ನವದೆಹಲಿ,ಫೆ.6- ದೇಶದಾದ್ಯಂತ ಮಾಂಸಾಹಾರ ಬ್ಯಾನ್ ಮಾಡಬೇಕು ಎಂಬ ಶತ್ರುಘ್ನ ಸಿನ್ಹಾ ಹೇಳಿಕೆ ನೀಡುವ ಮೂಲಕ ಮಾಂಸಾಹಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್ ಸಿವಿಲ್ ಕೋಡ್) ಜಾರಿಗೆ ಬಂದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ದೇಶಾದ್ಯಂತ ಮಾಂಸಾಹಾರವನ್ನು ಬ್ಯಾನ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅವರ ಹೇಳಿಕೆ ಈಗ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.
ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಬಗ್ಗೆ ಶತ್ರುಘ್ನ ಸಿನ್ಹಾಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯುಸಿಸಿಯನ್ನು ಉತ್ತರಾಖಂಡದಲ್ಲಿ ಪ್ರಾಥಮಿಕ ಹಂತದಲ್ಲಿ ಜಾರಿಗೆ ತಂದಿದ್ದು ಖುಷಿ ಇದೆ. ಇದು ದೇಶದಾದ್ಯಂತ ಬರಬೇಕು ಎಂಬುದು ನನ್ನ ಆಗ್ರಹ ಎಂದು ಅವರು ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯಲ್ಲಿ ಹಲವು ಸೂಕ್ಷ್ಮ ವಿಚಾರ ಮತ್ತು ಲೋಪದೋಷಗಳಿವೆ. ಕೇವಲ ಗೋಮಾಂಸವಲ್ಲ, ಒಟ್ಟಾರೆಯಾಗಿ ಮಾಂಸಾಹಾರವನ್ನೇ ದೇಶದಲ್ಲಿ ನಿಷೇಧಿಸಬೇಕು. ಆದರೆ ಉತ್ತರ ಭಾರತದಲ್ಲಿ ಹೇರಬಹುದಾದ ನಿಯಮಗಳನ್ನು ಈಶಾನ್ಯ ರಾಜ್ಯಗಳಲ್ಲಿ ಹೇರಲು ಸಾಧ್ಯವಿಲ್ಲ. ಯುಸಿಸಿ ನಿಬಂಧನೆಗಳನ್ನು ರಚಿಸುವ ಮೊದಲು ಸರ್ವಪಕ್ಷ ಸಭೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಶತ್ರುಘ್ನ ಅವರ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಯುಸಿಸಿಯಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬುದನ್ನು ಹೇಳುತ್ತಾರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಯುಸಿಸಿ ಆಹಾರ ಮತ್ತು ಅಭ್ಯಾಸಗಳ ಬಗ್ಗೆ ಇಲ್ಲ. ಇದು ಮದುವೆ ಮತ್ತು ಆಸ್ತಿಗಳ ಹಕ್ಕಿನ ಬಗ್ಗೆ ಇರುವ ಕಾಯ್ದೆ ಎಂದು ಕೆಲವರು ತಿರುಗೇಟು ನೀಡಿದ್ಧಾರೆ.
ಈ ವಿಚಾರದಲ್ಲಿ ಶತ್ರುಘ್ನ ಸಿನ್ಹಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೊದಲು ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ನ ವಿವಾಹ ಆದಾಗ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಮದುವೆಗೆ ಶತ್ರುಘ್ನ ಅವರ ಒಪ್ಪಿಗೆ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರು ಒಪ್ಪಿ ವಿವಾಹ ಮಾಡಿಕೊಟ್ಟರು. ಈ ಬಗ್ಗೆ ಟೀಕೆ ಮಾಡಿದವರ ವಿರುದ್ಧ ಶತ್ರುಘ್ನ ಸಿನ್ಹಾ ಕಿಡಿಕಾರಿದ್ದರು