ಬೆಂಗಳೂರು, ಮೇ 29- ಹಾಡಹಗಲೇ ಮನೆಗೆ ನುಗ್ಗಿ ಒಂಟಿ ಮಹಿಳೆಯನ್ನು ಕೊಲೆ ಮಾಡಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ 1.50 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಸಂಬಂಧಿಕ ಸೇರಿ ಇಬ್ಬರನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬೀದರ್ ಮೂಲದ ಸಂಬಂಧಿಕ ಪುರಂದರ (42) ಹಾಗೂ ಈತನ ಸ್ನೇಹಿತ ಶಿವಪ್ಪ (35) ಬಂ ತ ಆರೋಪಿಗಳು.
ಇವರಿಬ್ಬರು ಬೀದರ್ನ ಕೆಮಿಕಲ್ಸ್ ಕಂಪನಿಯೊಂದರಲ್ಲಿ ಎಲೆಕ್ಟ್ರೀಷನ್ ಕೆಲಸ ಮಾಡುತ್ತಿದ್ದರು. ರೈಸ್ ಪುಲಿಂಗ್ನಲ್ಲಿ ಹಣ ಕಳೆದುಕೊಂಡು ಲಾಸ್ ಆಗಿದ್ದರಿಂದ ಬೆಂಗಳೂರಿಗೆ ಬಂದು ಹಣ,ಆಭರಣಕ್ಕಾಗಿ ಈ ಕೃತ್ಯವೆಸಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಕಾಟನ್ಪೇಟೆಯ ದರ್ಗಾ ರಸ್ತೆಯ ನಿವಾಸಿ, ಹೋಲ್ಸೇಲ್ ಬಟ್ಟೆ ವ್ಯಾಪಾರಿ ಪ್ರಕಾಶ್ ಅವರು ಪತ್ನಿ, ಮಗಳು ಹಾಗೂ ಮಗನೊಂದಿಗೆ ವಾಸವಾಗಿದ್ದು,ಅದು ಸುಂದರ ಕುಟುಂಬವಾಗಿತ್ತು.ಆದರೆ ಈ ಕುಟುಂಬದ ಮೇಲೆ ಹಂತಕ ಕಣ್ಣಿಟ್ಟಿದ್ದು ಗೋತ್ತೇಆಗಿಲ್ಲ.
ಕಳೆದ ಮೂರು ದಿನಗಳ ಹಿಂದೆ ಕೆಲಸಕ್ಕಾಗಿ ಮನೆಯಿಂದ ಪ್ರಕಾಶ್ ಹಾಗೂ ಮಗಳು ಬೆಳಗ್ಗೆಯೇ ಹೊರಗೆ ಹೋಗಿದ್ದರು. ಮಗ ಶಾಲೆಗೆ ಹೋಗಿದ್ದ. ಆ ಸಂದರ್ಭದಲ್ಲಿ ಪ್ರಕಾಶ್ ಅವರ ಪತ್ನಿ ಲತಾ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಬೀದರ್ನಿಂದ ನಗರಕ್ಕೆ ಬಂದಿದ್ದ ಸಂಬಂಧಿಕ ಪುರಂದರ ತನ್ನ ಸ್ನೇಹಿತ ಶಿವಪ್ಪ ಜೊತೆ ನೆಂಟರ ಮನೆಗೆ ಬಂದ ರೀತಿ ಲತಾ ಅವರ ಮನೆಗೆ ಹೋಗಿದ್ದಾರೆ.
ಲತಾ ಅವರು ಅವರಿಬ್ಬರನ್ನು ಆಧರಿಸಿ, ತಿಂಡಿ ಕೊಟ್ಟಿದ್ದಾರೆ. ತಿಂಡಿ ತಿಂದ ಈ ಇಬ್ಬರು ದುರುಳರು ಹಣ, ಆಭರಣಕ್ಕಾಗಿ ಲತಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ವಾಪಸ್ ಊರಿಗೆ ಹೋಗಿದ್ದಾರೆ.ಅಂದು ಮಧ್ಯಾಹ್ನದ ವೇಳೆಗೆ ಊಟಕ್ಕಾಗಿ ಪ್ರಕಾಶ್ ಅವರು ಮನೆಗೆ ಬಂದಾಗಲೇ ಪತ್ನಿಯ ಕೊಲೆಯಾಗಿರುವುದು ಕಂಡು ಬಂದಿತ್ತು.
ತಕ್ಷಣ ಅವರು ಕಾಟನ್ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ,ಯಾರೂ ಇಲ್ಲದ ಸಮಯದಲ್ಲಿ ಹಂತಕರು ಮನೆಯೊಳಗೆ ಬಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಮಹಿಳೆಯ ಮುಖದ ಮೇಲೆ ಹಲ್ಲೆಯ ಗುರುತುಗಳು ಕಂಡುಬಂದಿರುವುದನ್ನು ಗಮನಿಸಿದಾಗ ಮಹಿಳೆಯ ಕೊಲೆಯ ಕ್ರೂರ ಸ್ವರೂಪವನ್ನು ತೋರಿಸಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಹಂತಕರ ಚಹರೆ ಪತ್ತೆಯಾಗಿತ್ತು. ಆ ದೃಶ್ಯಾವಳಿಯನ್ನು ಆಧರಿಸಿ ಹಂತಕರ ಬೆನ್ನಟ್ಟಿದಾಗ ಕೊಲೆಯಾಗಿರುವ ಲತಾ ಅವರ ಇಬ್ಬರು ಸಂಬಂಧಿಕರ ಕೃತ್ಯ ಎಂಬುವುದು ಗೊತ್ತಾಗಿದೆ. ತಕ್ಷಣ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಬೀದರ್ನಿಂದ ಇಬ್ಬರು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.