ಬೆಂಗಳೂರು,ಜೂ.11- ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿರುವ ಬಳ್ಳಾರಿ ಸಂಸದ ವಿ.ವಿ.ತುಕಾರಾಮ್ ಹಾಗೂ ಶಾಸಕರಿಗೆ ಕನಿಷ್ಟಪಕ್ಷ ನೈತಿಕತೆ ಇದ್ದರೆ ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸಂಸದ ಇ.ವಿ.ತುಕರಾಮ್, ಶಾಸಕರಾದ ಬಿ.ನಾಗೇಂದ್ರ, ಜೆ.ಎನ್.ಗಣೇಶ್,ನಾ.ರಾ.ಭರತ ರೆಡ್ಡಿ, ಡಾ.ಶ್ರೀನಿವಾಸಮೂರ್ತಿ ಲಪಟಾಯಿಸಿರುವುದು ಇ.ಡಿ ದಾಳಿಯಿಂದಲೇ ಸಾಬೀತಾಗಿದೆ. ಇವರು ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು.
ತುಕಾರಾಮ್ ಸೇರಿದಂತೆ ಯಾರು ಕೂಡ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ತಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಲಿ ಇಲ್ಲದಿದ್ದರೆ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಆರೋಪದ ಮೇಲೆ ಚುನಾವಣಾ ಆಯೋಗ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. ಸಂಸದ ತುಕಾರಾಮ್, ಶಾಸಕರಾದ ನಾರಾಭರತ್ ರೆಡ್ಡಿ, ಡಾ.ಶ್ರೀನಿವಾಸ, ಜೆ ಎನ್ ಗಣೇಶ್ ಮನೆ ಮೇಲೆ ಇಡಿ ದಾಳಿ ಆಗಿದೆ. ತಾವು ಸಾಚಾಗಳು ಅಂತ ಇವರು ಬಹಳ ಮಾತಾಡುತ್ತಿದ್ದರು. ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎಂದು ವ್ಯಂಗ್ಯವಾಡಿದರು.
ಸಂಡೂರು ಉಪಚುನಾವಣೆಯಲ್ಲಿ ರಾಮುಲು ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ಮಾಡಿತ್ತು. ತನ್ನನ್ನು ಮುಗಿಸಬೇಕೆಂದು ವಾಲೀಕಿ ನಿಗಮದ ಹಣ ಚುನಾವಣೆಯಲ್ಲಿ ಖರ್ಚು ಮಾಡಿದ್ದರು. ವಾಲೀಕಿ ಹಣದಿಂದ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಿತು. ವಾಲ್ಮೀಕಿ ಹಗರಣ ಸಾಬೀತಾದರೆ ತುಕಾರಾಂ ಹಾಗೂ ಶಾಸಕರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ರೆಡ್ಡಿಗೆ ಜಾಮೀನು, ಶಿಕ್ಷೆ ಅಮಾನತು ಕುರಿತು ಮಾತನಾಡಿದ ಅವರು, ನನಗೆ ಈಗ ತಾನೇ ರೆಡ್ಡಿಗೆ ಜಾಮೀನು ಸಿಕ್ಕ ಬಗ್ಗೆ ಮಾಹಿತಿ ಸಿಕ್ಕಿತು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಾನು ಮಾತಾಡುತ್ತೇನೆ ಇದೇ ವೇಳೆ ಅವರು ತಿಳಿಸಿದರು.
ಜಾತಿ ಜನಗಣತಿಗೆ ಕೋಟ್ಯಂತರ ರೂ. ಖರ್ಚು ಮಾಡಿದರು. ಆ ಹಣ ಹೊಳೇಲಿ ಹುಣಸೇ ಹಣ್ಣು ಕಿವುಚಿದಂತಾಗುತ್ತದೆ ಎಂದು ಅವರೇ ಹೇಳುತ್ತಿದ್ದರು. ಈಗ ಅವರೇ ಮರುಸರ್ವೆಗೆ ಹೈಕಮಾಂಡ್ ಮುಂದೆ ಒಪ್ಪಿ ಬಂದಿದ್ದಾರೆ. ಕಾಲ್ತುಳಿತ ದುರಂತವನ್ನು ಮರೆಮಾಚಲು ಮಾಡಲು ಮರುಸರ್ವೆ ಮಾಡಲು ಮುಂದಾಗಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.