ಬೆಂಗಳೂರು,ಅ.24- ಹಾಸನಾಂಬೆ ಸನ್ನಿಧಿಯಲ್ಲಿ ಈ ವರ್ಷ ಸಾರ್ವಜನಿಕರ ದರ್ಶನದ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದ 13 ದಿನಗಳಲ್ಲಿ ಬರೋಬ್ಬರಿ 26 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶಕ್ತಿ ದೇವತೆಯ ದರ್ಶನ ಪಡೆದಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಎಂದು ವಿಧಾನಪರಿಷತ್ ಶಾಸಕರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಬಣ್ಣಿಸಿದ್ದಾರೆ.
ರಾಜ್ಯ ಸರ್ಕಾರವು ಘೋಷಿಸಿದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆ ಜಾರಿಯಾದ ನಂತರ, ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದು, ಇದು ಎಲ್ಲ ಧಾರ್ಮಿಕ ಕೇಂದ್ರಗಳ ಆದಾಯ ಮತ್ತು ಭಕ್ತರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದಕ್ಕೆ ಈಗ ಹಾಸನಾಂಬೆಯ ದರ್ಶನವೇ ಸಾಕ್ಷಿ. ಪ್ರತಿ ವರ್ಷ ಹಾಸನಾಮಿ ದರ್ಶನಕ್ಕೆ ನಾಲ್ಕರಿಂದ ಐದು ಲಕ್ಷ ಜನರಷ್ಟೇ ಸೇರುತ್ತಿದ್ದರು. ಆದರೆ ರಾಜ್ಯ ಸರ್ಕಾರ ಉಚಿತವಾಗಿ ಬಸ್ ಪ್ರಯಾಣವನ್ನು ಮಹಿಳೆಯರಿಗೆ ನೀಡಿದ್ದರಿಂದ ಈಗ ಅವರು ಸಹ ಪ್ರವಾಸಿ ತಾಣಗಳ ಸಹಿತ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ಹಾಸನಾಂಬೆಯಂತಹ ಪವಿತ್ರ ಶಕ್ತಿದೇವತೆಗಳ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕರು ಕೈಗೊಂಡಿರುವ ಪಂಚ ಗ್ಯಾರಂಟಿ ನಿರ್ಧಾರದ ಫಲವಾಗಿದೆ. ಈ ಯೋಜನೆಯಿಂದ ರಾಜ್ಯದ ಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ಬಹಳ ದೊಡ್ಡ ಅನುಕೂಲವಾಗಿದೆ. ಸರ್ಕಾರ ಜಾರಿಗೆ ತಂದ ‘ಶಕ್ತಿ’ ಮಹಿಮೆ ಇಂದು ಹಾಸನಾಂಬೆ ಸನ್ನಿಧಿಯಲ್ಲಿ ಕಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ನನ್ನ ಅಭಿನಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
ದಾಖಲೆ ಸಂಖ್ಯೆ ಹಾಗೂ ಆದಾಯ: ದೇವಾಲಯದ ಆಡಳಿತ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಕಳೆದ 13 ದಿನಗಳಲ್ಲಿ ಒಟ್ಟು 26,06,691 ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಇದು ಹಿಂದಿನ ವರ್ಷಕ್ಕೆ (2024ರಲ್ಲಿ 17,47,240 ಭಕ್ತರು) ಹೋಲಿಸಿದರೆ ಶೇ. 49ಕ್ಕಿಂತ ಹೆಚ್ಚು ಭಕ್ತರ ಹೆಚ್ಚಳವಾಗಿದೆ. ದಾಖಲೆಯ ಭಕ್ತರ ಆಗಮನದಿಂದಾಗಿ ದೇವಾಲಯಕ್ಕೆ ಈ ವರ್ಷ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.
