ಬೆಂಗಳೂರು,ಜೂ.7- ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮತ್ತಿಬ್ಬರು ಅಧಿಕಾರಿಗಳನ್ನು ತಲೆದಂಡ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ(ಡಿಪಿಎಆರ್)ಯ ಕಾರ್ಯದರ್ಶಿ ಸತ್ಯವತಿ ಅವರುಗಳನ್ನು ಕಡ್ಡಾಯ ರಜೆ ಮೇಲೆ ತೆರಳಲು ಸೂಚನೆ ನೀಡುವ ಸಾಧ್ಯತೆ ಇದೆ.
ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಅವರು ಜೂನ್ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ನಿಯಮಾವಳಿ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿ ಒಂದು ತಿಂಗಳ ಅವಧಿಯಲ್ಲಿ ನಿವೃತ್ತಿಯಾಗುವುದಿದ್ದರೆ ಅಂಥವರನ್ನು ವರ್ಗಾವಣೆ ಮಾಡುವುದು ಇಲ್ಲವೇ ಸೇವೆಯಿಂದ ಅಮಾನತುಪಡಿಸಲು ಅವಕಾಶವಿಲ್ಲ, ಹೀಗಾಗಿ ಸತ್ಯವತಿ ಅವರನ್ನು ಕಡ್ಡಾಯ ರಜೆ ಮೇಲೆ ತೆರಳಲು ಸೂಚಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಇಬ್ಬರು ಅಧಿಕಾರಿಗಳ ತಲೆದಂಡವಾದರೆ ಕಾಲ್ತುಳಿತ ಪ್ರಕರಣದಲ್ಲಿ 13 ಅಧಿಕಾರಿಗಳ ತಲೆದಂಡವಾದಂತಾಗುತ್ತದೆ. ಶಾಲಿನಿ ರಜನೀಶ್ ಸರ್ಕಾರ ಮುಖ್ಯ ಕಾರ್ಯದರ್ಶಿ ಆಗಿರವುದರಿಂದ ಅವರಿಗೆ ಅಂಥದ್ದೇ ಸರಿಸಮಾನವಾದ ಹುದ್ದೆಯನ್ನು ನೀಡಬೇಕು. ಒಂದು ವೇಳೆ ಅವರನ್ನು ವರ್ಗಾವಣೆ ಮಾಡಿದರೆ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ಇದರ ಬದಲು ಅವರನ್ನು ಕೂಡ ಕಡ್ಡಾಯವಾಗ ರಜೆ ಮೇಲೆ ತೆರಳಲು ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆರೋಪವೇನು?:
ಬುಧವಾರ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮುಂಭಾಗ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಆತುರಾತುರವಾಗಿ ಏರ್ಪಡಿಸಿದ್ದು ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಕಬ್ಬನ್ಪಾರ್ಕ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಿರೀಶ್ ಅವರು ಬರೆದ ಪತ್ರದಲ್ಲಿ ಏಕಾಏಕಿ ದೊಡ್ಡ ಮಟ್ಟದ ಸಮಾರಂಭವನ್ನು ಏರ್ಪಡಿಸಿದರೆ ಭದ್ರತೆ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಕಾರ್ಯಕ್ರಮವನ್ನು ನಡೆಸುವುದು ಬೇಡ ಎಂದು ಸಲಹೆ ಕೊಟ್ಟಿದ್ದರು.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಶುಕ್ರವಾರವಷ್ಟೇ ಸ್ಥಾನಮಾನ ಕಳೆದುಕೊಂಡು ತಲೆದಂಡವಾಗಿರುವ ಪ್ರಮುಖರೊಬ್ಬರು ಇನ್ಸ್ಪೆಕ್ಟರ್ ಗಿರೀಶ್ ಅವರಿಗೆ ಧಮ್ಮಿ ಹಾಕಿ ಸತ್ಯವತಿ ಮತ್ತು ಶಾಲಿನಿ ರಜನೀಶ್ ಹೇಳಿದ್ದನ್ನು ಚಾಚುತಪ್ಪದೆ ಮಾಡಬೇಕು. ಇಲ್ಲದಿದ್ದರೆ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಿಂದ ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆವೊಡ್ಡಿದ್ದರು.
ಕಾರ್ಯಕ್ರಮ ಆಯೋಜನೆ ಕುರಿತಂತೆ ಸತ್ಯವತಿ ಮತ್ತು ಶಾಲಿನಿ ರಜನೀಶ್ ಮುಖ್ಯಮಂತ್ರಿ ಅಪ್ತರೊಬ್ಬರ ನಿರ್ದೇಶನವನ್ನೇ ಚಾಚುತಪ್ಪದೆ ಪಾಲನೆ ಮಾಡಿದರೆ ಹೊರತು ಕಡೆಪಕ್ಷ ನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ, ಗುಪ್ತಚರ ವಿಭಾಗದ ಮುಖ್ಯಸ್ಥರು ಸೇರಿದಂತೆ ಯಾರಿಗೂ ಮಾಹಿತಿಯನ್ನೇ ಕೊಡಲಿಲ್ಲ.
ಕೇವಲ ದೊಡ್ಡವರ ನಿರ್ದೇಶನದಂತೆ ಈ ಇಬ್ಬರು ಆತುರಾತುರವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇ ಕಾಲ್ತುಳಿತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಮಹಿಳಾ ಅಧಿಕಾರಿಗಳ ಕಾರ್ಯ ವೈಖರಿಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಇಬ್ಬರ ಮೇಲೂ ಶಿಸ್ತು ಕ್ರಮ ಜರುಗಿಸಬೇಕೆಂದು ಸಿಎಂ ಮೇಲೆ ಒತ್ತಡ ಹೇರಲಾಗಿದೆ.
ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ಕುಮಾರ್, ಡಿಸಿಪಿ ಶೇಖರ್, ಎಸಿಪಿ ಬಾಲಕೃಷ್ಣ, ಇನ್ಸ್ಪೆಕ್ಟರ್ ಗಿರೀಶ್, ಗುಪ್ತಚರ ವಿಭಾಗದ ಮುಖ್ಯಸ್ಥ ಹೇಮಂತ್ ನಿಂಬಾಳ್ಯರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಸೇರಿದಂತೆ ಮತ್ತಿತರ ತಲೆದಂಡವಾಗಿದೆ. ಇದರ ಬೆನ್ನಲ್ಲೇ ಇಬ್ಬರು ಮಹಿಳಾಮಣಿಗಳ ಮೇಲೆ ತಲೆದಂಡದ ತೂಗುಗತ್ತಿಯಾಡುತ್ತಿದೆ.