Tuesday, July 2, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣ : ಪೊಲೀಸರಿಂದ ಮೈಸೂರಿನಲ್ಲಿ ಸ್ಥಳ ಮಹಜರು

ರೇಣುಕಾಸ್ವಾಮಿ ಕೊಲೆ ಪ್ರಕರಣ : ಪೊಲೀಸರಿಂದ ಮೈಸೂರಿನಲ್ಲಿ ಸ್ಥಳ ಮಹಜರು

ಮೈಸೂರು, ಜೂ. 18- ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಇಬ್ಬರನ್ನು ಇಂದು ಮೈಸೂರಿಗೆ ಕರೆತಂದು ಸ್ಥಳ ಮಹಜರು ನಡೆಸಲಾಯಿತು.ಆರೋಪಿಗಳಾದ ದರ್ಶನ್ ಆಪ್ತ ವ್ಯವಸ್ಥಾಪಕ ನಾಗರಾಜು, ಕಾರಿನ ಚಾಲಕ ಲಕ್ಷ್ಮಣ್ ಇಬ್ಬರನ್ನು ಮೈಸೂರಿಗೆ ಕರೆತಂದು ಇಂದು ಸ್ಥಳ ಮಹಜರು ನಡೆಸಲಾಯಿತು.

ಮೈಸೂರಿನ ರ್ಯಾಡಿಸನ್ ಬ್ಲೂ ಹೊಟೇಲ್ಗೆ ಆರೋಪಿಗಳನ್ನು ಕರೆತಂದ ಬೆಂಗಳೂರಿನ ವಿಜಯನಗರ ಉಪವಿಭಾಗದ ಪೊಲೀಸರು ಸ್ಥಳ ಮಹಜರು ನಡೆಸಿದರು.ನಟ ದರ್ಶನ್ನನ್ನು ರ್ಯಾಡಿಸನ್ಬ್ಲೂ ಹೊಟೇಲ್ನಲ್ಲಿ ವಶಕ್ಕೆ ಪಡೆಯಲಾಯಿತು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರಿಗಾಗಿ ಆರೋಪಿಗಳಿಬ್ಬರನ್ನು ಪೊಲೀಸರು ಕರೆತಂದು ಮಹಜರು ನಡೆಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಮೈಸೂರಿಗೆ ಆಗಮಿಸಿ ರ್ಯಾಡಿಷನ್ ಬ್ಲೂ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಹಾಗೆಯೇ ಲಲಿತ ಮಹಲ್ನಲ್ಲಿ ನಡೆದ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿಯೂ ಸಹ ದರ್ಶನ್ ಭಾಗವಹಿಸಿದ್ದರು.ದರ್ಶನ್ರನ್ನು ಬಂಧಿಸುವ ದಿನ ದರ್ಶನ್ ಈ ಹೊಟೇಲ್ನಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಗೋಲ್ಡ್ ಜಿಮ್ಗೆ ತೆರಳಿ ಅಲ್ಲಿ ವರ್ಕೌಟ್ ಮಾಡಿ ನಂತರ ಆಗಮಿಸಿದಾಗ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡರು.

ರ್ಯಾಡಿಸನ್ ಬ್ಲೂ ಹೊಟೇಲ್ ಸ್ಥಳಮಹಜರು ನಂತರ ದರ್ಶನ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಹೊಟೇಲ್ ಲಲಿತ ಮಹಲ್ ಆ ನಂತರ ದರ್ಶನ್ ಫಾರ್ಮ್ಹೌಸ್ನಲ್ಲೂ ಸ್ಥಳ ಮಹಜರು ನಡೆಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಇಂದು ಬೆಳಗ್ಗೆ ದರ್ಶನ್ ಫಾರ್ಮ್ಹೌಸ್ಗೆ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ನನ್ನು ಕರೆದೊಯ್ದು ಪರಿಶೀಲಿಸಿದರು.

ದರ್ಶನ್ನನ್ನು ಮಹಜರಿಗೆ ಫಾರ್ಮ್ಹೌಸ್ಗೆ ಕರೆದೊಯ್ದರೆ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಅಭಿಮಾನಿಗಳನ್ನು ನಿರ್ವಹಿಸುವುದು ಬಹಳ ಕಷ್ಟವೆಂದು ಅರಿತು ಪೊಲೀಸರು ದರ್ಶನ್ನನ್ನು ಕರೆದೊಯ್ಯದೆ ಇನ್ನಿಬ್ಬರು ಆರೋಪಿಗಳನ್ನು ಕರೆದೊಯ್ದು ಫಾರ್ಮ್ಹೌಸ್ನಲ್ಲಿ ಸ್ಥಳ ಮಹಜರು ಮಾಡಿದರು.

ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್ ಮೈಸೂರಿಗೆ ತೆರಳಿದ್ದ ಮಾಹಿತಿ ಹಿನ್ನೆಲೆಯಲ್ಲಿ ಅವರ ಫಾರ್ಮ್ಹೌಸ್ನಲ್ಲಿ ಸ್ಥಳ ಮಹಜರು ಮಾಡಿ ಕೆಲವೊಂದು ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ನಂತರ ಆರೋಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

RELATED ARTICLES

Latest News