Friday, June 6, 2025
Homeರಾಜ್ಯಬದುಕಿ ಬಾಳಬೇಕಾದ ಕಾಲದಲ್ಲಿ ಜೀವ ಕಳೆದುಕೊಂಡ ದುರ್ದೈವಿಗಳು

ಬದುಕಿ ಬಾಳಬೇಕಾದ ಕಾಲದಲ್ಲಿ ಜೀವ ಕಳೆದುಕೊಂಡ ದುರ್ದೈವಿಗಳು

RCB victory celebrations turn tragic as 11 die in stampede at Chinnaswamy Stadium

ಬೆಂಗಳೂರು, ಜೂ.5– ಭವಿಷ್ಯದಲ್ಲಿ ತಮ್ಮ ಕುಟುಂಬಗಳಿಗೆ ಆಧಾರಸ್ಥಂಭವಾಗಬೇಕಿದ್ದ ಹಾಗೂ ಚೆನ್ನಾಗಿ ಬದುಕಿ ಬಾಳಬೇಕಾದವರೇ ನಿನ್ನೆಯ ದುರಂತದಲ್ಲಿ ಸಾವನ್ನಪ್ಪಿರುವುದು ಘೋರ ಅಧ್ಯಾಯವಾಗಿದೆ.

ಕಾಲ್ತುಳಿತದಲ್ಲಿ ಬಲಿಯಾದವರ ವಯಸ್ಸು 14, 17, 19, 19, 20, 20, 20, 23, 26 ಮತ್ತು 29 ವರ್ಷದೊಳಗಿನವರಾಗಿರುವುದನ್ನು ನೋಡಿದರೆ ವಿಧಿಯ ವಿಪರ್ಯಾಸಕ್ಕೆ ಬಲಿಯಾದವರು ಬದುಕಿ ಬಾಳಬೇಕಿರುವವರೇ ಎನ್ನುವುದು ವಿಷಾದಕರ ವಿಷಯವಾಗಿದೆ.

ನಿನ್ನೆಯ ಕಾಲ್ತುಳಿತದಲ್ಲಿ ಬಲಿಯಾದವರು 14 ವರ್ಷದಿಂದ 29 ವರ್ಷದೊಳಗಿನವರು ಎಂದು ಗುರುತಿಸಲಾಗಿದೆ. ಒಂಬತ್ತನೆ ತರಗತಿ ವಿದ್ಯಾರ್ಥಿನಿ 14 ವರ್ಷದ ದಿವ್ಯಾಂತಿ ಸೇರಿದಂತೆ 29 ವರ್ಷದ ಕಾಮಾಕ್ಷಿದೇವಿ ಮೃತರಪಟ್ಟಿಯಲ್ಲಿ ಸೇರಿದ್ದಾರೆ. ಅದರಲ್ಲೂ ಮೃತಪಟ್ಟವರಲ್ಲಿ ವಿದ್ಯಾರ್ಥಿಗಳು, ಡಾಕ್ಟರ್, ಸಿಎ, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎನ್ನುವುದು ತೀವ್ರ ನೋವಿನ ಸಂಗತಿಯಾಗಿದೆ.

ತಮ್ಮ ನೆಚ್ಚಿನ ಆಟಗಾರರನ್ನು ಕಣ್ಣುಂಬಿಕೊಳ್ಳಲು ಬಂದಿದ್ದ ಕನಕಶ್ರೀ ಬಡಾವಣೆಯ 9ನೇ ತರಗತಿ ವಿದ್ಯಾರ್ಥಿ 14 ವರ್ಷದ ದಿವ್ಯಾಂಶಿ ತಮ್ಮ ತಾಯಿಯ ಕಣ್ಣೆದುರೆ ಪ್ರಾಣ ಕಳೆದುಕೊಂಡಿರುವುದು ನೋಡಿದರೆ ಎದೆ ಝಲ್ ಎನ್ನುತ್ತದೆ.

ಶಿವಕುಮಾ‌ರ್ ಮತ್ತು ಅಶ್ವಿನಿ ಎಂಬುವವರ ಪುತ್ರಿ ದಿವ್ಯಾಂಶಿ ನಿನ್ನೆ ಮಧ್ಯಾಹ್ನ ತಾಯಿ ಮತ್ತು ಚಿಕ್ಕಮ್ಮ ರಚನಾ ಅವರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಂದಿದ್ದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಅದೇ ರೀತಿ 19 ವರ್ಷದ ಚಿನ್ಮಯಿ ಶೆಟ್ಟಿ ಕೂಡ ಅನಾಹುತದಲ್ಲಿ ಜೀವ ಕಳೆದುಕೊಂಡಿದ್ದು ಶೋಕ ಸಾಗರದ ನಡುವೆ ಬನಶಂಕರಿಯ ಶವಾಗಾರದಲ್ಲಿ ಆಕೆಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಇನ್ನು ವಿರಾಟ್ ಕೊಹ್ಲಿ ಅವರ ಕಟ್ಟಾ ಅಭಿಮಾನಿಯಾಗಿದ್ದ ಮೂಲತಃ ಯಾದಗಿರಿ ಜಿಲ್ಲೆಯವರಾಗಿದ್ದು, ಯಲಹಂಕ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಶಿವು (17) ಕೂಡ ಕಾಲನ ಸೆಳೆತಕ್ಕೆ ಸಿಲುಕಿ ಜೀವ ತೆತ್ತಿದ್ದಾರೆ. ಶಿವು ತಂದೆ, ತಾಯಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಇದೀಗ ಭವಿಷ್ಯಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕಣ್ಣೀರಧಾರೆ ಹರಿಸುತ್ತಿದ್ದಾರೆ.

ಇನ್ನು ಕೋಲಾರದ ಕೆಜಿಎಫ್ ತಾಲ್ಲೂಕಿನ ಬುಡಮಾಕನಹಳ್ಳಿ ಶಿಕ್ಷಕ ಸುರೇಶ್‌ ಬಾಬು ಮತ್ತು ಮಂಜುಳಾ ದಂಪತಿ ಪುತ್ರಿ ಸಹನಾ (23) ಇಂಜಿನಿಯರಿಂಗ್ ಪದವಿ ಪೂರೈಸಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ಮದುವೆ ಮಾಡಲು ಪೋಷಕರು ವರನ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ರಾಯಸಮುದ್ರದ ಸಿವಿಲ್ ಎಂಜಿನಿಯರ್ ಪೂರ್ಣಚಂದ್ರ (20) ಹಾಗೂ ಹಾಸನ ಜಿಲ್ಲೆಯ ಬೇಳೂರಿನ ಭೂಮಿಕ್ ದಾಸರಹಳ್ಳಿಯ ಸೌಂದರ್ಯ ಕಾಲೇಜಿನಲ್ಲಿ ಓದುತ್ತಿದ್ದು, ಸ್ನೇಹಿತರೊಂದಿಗೆ ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಹೋಗಿ ಜೀವ ಕಳೆದುಕೊಂಡಿದ್ದಾರೆ.

ಅನಾಹುತದಲ್ಲಿ ಮೃತಪಟ್ಟಿರುವ ಎಲ್ಲರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಶವಗಳನ್ನು ಹಸ್ತಾಂತರಿಸಲಾಗಿದ್ದು, ಬಹುತೇಕ ಎಲ್ಲರೂ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವೈದ್ಯರ ವರದಿಯಲ್ಲಿ ತಿಳಿದುಬಂದಿದೆ. ಅನಾಹುತದಲ್ಲಿ 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಇಂದು ಡಿಸ್ವಾರ್ಚ್ ಆಗಿದ್ದು, ಇನ್ನು ಕೆಲವರು ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿದುಬಂದಿದೆ.

RELATED ARTICLES

Latest News