ಬೆಂಗಳೂರು, ಮೇ 13- ಮಳೆಗಾಲ ಸಮೀಪಿಸುತ್ತಿದ್ದರೂ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವೆಡೆ ಜನರು ಇಡಿಶಾಪ ಹಾಕುತ್ತಿದ್ದಾರೆ.
ರಸ್ತೆ ಅಗೆದು ಬಿಟ್ಟಿದ್ದು, ಬೇಗ ಕಾಮಗಾರಿ ಮುಗಿಸದೆ ಇರುವುದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ಆಡಚಣೆಯಾಗುವುದರ ಜತೆಗೆ ವ್ಯಾಪಾರ-ವಹಿವಾಟಿಗೂ ಪೆಟ್ಟು ಬಿದ್ದಿದೆ.
ಡಾ.ರಾಜ್ಕುಮಾರ್ ರಸ್ತೆಯಲ್ಲಿ ವಿದ್ಯುತ್ ಕೇಬಲ್ಗಳ ನೆಲದಡಿ ಅಳವಡಿಸುವ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕಳೆದ ಒಂದೂವರೆ ತಿಂಗಳಿನಿಂದ ರಸ್ತೆ ಅಗೆಯುತ್ತಿದ್ದು, ಅದಕ್ಕೆ ಪೈಪ್ಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದರಿಂದ ಪುನಃ ಮಣ್ಣು ಹಳ್ಳ ಸೇರುತ್ತಿದೆ.
ಓಡಾಡುವಾಗ ಸಾರ್ವಜನಿಕರು ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ಕೂಡ ನಡೆದಿದ್ದು, ಇದಲ್ಲದೆ ನೆಲಮಾರ್ಗದಲ್ಲಿ ಅಳವಡಿಸಿದ್ದ ಅಂತರ್ಜಾಲ ಕೇಬಲ್ ಗಳು, ನೀರಿನ ಪೈಪ್ಗಳು, ಒಳಚರಂಡಿ ಪೈಪ್ಗಳು ಒಡೆದು ಹೋಗಿದ್ದು, ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.






ಜನನಿಬಿಡ ರಸ್ತೆಯಾಗಿರುವುದರಿಂದ ರಸ್ತೆಯೆಲ್ಲ ಧೂಳುಮಯವಾಗಿದ್ದು, ವಾಹನ ಸವಾರರು ಕೂಡ ಪ್ರಯಾಸ ಪಡುವಂತಾಗಿದೆ. ಅಕ್ಕಪಕ್ಕದಲ್ಲಿರುವ ಮನೆಗಳು ಹಾಗೂ ಅಂಗಡಿಗಳಿಗೂ ಧೂಳು ನುಗ್ಗಿ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಹೊಟೇಲ್, ಆಸ್ಪತ್ರೆ ಸೇರಿದಂತೆ ವಿವಿಧ ವಾಣಿಜ್ಯ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ದೊಡ್ಡ ಪೈಪ್ಗಳನ್ನು ತಂದು ರಸ್ತೆ ಬದಿ ಹಾಕಿ ತಿಂಗಳು ಕಳೆದಿದ್ದರೂ ಅದನ್ನು ಅಳವಡಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕೆಲವೊಮ್ಮೆ ವಾಹನಗಳಿಂದ ಸವಾರರು ಜಾರಿ ಬಿದ್ದು ಅಪಘಾತಗಳು ಕೂಡ ಸಂಭವಿಸಿದ್ದು, ಕೂಡಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಕುಮಾರ್ ರಸ್ತೆಯಲ್ಲಿ ಓಡಾಡುವುದು ಕೂಡ ಅಪಾಯಕಾರಿಯಾಗಿದ್ದು, ಮಣ್ಣು ಆಗೆದಿರುವುದರಿಂದ ಇಲ್ಲಿರುವ ನೂರಾರು ವರ್ಷಗಳ ಹಳೆ ಮರಗಳ ಬೇರುಗಳು ಸಡಿಲಗೊಂಡು ಬೀಳುವ ಸಾಧ್ಯತೆ ಇದ್ದು, ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.