ಬೆಂಗಳೂರು, ಅ.19– ರಸ್ತೆಯಲ್ಲಿ ನಮಾಜ್ ಮಾಡಲು ಅನುಮತಿ ನೀಡದಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ತಮ್ಮ ಚಟುವಟಿಕೆ ನಡೆಯಬಾರದು ಎಂದು ತೀರ್ಮಾನ ತೆಗೆದುಕೊಂಡಿದೆ. ಸಹಜವಾಗಿಯೇ ಮುಸ್ಲಿಮರಿಗೆ ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶ ನಿರಾಕರಿಸಲಾಗುತ್ತಿದೆಯೇ ಎಂದು ಕೇಳಲಾಗುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರ ಒಬ್ಬರಿಗೊಂದು ಮತ್ತೊಬ್ಬರಿಗೆ ಇನ್ನೊಂದು ನಿಯಮ ಮಾಡಲು ಸಾಧ್ಯವಿಲ್ಲ. ರಸ್ತೆಯಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಪರಿಶೀಲನೆ ನಡೆಸಲಾಗುತ್ತದೆ ಎಂದರು.ಆರ್ಎಸ್ಎಸ್ ಹೊಸತೇನಲ್ಲ. 100 ವರ್ಷಗಳ ಇತಿಹಾಸ ಹೊಂದಿದೆ. ಅಂದಿನಿಂದಲೂ ದೇಶದಲ್ಲಿ ಗೊಂದಲಗಳಾಗುತ್ತಲೇ ಇದೆ. ಈ ಬಗ್ಗೆ ಪದೇ ಪದೇ ಚರ್ಚೆಗಳಾಗಿವೆ. ಕಾಲಕಾಲಕ್ಕೆ ಸರ್ಕಾರಗಳು ಕ್ರಮಗಳನ್ನು ತೆಗೆದುಕೊಂಡಿವೆ ಎಂದರು.
ಜಗದೀಶ್ಶೆಟ್ಟರ್ 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರದೇ ಪಕ್ಷದ ಅಂಗ ಸಂಸ್ಥೆಯಾದ ಆರ್ಎಸ್ಎಸ್ನ ಚಟುವಟಿಕೆಗಳಿಗೆ ನಿಯಂತ್ರಣ ಹಾಕಿದ್ದರು. ಕಾಂಗ್ರೆಸ್ ಸರ್ಕಾರ ಆದೇಶ ಹೊರಡಸಿದ್ದರೆ, ಗಲಾಟೆ ಮಾಡುತ್ತಾರೆ. ಜಗದೀಶ್ ಶೆಟ್ಟರ್ ಆದೇಶವನ್ನು ಕಂಡೂ ಕಾಣದಂತಿರುತ್ತಾರೆ. ಅನಗತ್ಯ ಪ್ರಚೋದನೆ ಬೇಡ ಎಂದು ನಾವು ಸುಮನಿದ್ದೇವೆ ಎಂದರು.
ಭಜರಂಗ ದಳವನ್ನು ನಿಷೇಧ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆರ್ಎಸ್ಎಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಓ ಅವರನ್ನು ಅಮಾನತುಗೊಳಿಸಿರುವ ಕ್ರಮ ಸಮರ್ಥನೀಯ. ಸರ್ಕಾರಿ ನೌಕರರು ಖಾಸಗಿ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ, ಸದಸ್ಯತ್ವ ಪಡೆಯುವಂತಿಲ್ಲ, ಗೊಂದಲಗಳ ನಡುವೆಯೂ ಪಥ ಸಂಚಲನದಲ್ಲಿ ಭಾಗಿಯಾಗಿರುವುದು ಸೂಕ್ತವಲ್ಲ ಎಂದು ಹೇಳಿದರು.
ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಸರ್ಕಾರಿ ಸ್ವತ್ತುಗಳಲ್ಲಿ ಅವಕಾಶ ಇಲ್ಲ ಎಂದು ಕಳೆದ ಸಂಪುಟದಲ್ಲೇ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಬಗ್ಗೆ ನಿನ್ನೆ ಸಂಜೆ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಕಲಬುರರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಆರ್ಎಸ್ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಲಾಗಿಲ್ಲ. ಎಲ್ಲಾ ಸಂಘಟನೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಭೀಮ್ ಅರ್ಮಿ ಅಥವಾ ಯಾವುದೇ ಸಂಘಟನೆ ಇರಲಿ, ನಿಬಂಧನೆಗಳನ್ನು ಅನುಸರಿಸಿ ಅನುಮತಿ ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ನಾವೇ ಮುಚ್ಚಿದ್ದೇವೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದದ್ದು, ಅವರು ಸಾಕಷ್ಟು ಪ್ರಭಾವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ತಮ ಹೇಳಿಕೆ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ಅವರು ಗಮನ ಕೊಡಬೇಕು. ಸಮಸ್ಯೆಗಳಿದ್ದರೆ, ಮುಖ್ಯಮಂತ್ರಿ ಜೊತೆ ಮಾತನಾಡಿ ಬಗೆ ಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಮಾತನಾಡುವುದು ಸೂಕ್ತವಲ್ಲ ಎಂದರು.