Saturday, August 2, 2025
Homeರಾಜ್ಯಲಭ್ಯವಾಗಿರುವ ಅಸ್ಥಿಪಂಜರಗಳ ರಹಸ್ಯ ಬೇಧಿಸಲು ಮುಂದಾದ ಎಸ್‌‍ಐಟಿ

ಲಭ್ಯವಾಗಿರುವ ಅಸ್ಥಿಪಂಜರಗಳ ರಹಸ್ಯ ಬೇಧಿಸಲು ಮುಂದಾದ ಎಸ್‌‍ಐಟಿ

SIT to unravel mystery of available skeletons

ಬೆಂಗಳೂರು,ಆ.1- ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಕಾಡುಪ್ರದೇಶದಲ್ಲಿ ಅನಾಮಿಕ ಗುರುತಿಸಿದ ಪಾಯಿಂಟ್‌ ನಂಬರ್‌ 6ರಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಹೀಗಾಗಿ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಅಸ್ಥಿಪಂಜರದ ರಹಸ್ಯ ಕೆದಕಲು ಮುಂದಾಗಿದೆ.

ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ಅಸ್ಥಿಪಂಜರಗಳು ವಯಸ್ಸು, ಲಿಂಗ, ಮತ್ತು ಸಾವಿನ ಕಾರಣದ ಬಗ್ಗೆ ಫೋರೆನ್ಸಿಕ್‌ ಮಾನವಶಾಸ್ತ್ರಜ್ಞರಿಗೆ ಗಮನಾರ್ಹ ಸುಳಿವುಗಳನ್ನು ನೀಡಬಹುದು. ಆದರೆ ಅವು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದ್ದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಫೋರೆನ್ಸಿಕ್‌ ಮಾನವಶಾಸ್ತ್ರ ವಿಜ್ಞಾನದ ಕೆಲವು ಫೋರೆನ್ಸಿಕ್‌ ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕ್ಕೆ ದೂರುದಾರ ಗುರುತಿಸಿದ ಆರನೇ ಸಮಾಧಿ ಸ್ಥಳದಲ್ಲಿ ಕೆಲವು ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ. ಅದನ್ನು ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಮೂಳೆಗಳನ್ನು ಪರೀಕ್ಷಿಸಲು ಈ ಪ್ರಕ್ರಿಯೆಯು ಕೆಲವು ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ, ಇದನ್ನು ಡಿಎನ್‌ಎ ಪ್ರೊಫೈಲಿಂಗ್‌ಗಾಗಿ ಫೋರೆನ್ಸಿಕ್‌ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಸ್ಥಿಪಂಜರದ ವಯಸ್ಸು ಮತ್ತು ಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿ ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

ಅಸ್ಥಿಪಂಜರ ಒಟ್ಟಾಗಿ ಸಿಕ್ಕರೆ, ಅದರಿಂದ ಲಿಂಗ, ಅಂದಾಜು ವಯಸ್ಸು, ಎತ್ತರ ಮತ್ತು ಅನೇಕ ಸಂದರ್ಭಗಳಲ್ಲಿ ಸಾವಿಗೆ ಕಾರಣದ ಬಗ್ಗೆ ಅಮೂಲ್ಯವಾದ ವೈಜ್ಞಾನಿಕ ಪುರಾವೆಗಳನ್ನು ಒದಗಿಸುತ್ತವೆ. ಅಸ್ಥಿಪಂಜರವನ್ನು ಕಾಣೆಯಾದ ವ್ಯಕ್ತಿಯೊಂದಿಗೆ ಜೋಡಿಸಲು, ಕಾಣೆಯಾದ ವ್ಯಕ್ತಿಯ ಛಾಯಾಚಿತ್ರದ ಮೇಲೆ ತಲೆಬುರುಡೆಯನ್ನು ಮರು-ಅಳವಡಿಸಲು ಬಯೋಲಾಜಿಕಲ್‌ ಸಂಬಂಧಿಯಿಂದ ಡಿಎನ್‌ಎ ಮಾದರಿ ಇರಬೇಕು. ಮಾನವ ತಲೆಬುರುಡೆ, ಉದ್ದನೆಯ ಮೂಳೆಗಳಿಂದ ಲಿಂಗ, ವಯಸ್ಸು ಮತ್ತು ಸಾವಿನ ಸಂಭವನೀಯ ಕಾರಣವನ್ನು ಅಳೆಯಬಹುದು. ಅಸ್ಥಿಪಂಜರದ ಅವಶೇಷಗಳು 22 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಮೌಲ್ಯ ಮಾಪನ ನಿಖರವಾಗಿರಬಹುದು ಎಂದಿದ್ದಾರೆ.

ವಯಸ್ಸಾದ ವ್ಯಕ್ತಿಗಳಲ್ಲಿ ಅಂದಾಜಿನ ಮೇಲೆ ನಿರ್ಧರಿಸ ಲಾಗುತ್ತದೆ. ಮೂಳೆಗಳಿಂದ ದೇಹದ ಮೇಲೆ ತೀವ್ರವಾದ ಗಾಯಗಳಾಗಿವೆಯೇ ಎಂದು ಹೇಳಬಹುದು, ಏಕೆಂದರೆ ಮುರಿತದ ಚಿಹ್ನೆಗಳು ಇರುತ್ತವೆ. ವೈದ್ಯಕೀಯ-ಕಾನೂನು ಪ್ರಕರಣದಲ್ಲಿ ತಲೆಬುರುಡೆಯ ಮುರಿತವು ವಿಧಿವಿಜ್ಞಾನದ ಪ್ರಮುಖ ಸಾಕ್ಷ್ಯವಾಗಿದೆ. ವಿಷಪೂರಿತತೆಯಿಂದ ಸಾವನ್ನು ಮೂಳೆಗಳಲ್ಲಿ ಕಂಡುಬರುವ ವಿಷದ ನಿಕ್ಷೇಪಗಳಿಂದಲೂ ಖಚಿತಪಡಿಸಿಕೊಳ್ಳಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ದವಡೆ ಹಲ್ಲುಗಳು ಮತ್ತು ಉದ್ದನೆಯ ಮೂಳೆಯಿಂದ ಹೊರತೆಗೆಯಲಾದ ಡಿಎನ್‌ಎಇಂದ ವಿಶೇಷವಾಗಿ ತೊಡೆಯ ಮೂಳೆ (ಎಲುಬು) ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ನಂತರ ಮಾದರಿಯನ್ನು ಸತ್ತವರ ರಕ್ತ ಸಂಬಂಧಿಯ ಡಿಎನ್‌ಎ ಜೊತೆ ಹೋಲಿಸಲಾಗುತ್ತದೆ ಎಂದು ತಜ್ಞರು ಹೇಳಿದರು.

ಒಂದು ವೇಳೆ ಉಸಿರುಗಟ್ಟಿಸುವಿಕೆಯಿಂದ ಸಾವು ಸಂಭವಿಸಿದ್ದರೆ ಮೂಳೆಗಳು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ತಾಜಾ ಅಸ್ಥಿಪಂಜರಗಳಿಂದ ಹೆಚ್ಚಿನ ಮಾಹಿತಿ ಸಿಗುತ್ತದೆ. ಅಸ್ಥಿಪಂಜರಗಳು ಕೊಳೆತು ಹೋಗಿದ್ದರೇ ಅವುಗಳಿಂದ ಮೃದು ಅಂಗಾಂಶಗಳನ್ನು ಪಡೆಯುವುದು ಕಷ್ಟ. ದೇಹವನ್ನು ಹೂಳಲಾದ ಮಣ್ಣಿನ ಸ್ವರೂಪವನ್ನು ಅವಲಂಬಿಸಿ ಅಸ್ಥಿಪಂಜರ ಕೊಳೆಯಲು ಒಂದರಿಂದ ಮೂರು ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.

ಮಣ್ಣಿನಲ್ಲಿರುವ ವಿಷ ಮಾನವ ಅವಶೇಷಗಳನ್ನು ಕಲುಷಿತಗೊಳಿಸಬಹುದು ಮತ್ತು ವಿಧಿವಿಜ್ಞಾನ ಮಾನವಶಾಸ್ತ್ರವನ್ನು ಕಷ್ಟಕರವಾಗಿಸಬಹುದು ಎಂಬುದು ಮತ್ತೊಬ್ಬ ವಿಧಿವಿಜ್ಞಾನ ತಜ್ಞರು ಹೇಳುತ್ತಾರೆ.

ಕಾಣೆಯಾದ ವ್ಯಕ್ತಿಗಳ ಗುರುತು, ಸಾವಿನ ಕಾರಣ, ವಿಶೇಷವಾಗಿ ಅವಶೇಷಗಳು ಅಸ್ಥಿಪಂಜರವಾದಾಗ, ಕೊಳೆದಿದ್ದಾಗ ಅಥವಾ ಗುರುತಿಸಲಾಗದಿದ್ದಾಗ, ವಿಧಿವಿಜ್ಞಾನ ಮಾನವಶಾಸ್ತ್ರವು ಒಂದು ನಿರ್ಣಾಯಕ ವಿಧಾನವಾಗಿದೆ. ವಿಧಿವಿಜ್ಞಾನದ ಮಾನವಶಾಸ್ತ್ರಜ್ಞರು ಮೃತರ ವಯಸ್ಸು, ಲಿಂಗ, ಪೂರ್ವಜರು ಮತ್ತು ನಿಲುವನ್ನು ನಿರ್ಧರಿಸಲು ಅಸ್ಥಿಪಂಜರದ ಅವಶೇಷಗಳನ್ನು ನಿರ್ಣಯಿಸುತ್ತಾರೆ . ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಬೆಳ್ತಂಗಡಿ ದಾಖಲೆಗಳ ತಲಾಶ್‌ :ಎಸ್‌‍ಐಟಿಯು ಬೆಳ್ತಂಗಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ 1995 ರಿಂದೀಚೆಗಿನ ಎಲ್ಲ ಅನುಮಾನಾಸ್ಪದ ಸಾವುಗಳು ಮತ್ತು ಯುಡಿಆರ್‌ (ಅನಾಮಿಕ ಮೃತದೇಹ) ಪ್ರಕರಣಗಳ ದಾಖಲೆಗಳನ್ನು ಕೆದಕಲು ಆರಂಭಿಸಿದೆ. ದೂರುದಾರನ ಮಾಹಿತಿಯ ಆಧಾರದ ಮೇಲೆ, ಈ ಅವಶೇಷಗಳು 2003 ರಲ್ಲಿ ಕಾಣೆಯಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್‌‍ಗೆ ಸಂಬಂಧಿಸಿರಬಹುದೇ ಎಂಬ ಕೋನದಿಂದಲೂ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಔಟ್‌‍ಪೋಸ್ಟ್‌‍ನಲ್ಲಿ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್‌‍ ಅಧಿಕಾರಿಗಳ ಪಟ್ಟಿಯನ್ನೂ ಎಸ್‌‍ಐಟಿಯು ಪಡೆದುಕೊಂಡಿದೆ.

ಮುಂದಿರುವ ಸವಾಲುಗಳು! :
ಡಿಜಿಪಿ ಡಾ. ಪ್ರಣವ್‌ ಮೊಹಾಂತಿ ನೇತೃತ್ವದ ಎಸ್‌‍ಐಟಿಯು 29 ಸದಸ್ಯರ ತಂಡವನ್ನು ಹೊಂದಿದ್ದು, ಇತ್ತೀಚೆಗೆ 9 ಹೆಚ್ಚುವರಿ ಸಿಬ್ಬಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ತಂಡವು ದೂರುದಾರನನ್ನು ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಅವನ ಹೇಳಿಕೆಯ ನಿಖರತೆಯನ್ನು ಪರೀಕ್ಷಿಸುತ್ತಿದೆ. ಫೋರೆನ್ಸಿಕ್‌ ತಜ್ಞರು, ಕೆಎಂಸಿ ವೈದ್ಯರ ತಂಡ, ಮತ್ತು ಎಫ್‌ಎಸ್‌‍ಎಲ್‌ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆಯನ್ನು ವೈಜ್ಞಾನಿಕವಾಗಿ ನಡೆಸಲಾಗುತ್ತಿದೆ.

ಶವ ಹೂತ ಪ್ರಕರಣದಲ್ಲಿ ಪಾಯಿಂಟ್‌ ನಂಬರ್‌ 6 ರಲ್ಲಿ ಪತ್ತೆಯಾದ ಅಸ್ಥಿಪಂಜರವು ಈ ರಹಸ್ಯಕ್ಕೆ ಹೊಸ ಆಯಾಮವನ್ನು ನೀಡಿದೆ. ಎಸ್‌‍ಐಟಿಯ ತೀವ್ರ ಕಾರ್ಯಾಚರಣೆಯು ಸತ್ಯವನ್ನು ಬೆಳಕಿಗೆ ತರಲು ಬದ್ಧವಾಗಿದ್ದು, ಫೋರೆನ್ಸಿಕ್‌ ವರದಿಗಳು ಮತ್ತು ದೂರುದಾರನಿಂದ ಮಾಹಿತಿ, ಹಳೆಯ ದಾಖಲೆಗಳ ತಲಾಶ್‌ನಿಂದ ಈ ಕಳೇಬರದ ಗುರುತು ಶೀಘ್ರದಲ್ಲಿ ದೃಢೀಕೃತವಾಗುವ ಸಾಧ್ಯತೆ ಇದೆ.

RELATED ARTICLES

Latest News