ಬೆಂಗಳೂರು,ಜೂ.12- ಕರ್ನಾಟಕದ ಗಡಿ ಜಿಲ್ಲೆಗಳಿಂದ ಆಂಧ್ರಪ್ರದೇಶದ ಚಿತ್ತೂರಿಗೆ ತೋತಾಪುರಿ ಮಾವಿನ ಹಣ್ಣುಗಳ ಸಾಗಾಣಿಕೆ ನಿಷೇಧವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ಅವರು, ಜೂ.7 ರಂದು ಚಿತ್ತೂರಿನ ಜಿಲ್ಲಾಧಿಕಾರಿ ತೋತಾಪುರಿ ಮಾವು ಸಾಗಾಣಿಕೆಯಲ್ಲಿ ನಿರ್ಬಂಧಿಸಿದ್ದಾರೆ.
ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಮಾವು ಸಾಗಾಣಿಕೆಯನ್ನು ತಡೆಯಲು ಗಡಿಭಾಗದಲ್ಲಿ ಕಂದಾಯ, ಪೊಲೀಸ್, ಅರಣ್ಯ ಮತ್ತು ಮಾರುಕಟ್ಟೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡು ಮತ್ತು ಕರ್ನಾಟಕದಿಂದ ಮಾವಿನ ಹಣ್ಣುಗಳ ಸಾಗಾಣಿಕೆಯನ್ನು ತಡೆ ಹಿಡಿಯಲಾಗಿದೆ. ಇದು ಸಮರ್ಥನೀಯವಾದ ಕ್ರಮವಲ್ಲ ಎಂದು ಆಕ್ಷೇಪಿಸಿದ್ದಾರೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ಮಾವಿನ ಹಣ್ಣುಗಳ ಬೆಳೆಗಾರರು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಚಿತ್ತೂರಿನಲ್ಲಿರುವ ಮಾವಿನ ಹಣ್ಣು ಸಂಸ್ಕರಣಾ ಘಟಕದೊಂದಿಗೆ ಸುದೀರ್ಘ ಕಾಲದಿಂದಲೂ ಕರ್ನಾಟಕದ ರೈತರು ಸಂಬಂಧ ಹೊಂದಿದ್ದರು. ಇದರಿಂದ ಮಾರುಕಟ್ಟೆ ವಿಸ್ತರಣೆ ನಡೆಯುತ್ತಿದೆ. ಪ್ರಸ್ತುತ ನಿರ್ಬಂಧ, ಚಾಲ್ತಿಯಲ್ಲಿರುವ ಸರಬರಾಜು ಸರಪಳಿಯನ್ನು ಕಡಿತಗೊಳಿಸಿದ್ದು, ಪೂರ್ವ ಮುಂಗಾರು ನಷ್ಟು ಹಾಗೂ ಸಾವಿರಾರು ರೈತರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿವರಿಸಿದ್ದಾರೆ.
ಯಾವುದೇ ಸಮಾನೋಚನೆ ಹಾಗೂ ಸಮನ್ವಯತೆ ಇಲ್ಲದೆ ತೆಗೆದುಕೊಂಡಿರುವ ಈ ಕ್ರಮ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ಧಕ್ಕೆಯಾಗಿದೆ. ಅಂತರಾಜ್ಯಗಳ ನಡುವೆ ತರಕಾರಿ ಮತ್ತು ಕೃಷಿ ವಿನಿಮಯವನ್ನು ಬಾಧಿತಗೊಳಿಸಿದೆ. ಈಗಾಗಲೇ ಸಂಬಂಧಪಟ್ಟವರು ವಹಿವಾಟುಗಳನ್ನು ಕಡಿತಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಾರ ವಹಿವಾಟಿನ ನಷ್ಟವಾಗುವ ಆತಂಕವಿದೆ ಎಂದು ವಿವರಿಸಿದ್ದಾರೆ.