ನವದೆಹಲಿ, ಜೂ.5- ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿನ್ನೆ ಸಂಭವಿಸಿದ ದುರಂತಕ್ಕೆ ಸಂತಾಪ ಸೂಚಿಸಿದ ಸಚಿವರು, ಸಂಭ್ರಮಾಚರಣೆಯನ್ನು ರಾಜ್ಯ ಸರ್ಕಾರ ಸೂತಕವನ್ನಾಗಿಸಿಬಿಟ್ಟಿದೆ. ಇದಕ್ಕೆ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ.
ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸಕಲ ಸಿದ್ದತೆಗಳನ್ನು ಮಾಡಿಕೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದರು.
ತರಾತುರಿಯಲ್ಲಿ ಅದು ಒಂದೇ ದಿನ ಎರಡು ಕಡೆ ಕಾರ್ಯಕ್ರಮ ಆಯೋಜಿಸುವ ಆತುರವೇನಿತ್ತು?, ಪೂರ್ವ ಯೋಜನೆ ಹಾಗೂ ವ್ಯವಸ್ಥೆ ಮಾಡಿಕೊಳ್ಳದೇ ಸ್ವಪ್ರತಿಷ್ಠೆಗಾಗಿ ಅಮಾಯಕರು ಪ್ರಾಣ ತೆತ್ತಿದ್ದಾರೆ ಎಂದು ರಾಜ್ಯಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.