ಕಾರವಾರ,ಏ.20- ವಾಯು ವಿಹಾರದ ವೇಳೆ ರೌಡಿ ಶೀಟರ್ನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಂದು ಬೆಳಿಗ್ಗೆ ಬಾಲಮಂದಿರದ ಬಳಿ ನಡೆದಿದೆ. ಕಾರವಾರ ನಗರಸಭೆಯ ಮಾಜಿ ಸದಸ್ಯ ಸತೀಶ್ ಕೋಳಂಕರ್ (63) ಕೊಲೆಯಾದ ರೌಡಿಶೀಟರ್ ಆಗಿದ್ದು, ಈತ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯಾಪಾರದಲ್ಲಿ ತೊಡಗಿದ್ದರು.
ಇಂದು ಬೆಳಿಗ್ಗೆ 8 ಗಂಟೆ ಸಂದರ್ಭದಲ್ಲಿ ವಾಯುವಿಹಾರಕ್ಕಾಗಿ ಮನೆಯಿಂದ ಹೊರ ಬಂದಿದ್ದ ಸತೀಶ್ನನ್ನು ಹಿಂಬಾಲಿಸಿರುವ ದುರ್ಷ್ಕಮಿಗಳು ಬಾಲಮಂದಿರದ ಬಳ ಚಾಕುವಿನಿಂದ ಮನಬಂದಂತೆ ಇರಿದು ಕೊಂದು ಪರಾರಿಯಾಗಿದ್ದಾರೆ.
ಕುಸಿದು ಬಿದ್ದ ಆತನನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕಾರವಾರ ನಗರ ಠಾಣೆ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರ ಠಾಣೆಯಲ್ಲಿ ಆತನ ಮೇಲೆ ರೌಡಿ ಶೀಟರ್ ಪಟ್ಟಿ ಇದ್ದು, ಹಣಕಾಸು ಹಾಗೂ ವೃತ್ತಿ ವೈಷಮ್ಯದಲ್ಲಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಂತಕರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಕಾರವಾರ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.