ಬೆಂಗಳೂರು,ಜೂ.6- ರಾಜ್ಯ ಸರ್ಕಾರದ ಬುಡವನ್ನೇ ಆಲುಗಾಡಿಸುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.ಡಿಎನ್ಎ ಇವೆಂಟ್ ಮ್ಯಾನೇಜೆಂಟ್ನ ಸುನೀಲ್ ಮ್ಯಾಥ್ಯೂ, ಕಿರಣ್ , ವಿನೋದ್, ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಬಂಧಿತರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಮಿಂಚಿನ ಕಾರ್ಯಾಚಾರಣೆ ನಡೆಸಿ ಬಂಧಿಸಿದ್ದಾರೆ.
ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಆಯೋಜಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.ಪೊಲೀಸರ ಬಂಧನದ ಭೀತಿಯಿಂದ ಕಣ್ತಪ್ಪಿಸಿ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಆರ್ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಅವರುಗಳನ್ನು ವಿಮಾನ ನಿಲ್ದಾಣದಲ್ಲೇ ಬೆಳಗಿನ ಜಾವ 4.30ಕ್ಕೆ ಬಂಧಿಸಿದ್ದಾರೆ.
ಸದ್ಯ ನಾಲ್ವರು ಆರೋಪಿಗಳನ್ನು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ನಡೆಸಿದ್ದಾರೆ.ನಂತರ ಆರೋಪಿಗಳನ್ನು ನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಸಿಬಿ ಪ್ರತಿನಿಧಿಗಳನ್ನು ಬಂಧಿಸಲು ಆದೇಶಿಸಿದ್ದರು, ಇದರಲ್ಲಿ ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಸೇರಿದಂತೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ.ಬೆಂಗಳೂರಿನ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ವಿಕ್ಟರಿ ಪರೇಡ್ ಎಂದು ಪೊಲೀಸರು ಅನುಮತಿ ನಿರಾಕರಿಸಿದ ನಂತರವೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿರುವುದು.
ಸ್ಟೇಡಿಯಂನಲ್ಲಿ ಸೆಲೆಬ್ರೇಷನ್ಗೆ ಉಚಿತ ಟಿಕೆಟ್ ಎಂದು ಘೋಷಿಸಿದ್ದು, ಗೇಟ್ 9 ಮತ್ತು 10ರ ಬಳಿ ಮಧ್ಯಾಹ್ನ 1 ಗಂಟೆಗೆ ಟಿಕೆಟ್ ಸಿಗುತ್ತದೆ ಎಂದು, 1 ಗಂಟೆ ಆದರೂ ಟಿಕೆಟ್ ವಿತರಣೆ ಆಗದಿರುವುದು. ಬಳಿಕ ಮಧ್ಯಾಹ್ನ 3 ಗಂಟೆಗೆ ಸ್ಟೇಡಿಯಂಗೆ ಅಭಿಮಾನಿಗಳ ಪ್ರವೇಶ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಕಾರಣಕ್ಕೆ ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ಸೋಸಲೆ ಬಂಧಿಸಲಾಗಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. 2 ಎಫ್ಐಆರ್ ಅನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದರು. ಅಲ್ಲದೇ ಕಾಲ್ತುಳಿತಕ್ಕೆ ಕಾರಣರಾದ ಆರ್ಸಿಬಿ ಆಡಳಿತ ಮಂಡಳಿ, ಡಿಎನ್ಎ ಇವೆಂಟ್ ಮ್ಯಾನೇಜೆಂಟ್ ಸಂಸ್ಥೆ ಹಾಗೂ ಕೆಎಸ್ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇನ್ನು ಪ್ರಕರಣದ ಆರೋಪಿಗಳಾಗಬೇಕಿದ್ದ ಕೆಎಸ್ಸಿಎ ಪ್ರಮುಖರು ರಾತ್ರಿಯೇ ಪರಾರಿಯಾಗಿದ್ದು ಅವರುಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸದ್ಯದಲ್ಲೇ ಅವರನ್ನು ಸಹಾ ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
ಏನಿದು ಪ್ರಕರಣ?
ಬುಧವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು 50 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಸೋಲಿಸಿದ ಕೆಲವೇ ಗಂಟೆಗಳ ನಂತರ ಯೋಜಿಸಲಾಗಿದ್ದ ಬಸ್ ಮೆರವಣಿಗೆಯಲ್ಲಿ ಭಾಗವಹಿಸಲು ನೆರೆದಿದ್ದ ಅಪಾರ ಜನಸಮೂಹದ ನಡುವೆ ಈ ಕಾಲ್ತುಳಿತ ಸಂಭವಿಸಿತ್ತು.
ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಗಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡಲು ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು :
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ಸಿಬಿ ವಿಜಯೋತ್ಸವ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ಗಳ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರ್ಸಿಬಿ ಟೀಂ ಮ್ಯಾನೇಜೆಂಟ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಘಟನೆಗೆ ಕಾರಣ ಎಂದು ಆರೋಪಿಸಿ ದೂರು ದಾಖಲಾಗಿದೆ.
ಎರಡು ಪ್ರತ್ಯೇಕ ದೂರು : ಆರ್ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಆರ್ಸಿಬಿ ಮ್ಯಾನೇಜೆಂಟ್, ಕೆಎಸ್ಸಿಎ ದೂರಿನಲ್ಲಿ ಉಲ್ಲೇಖಿಸಿದೆ. ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಕಾಲ್ತುಳಿತ ಪ್ರಕರಣಕ್ಕೆ ಪೊಲೀಸರ ತಲೆದಂಡ ಮಾಡಲಾಗಿದೆ. ಸರ್ಕಾರದ ಈ ನಡೆ ಬಾರಿ ಆಕ್ರೋಶಕ್ಕೆ ಕಾರಣಾಗಿದೆ. ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ಗೂಬೆ ಗೂರಿಸಿ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಯತ್ನ ಎಂದು ವಿಪಕ್ಷಗಳು ಆರೋಪಿಸಿದೆ. ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಬಿ, ಅಡಿಷನಲ್ ಕಮಿಷನರ್ ವಿಕಾಸ್ ಕುಮಾರ್, ಕಬ್ಬನ್ಪಾರ್ಕ್ ಇನ್್ಸಪೆಕ್ಟರ್ ಗಿರೀಶ್, ಕೇಂದ್ರ ವಿಭಾಗ ಡಿಸಿಪಿ ಶೇಖರ್ ಸೇರಿದಂತೆ ಉನ್ನತಾಧಿಕಾರಿಗಳತಲೆದಂಡವಾಗಿದೆ.
ಬಂಧಿತ ನಿಖಿಲ್ ಸೋಸಲೆ ಯಾರು?
ಬಂಧಿತ ಸೋಸಲೆ ಸುಮಾರು ಎರಡು ವರ್ಷಗಳಿಂದ ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ಆದಾಯ ಮುಖ್ಯಸ್ಥರಾಗಿದ್ದಾರೆ. ಸೋಸಲೆ ಮೂಲತಃ ಆರ್ಸಿಬಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಅನ್ನು ನಿರ್ವಹಿಸುವ ಡಯಾಜಿಯೊ ಇಂಡಿಯಾದ ಉದ್ಯೋಗಿ.
ಮಾಜಿ ಮಾಲೀಕ ವಿಜಯ್ ಮಲ್ಯ ನಿರ್ಗಮನದ ನಂತರ ಆರ್ ಸಿಬಿ ಯ ಪೂರ್ಣ ಸಮಯದ ಮಾಲೀಕರಾಗಿದ್ದರು. ಆರ್ಸಿಬಿ ಬ್ರ್ಯಾಂಡ್ನ ಹಿಂದಿನ ವಿನ್ಯಾಸ ಮತ್ತು ಕಾರ್ಯತಂತ್ರದ ಉಸ್ತುವಾರಿ ಅವರ ಮೇಲಿದೆ. ಆರ್ಸಿಬಿ ನಿಸ್ಸಂದೇಹವಾಗಿ ಐಪಿಎಲ್ನಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದ್ದರ ಹಿಂದೆ ಅವರ ಪರಿಶ್ರಮವಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ಸೋಸಲೆ 13 ವರ್ಷಗಳಿಂದ ಡಿಯಾಜಿಯೊದಲ್ಲಿದ್ದಾರೆ, ಅಲ್ಲಿ ಅವರು ಫ್ರಾಂಚೈಸಿಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆಂದು ತೋರುತ್ತದೆ. ಈ ಅವಧಿಯಲ್ಲಿ, ಸೋಸಲೆ ಆರ್ಸಿಬಿಯಲ್ಲಿ ವ್ಯವಹಾರ ಪಾಲುದಾರಿಕೆಗಳ ಮುಖ್ಯಸ್ಥರೂ ಆಗಿದ್ದಾರೆ. ಆಗಾಗ್ಗೆ, ಅವರನ್ನು ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಆರ್ಸಿಬಿ ಖಾಸಗಿ ಪೆಟ್ಟಿಗೆಗಳಲ್ಲಿ ಕಾಣಬಹುದು. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿ ಕೂಡ ಅನುಸರಿಸುತ್ತಾರೆ.ಸೋಸಲೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ನಲ್ಲಿರುವ ಜೇಮ್ಸೌ ಕುಕ್ ವಿಶ್ವವಿದ್ಯಾಲಯದಿಂದ ಡಬಲ್ ಮೇಜರ್ ಪದವಿ ಪಡೆದಿದ್ದಾರೆ.
ಹಲವಾರು ವರ್ಷಗಳಿಂದ ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ವ್ಯವಹಾರ ತಂತ್ರದಲ್ಲಿ ತೊಡಗಿಸಿಕೊಂಡಿರುವ ಸೋಸಲೆ, ಫ್ರಾಂಚೈಸಿ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ಆಚರಿಸಲು ಬಸ್ ಮೆರವಣಿಗೆಯ ವ್ಯವಸ್ಥೆ ಮತ್ತು ನಡವಳಿಕೆಯಲ್ಲಿ ಕೆಲವು ಪಾತ್ರ ವಹಿಸಿರಬಹುದು. ಆಟಗಾರರು ಮತ್ತು ಫ್ರಾಂಚೈಸಿ ಅಧಿಕಾರಿಗಳ ನಡುವಿನ ಸಂವಹನದಲ್ಲಿಯೂ ಅವರು ಪಾತ್ರ ವಹಿಸಿದ್ದಾರೆ.