ಬೆಂಗಳೂರು, ಜೂ.12- ಆರೋಪ ಮತ್ತು ಪ್ರತ್ಯಾರೋಪಗಳ ಮೂಲಕ ತೀವ್ರ ಗಮನ ಸೆಳೆದು, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದ್ದ ಹಿರಿಯ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ದಾಸರಿ ಮತ್ತು ರೂಪಾ ಡಿ.ಅವರನ್ನು ರಾಜ್ಯ ಸರ್ಕಾರ ಏಕಕಾಲಕ್ಕೆ ವರ್ಗಾವಣೆ ಮಾಡಿದೆ. ಐಪಿಎಸ್ ಅಧಿಕಾರಿಯಾಗಿದ್ದ ರೂಪಾ ಡಿ. ಅವರು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು. ಇಬ್ಬರೂ ಸಾಮಾಜಿಕ ಜಾಲ ತಾಣಗಳಲ್ಲಿ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿದ್ದರು.
ನ್ಯಾಯಾಲಯದ ಮಧ್ಯೆ ಪ್ರವೇಶದ ಮೂಲಕ ವಿವಾದ ತಣ್ಣಗಾಗಿತ್ತು. ರಾಜ್ಯ ಸರ್ಕಾರ ಇಬ್ಬರಿಗೂ ಯಾವುದೇ ಹುದ್ದೆ ತೋರಿಸದೇ ಕೆಲ ಕಾಲ ವರ್ಗಾವಣೆ ಮಾಡಿತ್ತು. ಕಾಲಾನಂತರ ಬೇರೆ ಬೇರೆ ಸಂದರ್ಭಗಳಲ್ಲಿ ಇಬ್ಬರಿಗೂ ಹುದ್ದೆ ನೀಡಲಾಗಿತ್ತು. ಇಂದು ಕಾಕತಾಳಿಯ ಎಂಬಂತೆ ಇವರಿಬ್ಬರ ವರ್ಗಾವಣೆ ಆದೇಶಗಳು ಪ್ರತ್ಯೇಕವಾಗಿ ಹೊರಬಿದ್ದಿವೆ. ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಕರ್ನಾಟಕ ರೇಷೆ ಮಾರಾಟ ಮಂಡಳಿ(ಕೆಎಸ್ಎಂಬಿಎಲ್) ವ್ಯವಸ್ಥಾಪಕ ನಿರ್ದೇಶಕರಾದ ರೂಪಾ.ಡಿ ಅವರನ್ನು ಬೆಂಗಳೂರು ಮಹಾನಗರ ಟಾಸ್ಕ್ಪೋರ್ಸ್ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ವರ್ಗಾಯಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೆ, ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿಗಳಾದ ಶೆಟ್ಟಣ್ಣವರ್ ಎಸ್.ಪಿ ಅವರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಗೆ ಹಾಗೂ ಅಕ್ರಮ್ ಪಾಷಾ ಅವರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ.