ಬೆಂಗಳೂರು, ಅ.31– ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಇಂದು ಸಂಜೆ ತೆರೆ ಬೀಳಲಿದೆ. ಆದರೆ, ಆನ್ಲೈನ್ ಮೂಲಕ ಮಾಹಿತಿ ನೀಡುವವರಿಗೆ ನವೆಂಬರ್ 10ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 22ರಿಂದ ಪ್ರಾರಂಭವಾದ ಈ ಸಮೀಕ್ಷೆಯು ಅಕ್ಟೋಬರ್ 7ರಂದು ಮುಗಿಯಬೇಕಿತ್ತು. ಆದರೆ, ಜಿಬಿಎ ವ್ಯಾಪ್ತಿಯಲ್ಲಿ ತಡವಾಗಿ ಸಮೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಸಮೀಕ್ಷೆಯ ಅಂತಿಮ ಗಡುವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇಂದಿಗೆ ಆ ಗಡುವು ಮುಗಿಯುತ್ತಿದ್ದು, ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ.
ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್ಲೈನ್ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳುವವರಿಗೆ ಅವಧಿಯನ್ನು ನವೆಂಬರ್ 10ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
http://kscbcselfdeclaration.karnataka.gov.in ಈ ಲಿಂಕ್ ಮೂಲಕ ಆನ್ಲೈನ್ನಲ್ಲಿ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.ನಿನ್ನೆಯವರೆಗೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಮತ್ತು 5,52,57,205 ಜನರ ಸಮೀಕ್ಷೆ ಮುಗಿದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಕಂಡುಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರು ಇರುತ್ತಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಮಾಹಿತಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್ ಮೀಟರ್ಗಳು ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ. ಏಕೆ? ಸಮೀಕ್ಷೆ ಕಡಿಮೆಯಾಗಿದೆ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

