ಬೆಳಗಾವಿ, ಡಿ.9- ನಾನು ಯಾರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ ನಿಜವಾದ ವಿರೋಧ ಪಕ್ಷದ ನಾಯಕ ನಾನೇ. ಸದನದಲ್ಲಿ ಉಪ ಸಭಾಪತಿಯವರ ಪಕ್ಕದಲ್ಲಿ ನನಗೆ ಆಸನ ವ್ಯವಸ್ಥೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯಿಸಿದ್ದಾರೆ.
ಈ ಬೇಡಿಕೆ ಕೆಲಕಾಲ ಸಭಾಧ್ಯಕ್ಷರು ಮತ್ತು ಯತ್ನಾಳ್ ಅವರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರಶ್ನೋತ್ತರವನ್ನು ಬದಿಗಿಟ್ಟು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತಿತರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯತ್ನಾಳ್, ಶಾಸಕರು ತಮ ಕ್ಷೇತ್ರದ ಸಮಸ್ಯೆಗಳನ್ನು ಚರ್ಚೆ ಮಾಡಲು ಪ್ರಶ್ನೆಗಳನ್ನು ಹಾಕಿರುತ್ತಾರೆ. ಹೀಗಾಗಿ ಪ್ರಶ್ನೋತ್ತರ ಬದಿಗಿಡಲು ನನ್ನ ವಿರೋಧ ಇದೆ ಎಂದರು.ಮುಂದುವರೆದ ಯತ್ನಾಳ್, ನಾವು ಹಿರಿಯ ಶಾಸಕರುಗಳಿದ್ದು ನಮಗೆ ಹಿಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಹಿರಿಯರಾಗಿರುವುದರಿಂದಾಗಿ ನಮಗೆ ಮೊದಲ ಸಾಲಿನಲ್ಲಿ ನಾಳೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ರಾಜಕಾರಣದಲ್ಲಿ ಹಿರಿಯರು ಕಿರಿಯರು ಎಂಬುದೇನಿಲ್ಲ. ಸಂಖ್ಯಾಬಲದ ಆಧಾರದ ಮೇಲೆ ಸ್ಥಾನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯಾಬಲ ಇದ್ದರೆ ತಮ ಎಡ ಭಾಗದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಸಂಖ್ಯಾಬಲ ಕಡಿಮೆ ಇದ್ದರೆ, ಬಲಭಾಗದ ವಿರೋಧ ಪಕ್ಷದಲ್ಲಿ ಆಸನ ವ್ಯವಸ್ಥೆಗಳು ಇರುತ್ತವೆ. ನಿಮಗೆ ಮನಸ್ಸಿಗೆ ಬಂದಾಗ ಇಲ್ಲಿರುವುದು, ಬೇಡ ಎಂದಾಗ ವಾಪಸ್ ಹೋಗುವುದನ್ನು ಮಾಡಿದರೆ, ಅದಕ್ಕೆ ತಕ್ಕ ಹಾಗೆ ಆಸನ ವ್ಯವಸ್ಥೆ ಮಾಡಲು ಆಗುವುದಿಲ್ಲ. ನೀವು ಬಿಜೆಪಿಯಲ್ಲಿದ್ದಾಗ ಮುಂದಿನ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈಗಲೂ ನೀವು ಮುಂದೆ ಬನ್ನಿ ಮುಂದೆಯೇ ಕುರ್ಚಿ ಹಾಕುತ್ತೇವೆ ಎಂದರು.
ಈ ವೇಳೆ ಕಾಂಗ್ರೆಸ್ ಶಾಸಕರಾದ ಎಚ್.ಡಿ.ರಂಗನಾಥ್ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ನಾವು
ಯತ್ನಾಳ್ ಅವರ ಜೊತೆಯಲ್ಲಿದ್ದೇವೆ ಎಂದು ಹೇಳಿದರು.
ಈ ಚರ್ಚೆ ಕೆಲಕಾಲ ಸ್ವಾರಸ್ಯಕರ ಪ್ರಸಂಗಕ್ಕೆ ಕಾರಣವಾಯಿತು.
ನಾನು ನಿಷ್ಠಾವಂತ ಕಾರ್ಯಕರ್ತ, ಯಾರೊಂದಿಗೂ ನಾನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಮುಖ್ಯಮಂತ್ರಿಯವರ ಮನೆಗೆ ಭೇಟಿ ನೀಡುವುದಿಲ್ಲ. ಸಚಿವರ ಮುಂದೇ ದೈನೇಸಿಯಾಗಿ ಕೇಳಿಕೊಳ್ಳುವುದಿಲ್ಲ ಎಂದು ಯತ್ನಾಳ್ ಹೇಳಿದರು.ಸಭಾಧ್ಯಕ್ಷರು ಸಂಖ್ಯಾಬಲದ ಆಧಾರದ ಮೇಲೆ ಮಾತ್ರ ಸ್ಥಾನ ಹಂಚಿಕೆ ಮಾಡುವುದಾಗಿ ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
