ಬೆಂಗಳೂರು, ಜೂ.9- ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಪೊಲೀಸರು ಕೆಲವರಿಗೆ ನೋಟೀಸ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಬಿ.ಕೆ. ಸಿಂಗ್ ಅವರು ತನಿಖಾ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲವು ಸಲಹೆ, ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ. ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಗೆ ಸಿಐಡಿ ತಂಡ ಭೇಟಿ ನೀಡಿ ಕಾಲ್ತುಳಿತ ದುರಂತದ ಬಗ್ಗೆ ಪರಿಶೀಲಿಸಿದ್ದು, ಅಲ್ಲಿನ ಸಿಬ್ಬಂದಿಗಳಿಂದಲೂ ಇಂಚಿಂಚೂ ಮಾಹಿತಿಗಳನ್ನು ಪಡೆದುಕೊಂಡಿದೆ.
ದುರಂತ ಸಂಭವಿಸಿದ ಗೇಟ್ ನಂ.7,16,18,19 ಹಾಗೂ 21 ನೇ ಗೇಟ್ಗಳ ಬಳಿ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ಸಹ ಸಿಐಡಿಯ ತನಿಖಾ ತಂಡ ಸಿದ್ಧತೆ ನಡೆಯುತ್ತಿದೆ.
ಆರ್ಸಿಬಿ ವಿಜಯೋತ್ಸವ ನಿಮಿತ್ತ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ನಿರೀಕ್ಷೆಗಿಂತಲೂ ಹೆಚ್ಚು ಮಂದಿ ಬಂದಿದ್ದರಿಂದ ಕಾಲ್ತುಳಿತದ ಅವಘಡ ಸಂಭವಿಸಿ,11 ಮಂದಿ ಮೃತಪಟ್ಟು 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತನಿಖೆಯನ್ನು ಸಿಐಡಿಗೆ ವಹಿಸಿದ್ದಾರೆ.