ಫ್ಲೋರಿಡಾ, ಜೂ.25-ಪದೇ ಪದೇ ಹವಾಮಾನ ವೈಪರೀತ್ಯದಿಂದ ಮುಂದೂಡಲ್ಪಟ್ಟಿದ್ದ ಬಹುನಿರೀಕ್ಷಿತ ಆಕ್ಸಿಯಮ್ -4 ಮಿಷಮ್ ಗಗನ ಯಾತ್ರೆಯು ಅಮೆರಿಕಾದ ಫ್ಲೋರಿಡಾ, ಕೆನಡಿ ಬಾಹ್ಯಾಕಾಶ ನೌಕಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲುಗಲ್ಲು ಸೃಷ್ಟಿಸಿದೆ.
ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗೇರಿಯದ ಟಬೋರ್ ಕಾಪು, ಪೋಲೆಂಡ್ನ ಸ್ಟಾವೋಸ್ ವಿಸ್ನೀವ್ ವಿಸ್ಕಿ, ಇತರ ಮೂವರು ಸಿಬ್ಬಂದಿ ಬಾಹ್ಯಾಕಾಶಕ್ಕೆ ಪ್ರಯಾಣವನ್ನು ಆರಂಭಿಸಿದ್ದಾರೆ.ಅತ್ತ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಕ್ಷಿಯಮ್-4 ಮಿಷನ್ ಸರಿಯಾಗಿ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಯಶಸ್ವಿಯಾಗಿ ಉಡಾವಣೆಗೊಳ್ಳುತ್ತಿದ್ದಂತೆ ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದ ಭಾರತೀಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಬಹುತೇಕ ಭಾರತೀಯರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಗಗನಯಾತ್ರಿಗಳು ಯಶಸ್ವಿಯಾಗಿ ಹಿಂದಿರುಗಲಿ ಎಂದು ಪ್ರಾರ್ಥಿಸಿದರು.ಈ ಹಿಂದೆ ಬಾಹ್ಯಾಕಾಶಕ್ಕೆ ಭಾರತೀಯ ಮೂಲದ ಆಮೆರಿಕದ ರಾಕೇಶ್ ಶರ್ಮ, ಕಲ್ಪನಾ ಜಾವ್ಯಾ ಮತ್ತು ಸುನೀತಾ ವಿಲಿಯಮ್ಸ್ ಪ್ರಯಾಣ ಬೆಳೆಸಿದ್ದರು. ಇವರು ಭಾರತೀಯರೇ ಆದರೂ ಮೂಲ ಮಾತ್ರ ಅಮೆರಿಕ. ಆದರೆ ಇದೀಗ ವಿಶ್ವದ ಗಗನಯಾತ್ರಿ ಶುಭಾಂಶು ಶುಕ್ಲಾ ಅಪ್ಪಟ ಭಾರತೀಯ ಎಂಬುದು ವಿಶೇಷ.
1984ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ರಾಕೇಶ್ ಶರ್ಮ ಇತಿಹಾಸ ಬರೆದಿದ್ದರು. ಅದಾದ 41 ವರ್ಷಗಳ ಬಳಿಕ ಶುಕ್ಲಾ ಅವರು ಮತ್ತೊಂದು ಹೊಸ ಇತಿಹಾಸವನ್ನು ಬರೆದಿದ್ದಾರೆ. 15 ದಿನಗಳ ಅವಧಿಯ ಈ ಕಾರ್ಯಾಚರಣೆಯಲ್ಲಿ ಆಕ್ಸಿಯಮ್-4 ಮಿಷನ್ನ ನಾಲ್ವರು ಸದಸ್ಯರ ತಂಡವು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಇದರಲ್ಲಿ 7 ಪ್ರಯೋಗಗಳನ್ನು ಭಾರತೀಯರೇ ಪ್ರಸ್ತಾಪಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ. ಆಕ್ಸಿಯಮ್ -4 ಮಿಷನ್ ಉಡಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. 90 ಪ್ರತಿಶತ ಹವಾಮಾನ ಪರಿಸ್ಥಿತಿ
ಅನುಕೂಲಕರವಾಗಿದೆ ಎಂದು ಈ ಮೊದಲು ಸ್ಪೇಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.
ಹವಾಮಾನ ಮತ್ತು ತಾಂತ್ರಿಕ ದೋಷಗಳಿಂದಾಗಿ ಆಕ್ಸಿಯಮ್ -4 ಮಿಷನ್ ಉಡಾವಣೆಯು ಹಲವು ಬಾರಿ ವಿಳಂಬವಾಗಿತ್ತು. ಜೂ.25 ನಾಸಾ ಘೋಷಿಸಿದ ಆರನೇ ದಿನಾಂಕವಾಗಿತ್ತು. ನಾನು
ಉಪಕರಣಗಳನ್ನು ಮಾತ್ರವಲ್ಲದೆ, ಶತಕೋಟಿ ಹೃದಯಗಳ ಭರವಸೆಗಳು ಮತ್ತು ಕನಸುಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತಿದ್ದೇನೆ ಎಂದು ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿಕೊಂಡಿದ್ದರು.
ತಮ್ಮ ಐತಿಹಾಸಿಕ ಪ್ರಯಾಣಕ್ಕೆ ಕೆಲವು ಗಂಟೆಗಳ ಮೊದಲು, ನನಗಾಗಿ ಕಾಯಿರಿ. ನಾನು ಬರುತ್ತೇನೆ ಎಂದು ಗ್ರೂಪ್ ಕ್ಯಾಪ್ಟನ್ ಶುಕ್ಲಾ ತಮ್ಮ ಕುಟುಂಬಕ್ಕೆ ಸಂದೇಶ ಕಳುಹಿಸಿ ಸರಿಸುಮಾರು 28 ಗಂಟೆಗಳ ಪ್ರಯಾಣದ ನಂತರ ಅಕ್ಸಿಯಮ್-4 ಗಗನಯಾತ್ರಿಗಳು ನಾಳೆ ಸಂಜೆ 4.30ರ ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಆಕ್ಸಿಯಮ್-4 ವಾಣಿಜ್ಯ ಕಾರ್ಯಾಚರಣೆಯನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಿದ್ದು, ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲಿಷ್ ಗಗನಯಾತ್ರಿ ಸ್ಲಾವೋಸ್ಟ್ ಉಜ್ಞಾನ್ಸಿ-ವಿಸ್ನೀಯೆವಿಸ್ಕಿ ಮಿಷನ್ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಗಗನಯಾತ್ರಿಗಳು ಮೇ 25ರಿಂದಲೂ ಕ್ವಾರಂಟೈನ್ನಲ್ಲಿದ್ದಾರೆ.
ಆಕ್ಸ್-4 ಮಿಷನ್ ಪ್ರಮುಖ ಸಂಶೋಧನೆಗಳನ್ನು ಸಹ ನಡೆಸುತ್ತಿದೆ, ಇದರಲ್ಲಿ ಅಮೆರಿಕ, ಭಾರತ, ಪೋಲೆಂಡ್, ಹಂಗೇರಿ, ಸೌದಿ ಅರೇಬಿಯಾ, ಬ್ರೆಜಿಲ್, ನೈಜೀರಿಯಾ, ಯುಎಇ ಮತ್ತು ಯುರೋಪಿನಾದ್ಯಂತದ ರಾಷ್ಟ್ರಗಳು ಸೇರಿದಂತೆ 31 ದೇಶಗಳನ್ನು ಪ್ರತಿನಿಧಿಸುವ ಸುಮಾರು 60 ವೈಜ್ಞಾನಿಕ ಅಧ್ಯಯನಗಳು ಮತ್ತು ಚಟುವಟಿಕೆಗಳು ಸೇರಿವೆ. ಶುಭಾಂಶು ಶುಕ್ಲಾ ಅವರ ಈ ಕಾರ್ಯಾಚರಣೆಯು 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯನನ್ನು ಇಳಿಸುವ ಭಾರತದ ಬಾಹ್ಯಾಕಾಶ ಮಾರ್ಗಸೂಚಿಗೆ ಅಡಿಪಾಯ ಹಾಕಲಿದೆ.
ಈ ಕಾರ್ಯಾಚರಣೆಯನ್ನು ಮೂಲತಃ ಮೇ 29ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ನಂತರ ಜೂನ್ 8, ಬಳಿಕ ಜೂನ್ 10 ಮತ್ತು ಜೂನ್ 11ಕ್ಕೆ ಮುಂದೂಡಲಾಗಿತ್ತು. ಏಕೆಂದರೆ, ಎಂಜಿನಿಯರ್ಗಳು ಫಾಲ್ಕನ್ -9 ರಾಕೆಟ್ ಬೂಸ್ಟರ್ಗಳಲ್ಲಿ ದ್ರವ ಆಮ್ಲಜನಕ ಸೋರಿಕೆಯನ್ನು ಪತ್ತೆ ಮಾಡಿದ್ದರು ಹಾಗೂ ನಾಸಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹಳೆಯ ರಷ್ಯಾದ ಮಾಡ್ಯೂಲ್ ನಲ್ಲೂ ಸೋರಿಕೆಯನ್ನು ಪತ್ತೆ ಮಾಡಿತ್ತು.
ನಂತರ ಜೂನ್ 19ರಂದು ಮತ್ತು ಜೂನ್ 22 ರಂದು ಉಡಾವಣೆಯನ್ನು ಯೋಜಿಸಲಾಗಿತ್ತು, ಆದರೆ ರಷ್ಯಾದ ಮಾಡ್ಯೂಲ್ನಲ್ಲಿನ ದುರಸ್ತಿಯ ನಂತರ ನಾಸಾ ಕಾರ್ಯಾಚರಣೆಗಳನ್ನು ಮೌಲ್ಯ ಮಾಪನ ಮಾಡಲು ಅವಕಾಶ ನೀಡುವ ಸಲುವಾಗಿ ಅದನ್ನು ಮುಂದೂಡಲಾಗಿತ್ತು.ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ, ಸೋವಿಯತ್ ಇಂಟರ್ ಕಾಸ್ಟೋಸ್, ಕಾರ್ಯಕ್ರಮದ ಭಾಗವಾಗಿ ಏಪ್ರಿಲ್ 3, 1984 ರಂದು ಸೋಯುಜ್ ಟಿ -11 ನಲ್ಲಿ ಹಾರಾಟ ನಡೆಸಿದ ಭಾರತೀಯ ವಾಯುಪಡೆಯ ಅಧಿಕಾರಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರನ್ನು ಅನುಕರಿಸಲು ಇದು ಒಂದು ಅವಕಾಶವಾಗಿದೆ. ರಾಕೇಶ್ ಶರ್ಮಾ ಸಲ್ಯುಟ್ 7 ಬಾಹ್ಯಾಕಾಶ ನಿಲ್ದಾಣದಲ್ಲಿ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದರು.