ಬೆಂಗಳೂರು,ಫೆ.26- ಪರಶಿವನ ಮಹಿಮೆ ವರ್ಣಿಸಲು ಅಸದಳ. ಮಹಾಶಿವರಾತ್ರಿಯಂದು ಭಕ್ತರು ಉಪವಾಸವಿದ್ದು, ಭಗವಂತನಗೆ ಅರ್ಚನೆ, ಅಭಿಷೇಕ ಮಾಡುತ್ತಾರೆ. ಏಕಬಿಲ್ವ ಮಾತ್ರದಿಂದ ಸಂತೃಪ್ತನಾಗಿ ಭಕ್ತರಿಗೆ ಒಲಿಯುವ ಪರಮೋದ್ಧಾರನಾದ ಪರಶಿವನ 12 ಜ್ಯೋರ್ತಿಲಿಂಗ ದರ್ಶನ ಮಾಡುವುದರಿಂದ ಸಕಲ ಪಾಪ ನಿವಾರಣೆಯಾಗುತ್ತದೆ ಎಂ ಉಲ್ಲೇಖವಿದೆ.
ವಾರಾಣಾಸಿ ಸೋಮನಾಥ, ಧರ್ಮಸ್ಥಳ, ಮುರುಡೇಶ್ವರ, ಗೋಕರ್ಣ, ಉಜ್ಜಯಿನಿ, ನಂಜನಗೂಡು, ಮಲೆಮಹದೇಶ್ವರ, ಕಾಡುಮಲ್ಲೇಶ್ವರ, ಮೈಲಾರಲಿಂಗೇಶ್ವರ ಮುಂತಾದ ಕ್ಷೇತ್ರಗಳಲ್ಲಿ ಪರಶಿವನ ದರ್ಶನ ಪಡೆಯುವುದು ಪರಮಪುಣ್ಯಪ್ರದ ಎಂದು ಪ್ರತೀತಿ.
ಎಲ್ಲೆಡೆ ಶಿವನಾಮ ಸ್ಮರಣೆ, ಜಾಗರಣೆ, ಶಿವರಾತ್ರಿ ವೈಭವ, ಶಿವನ ಆರಾಧನೆ, ಭಜನೆ, ಸಂಗೀತ ಉತ್ಸವ, ಜಪ, ಓಂಕಾರ ಧ್ಯಾನ ವಿಜೃಂಭಿಸಿದವು.
ಕಾಶಿಯಿಂದ ಕನ್ಯಾಕುಮಾರಿಯವರೆಗೂ ಇರುವ ಶಿವನ ದೇವಾಲಯಗಳಲ್ಲಿ ಶಿವನಾಮದ ಝೇಂಕಾರ ಮಾರ್ದನಿಸಿದವು. ಸೌರಾಷ್ಟ್ರದ ಸೌಮ್ಯನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲೇಶ್ವರ, ಓಂಕಾರದ ಅಮರೇಶ್ವರ, ಪರಲ್ಯಾದ ವೈದ್ಯನಾಥೇಶ್ವರ, ಢಾಕಿನ್ಯಾ, ಭೀಮಶಂಕರ, ಸೇತುಬಂಧದ ರಾಮೇಶ್ವರ, ಗೌತಮಿತಟದ ತ್ರಯಂಬಕೇಶ್ವರ, ಹಿಮಾಲಯದ ಕೇದಾರನಾಥೇಶ್ವರ, ವಾರಣಾಸಿಯ ವಿಶ್ವೇಶ್ವರ, ಶಿವಾಲಯದ ದೃಷೇಶ್ವರ ದ್ವಾದಶ(12) ಜ್ಯೋರ್ತಿಲಿಂಗ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು.
ನಂಜನಗೂಡಿನ ಶ್ರೀಕಂಠೇಶ್ವರ, ಕೋಟಿಲಿಂಗೇಶ್ವರ ಸೇರಿದಂತೆ ಎಲ್ಲೆಡೆ ಶಿವರಾಧಾನೆ, ಶಿವನಾಮ ಸ್ಮರಣೆ ನಡೆಯಿತು. ಇದಲ್ಲದೆ ತುಮಕೂರು ಸಿದ್ದಗಂಗಾ ಮಠ, ಹುಬ್ಬಳ್ಳಿ ಸಿದ್ದರೂಢ ಮಠ, ತರಳಬಾಳು ಮಠ, ಆದಿಚುಂಚನಗಿರಿ ಮಠ ಸೇರಿದಂತೆ ವಿವಿಧ ಮಠ ಮಂದಿರಗಳಲ್ಲಿ ಶಿವರಾಧನೆ, ವಿಶೇಷ ಪೂಜೆ ಪುನಸ್ಕಾರಗಳು ನೆರೆವೇರಿದವು.
ಇದಲ್ಲದೆ ಜಾಗರಣೆಗೆ ವಿವಿಧ ರೀತಿಯ ಸಿದ್ಧತೆಗಳನ್ನು ಶಿವದೇಗುಲಗಳಲ್ಲಿ ಹಮ್ಮಿಕೊಳ್ಳಲಾಗಿದೆ.