ಬೆಂಗಳೂರು,ಆ.11- ಸಭಾಧ್ಯಕ್ಷರ ಪೀಠ ಬಗ್ಗೆ ಅಶಿಸ್ತು ತೋರಿದ್ದ ಆರೋಪದ ಮೇಲೆ 6 ತಿಂಗಳು ಕಾಲ ಬಿಜೆಪಿಯ 18 ಶಾಸಕರ ಅಮಾನತ್ತುಗೊಳಿಸಿದ್ದ ನಿರ್ಣಯವನ್ನು ಹಿಂಪಡೆದಿರುವುದನ್ನು ವಿಧಾನಸಭೆಯಲ್ಲಿ ಇಂದು ಸ್ಥಿರೀಕರಿಸಲಾಯಿತು.
ಸಂತಾಪ ಸೂಚನಾ ನಿರ್ಣಯದ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಸ್ಥಿರೀಕರಣ ಪ್ರಸ್ತಾವನ್ನು ಸದನದಲ್ಲಿ ಮಂಡಿಸಿ ಬಿಜೆಪಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್.ವಿಶ್ವನಾಥ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ. ಆರ್.ಪಾಟೀಲ್, ಡಾ.ಭರತ್ಶೆಟ್ಟಿ, ಬಿ.ಪಿ.ಹರೀಶ್, ದೀರಜ್ ಮುನಿರಾಜು, ಡಾ. ಚಂದ್ರುಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಸೇರಿದಂತೆ 18 ಶಾಸಕರನ್ನು ಅಮಾನತ್ತು ಮಾಡಲಾಗಿತ್ತು ಎಂದರು.
ಬಿಜೆಪಿ 18 ಶಾಸಕರನ್ನು ಆರು ತಿಂಗಳ ಅಮಾನತ್ತು ಮಾಡಲಾಗಿತ್ತು. ಅಮಾನತ್ತುಗೊಳಿಸಿದ ನಿರ್ಣಯವನ್ನು ಮೇ 25 ರಿಂದ ಜಾರಿಗೆ ಬರುವಂತೆ ಹಿಂಪಡೆಯಾಗಿದೆ. ಈ ಸ್ಥಿರೀಕರಣ ಪ್ರಸ್ತಾವಕ್ಕೆ ಸದನ ಅನುಮೋದನೆ ನೀಡಬೇಕು ಎಂದು ಕೋರಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮತಕ್ಕೆ ಹಾಕಿದಾಗ ದ್ವನಿಮತ ಅನುಮೋದನೆ ದೊರೆಯಿತು.