ಬೆಂಗಳೂರು,ಫೆ.18-ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದಕ್ಕಿಂತ ಈಗಲಾದರೂ ರಾಜೀನಾಮೆ ಕೊಟ್ಟು ಗೌರವದಿಂದ ನಿರ್ಗಮಿಸಿ. ತಾವು ಕುರ್ಚಿಗೆ ಅಂಟಿಕೊಂಡು ಕೂತಷ್ಟೂ ತಮ್ಮ ಗೌರವ, ವರ್ಚಸ್ಸು ಮತ್ತಷ್ಟು ಕಡಿಮೆ ಆಗುವುದಂತೂ ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಎಚ್ಚರಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲ ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಪೋಸ್ಟ್ ಮಾಡಿರುವ ಆರ್.ಆಶೋಕ್, ಮತ್ತೊಂದು ಪೋಸ್ಟ್ನಲ್ಲಿ ಮೂಡಾ ಹಗರಣದಿಂದ ಬಚಾವಾಗಲು, ಅಧಿಕಾರ ಹಂಚಿಕೆಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಣತಂತ್ರ ಹಣೆಯುವಲ್ಲಿ ಸಂಪೂರ್ಣವಾಗಿ ನಿರತವಾಗಿರುವ ನಿರ್ಗಮಿತ ಸಿಎಂ ಸಿದ್ದರಾಮಯ್ಯನವರಿಗೆ ಪಾಪ ಮೂರು ತಿಂಗಳಿನಿಂದ ಅನ್ನಭಾಗ್ಯದ ಹಣ, ಗೃಹಲಕ್ಷ್ಮಿ ಹಣ ಪಾವತಿ ಬಾಕಿ ಇರುವುದೇ ಗೊತ್ತಿಲ್ಲವಂತೆ ಎಂದು ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಮನವರೇ ತಮಗೆ ಗೊತ್ತಿಲ್ಲದೆ ತಮ್ಮ ಸರ್ಕಾರದಲ್ಲಿ ಇನ್ನೂ ಏನೇನು ಕರ್ಮಕಾಂಡ ನಡೆಯುತ್ತಿದೆಯೋ ಆ ಪರಮಾತ್ಮನಿಗೆ ಗೊತ್ತು. ತಮಗೆ ಗೊತ್ತಿಲ್ಲದೆ ಯಾವ್ಯಾವ ಮಂತ್ರಿಗಳು, ಯಾವ್ಯಾವ ಶಾಸಕರು ಅದೆಷ್ಟು ಲೂಟಿ ಹೊಡೆಯುತ್ತಿದ್ದಾರೋ ಆ ದೇವರೇ ಬಲ್ಲ ಎಂದು ಕುಹಕವಾಡಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಜೈಲು ಪಾಲಾಗಿ, ಅಧಿಕಾರ ಕಳೆದುಕೊಳ್ಳಲು ಕಾರಣವಾದ ಬಹುಕೋಟಿ ಅಬಕಾರಿ ಹಗರಣದ ಟ ಮಾದರಿಯಲ್ಲೇ ಕರ್ನಾಟಕದಲ್ಲೂ ಅಬಕಾರಿ ಹಗರಣವೊಂದು ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲದ ಮದ್ಯದ ಅಂಗಡಿಗಳನ್ನು ಕಾನೂನುಬಾಹಿರವಾಗಿ ಹರಾಜು ಹಾಕಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನೂ ಲೂಟಿ ಮಾಡಲು ಮತ್ತೊಂದು ಅಡ್ಡದಾರಿ ಹಿಡಿಯಲು ಹೊರಟಿದೆ ಎಂದು ವಾಗಳಿ ನಡೆಸಿದ್ದಾರೆ.