧದವರೆಗೂ ಆಟಗಾರರನ್ನು ಕರೆತರಲು ಈ ಬಸ್ ಬಳಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.