ಬೆಂಗಳೂರು, ಜೂ.1- ರಾಜಕಾರಣಿ ಹಾಗೂ ಉದ್ಯಮಿ ಯೊಬ್ಬರ ಮನೆ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ನಗದು ಸೇರಿದಂತೆ 1.70 ಕೋಟಿ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ಪಿಸ್ತೂಲನ್ನು ದೋಚಿ ಪರಾರಿಯಾಗಿರುವ ಘಟನೆ ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್ಎಎಲ್ನ ಎಲ್.ಬಿ.ಶಾಸ್ತ್ರಿ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಣಿ ರಮೇಶ್ ಎಂಬು ವವರ ಮನೆ ಇದೆ. ಇವರು ಕಳೆದ ಮೇ 27ರಂದು ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು.
ತಿರುಪತಿಯಲ್ಲಿದ್ದಾಗಲೇ ರಮೇಶ್ ಅವರು ತಮ ಮೊಬೈಲ್ನಲ್ಲಿ ಮನೆಯ ಸಿಸಿಟಿವಿ ಪರಿಶೀಲಿಸಿದಾಗ ಆಫ್ ಆಗಿತ್ತು. ಕರೆಂಟ್ ಹೋಗಿರುವುದರಿಂದ ಸಿಸಿಟಿವಿ ಆಫ್ ಆಗಿರಬಹುದೆಂದು ಅವರು ತಿಳಿದುಕೊಂಡಿದ್ದರು. ಕೆಲವು ಗಂಟೆಗಳ ನಂತರವೂ ಸಿಸಿಟಿವಿ ಆನ್ ಆಗದೆ ಇರುವುದನ್ನು ಕಂಡು ಪಕ್ಕದ ಮನೆಯವರಿಗೆ ಕರೆ ಮಾಡಿ ನಮ ಮನೆಯ ಸಿಸಿಟಿವಿ ಆಫ್ ಆಗಿದೆ, ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ.
ಅವರು ಹೋಗಿ ನೋಡಿದಾಗ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಅವರಿಗೆ ತಿಳಿಸಿದ್ದಾರೆ. ನಂತರ ಅವರು ಸಂಬಂಧಿಕರೊಬ್ಬರಿಗೆ ಮನೆ ಬಳಿ ಹೋಗಿ ನೋಡುವಂತೆ ತಿಳಿಸಿದರು. ಅವರು ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು, ಸೆಕ್ಯೂರಿಟಿ ಹಾಗೂ ಅವನ ಪತ್ನಿ ಇಲ್ಲದಿರುವುದು ಕಂಡುಬಂದಿದೆ. ತಕ್ಷಣ ವಿಷಯವನ್ನು ರಮೇಶ್ ಅವರಿಗೆ ತಿಳಿಸಿದ್ದಾರೆ.
ತಿರುಪತಿಯಿಂದ ವಾಪಸಾದ ನಂತರ ರಮೇಶ್ ಅವರು ಮನೆಯನ್ನು ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿ ತಮ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ದಂಪತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಎಚ್ಎಎಲ್ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ನೇಪಾಳದ ದಂಪತಿ ರಮೇಶ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ನೇಪಾಳದ ರಾಜ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ದೀಪಾ ರಮೇಶ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಔಟ್ಹೌಸ್ನಲ್ಲಿ ವಾಸವಾಗಿದ್ದರು. ಮನೆಗೆ ಬೀಗ ಹಾಕಿಕೊಂಡು ರಮೇಶ್ ಅವರ ಕುಟುಂಬ ತಿರುಪತಿಗೆ ಹೋಗಿದ್ದರಿಂದ ಇದೇ ಒಳ್ಳೆಯ ಅವಕಾಶ ಎಂದು ನೇಪಾಳಿ ದಂಪತಿ ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಸಿಸಿಟಿವಿ ಆಫ್ ಮಾಡಿ ಮುಂಬಾಗಿಲು ಒಡೆದು ನಂತರ ಒಳಹೋಗಿ ಬೆಡ್ರೂಮ್ ಡೋರ್ ಒಡೆದು ಬೀರುವಿನಲ್ಲಿದ್ದ 10 ಲಕ್ಷ ಹಣ, 2 ಕೆಜಿ ಚಿನ್ನಾಭರಣ, ಬೆಳ್ಳಿ ಆಭರಣ ಮತ್ತು ಒಂದು ಪಿಸ್ತೂಲ್ ತೆಗೆದುಕೊಂಡು ಬ್ಯಾಗ್ನಲ್ಲಿ ತುಂಬಿಕೊಂಡಿದ್ದಾರೆ.
ನಂತರ ಮನೆ ಬಳಿ ಕಾರೊಂದನ್ನು ತೆಗೆದುಕೊಂಡು ಬಂದು ಕಳ್ಳತನ ಮಾಡಿದ ಹಣ-ಆಭರಣವನ್ನು ಅದರಲ್ಲಿ ಹಾಕಿಕೊಂಡು ಎಲ್ಲರೂ ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ಮೊದಲೇ ಸೆಕ್ಯೂರಿಟಿ ಗಾರ್ಡ್ ಹಾಗೂ ಅವರ ಸ್ನೇಹಿತರು ಮನೆಯ ಸಿಸಿಟಿವಿಯನ್ನು ಆಫ್ ಮಾಡಿರುವುದು ಗೊತ್ತಾಗಿದೆ. ಪೊಲೀಸರ ತಂಡವೊಂದು ನೇಪಾಳದ ಗಡಿಗೆ ತೆರಳಿ ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸುತ್ತಿದೆ.