ಬೆಂಗಳೂರು,ಫೆ.25- ಈಗಲಾದರೂ ಮೂಡಾ ಹಗರಣವನ್ನು ಸಿಬಿಐಗೆ ವಹಿಸಿ ತನಿಖೆ ಎದುರಿಸಿ. ತಾವು ಸತ್ಯವಂತರಾಗಿದ್ದರೆ ಸಿಬಿಐ ತನಿಖೆ ಬಗ್ಗೆ ಭಯವೇಕೆ? ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೂಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ಚಿಟ್ ನೀಡಿದ್ದಾರೆ ಎಂದು ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ನವರೇ, ಲೋಕಾಯುಕ್ತ ತನಿಖೆ ಬಗ್ಗೆ ನಿಮ್ಮ ಪರಮಾಪ್ತ ಸಚಿವ ಕೆ.ಎನ್.ರಾಜಣ್ಣ ಅವರು ಏನು ಹೇಳಿದ್ದಾರೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.
ಯಾವುದೇ ಪ್ರಕರಣವನ್ನ ಲೋಕಾಯುಕ್ತ ತನಿಖೆಗೆ ಕೊಡುವುದೂ ಒಂದೇ, ಸ್ಮಶಾನಕ್ಕೆ ಹೋಗುವುದೂ ಒಂದೇ ಎಂದು ಸರ್ಟಿಫಿಕೇಟ್ ಕೊಡುವ ಮೂಲಕ ಮೂಡಾ ಹಗರಣವನ್ನು ತಾವು ಹೇಗೆ ಮುಚ್ಚಿಹಾಕಿ ಸತ್ಯವನ್ನು ಸಮಾಧಿ ಮಾಡಲು ಹೊರಟಿದ್ದೀರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಗ್ಯಾರಂಟಿಗಳಿಗೆ ಮುಂದುವರೆಯುವ ಗ್ಯಾರಂಟಿ ಇಲ್ಲ!! ಅಧಿಕಾರಕ್ಕೇರಲು ಅವಾಸ್ತವಿಕ ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಗ್ಯಾರಂಟಿಗಳನ್ನು ಬಂದ್ ಮಾಡಲು ಹೊರಟಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಾಸ್ತವಿಕ ಗ್ಯಾರಂಟಿಗಳು ಇನ್ನು ಮುಂದೆ ಮಹಾದೇಪ್ಪರಿಗೂ ಇಲ್ಲ, ಕಾಕಾ ಪಾಟೀಲರಿಗೂ ಇಲ್ಲ!! ಎಂದು ವ್ಯಂಗ್ಯವಾಡಿದ್ದಾರೆ.