ಬೆಂಗಳೂರು,ಜ.9- ಚಲಾವಣೆಯಲ್ಲಿ ಇಲ್ಲದ ಪತ್ರಿಕೆಯ ಮೇಲೆ ಸಿದ್ದರಾಮಯ್ಯ ನವರ ಸರ್ಕಾರ ಕೋಟ್ಯಾಂತರ ರೂ. ತೆರಿಗೆದಾರರ ಹಣವನ್ನು ಸುರಿದಿದೆ ಎಂದು ರಾಜ್ಯ ಬಿಜೆಪಿ, ಗಂಭೀರ ಆರೋಪ ಮಾಡಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಈ ಸಂಬಂಧ ಟ್ವೀಟ್ (ಎಕ್ಸ್ ) ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿ ಕುಟುಂಬದ ಅಣತಿಯಂತೆ ನಿಷ್ಕಿಯವಾಗಿರುವ ಪತ್ರಿಕೆಗಾಗಿ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಅಸ್ಥಿತ್ವದಲ್ಲಿರದ ಹಾಗೂ ದೇಶದಲ್ಲಿರುವ ರಾಷ್ಟ್ರೀಯ ಪತ್ರಿಕೆಗಳನ್ನು ಹೊರಗಿಟ್ಟ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನ್ಯಾಷನಲ್ ಹೆರಾಲ್್ಡಗೆ ಜಾಹೀರಾತು ಹಣವನ್ನು ಏಕೆ ನೀಡಿದೆ ಎಂದು ಜೋಶಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಶೇ.69ರಷ್ಟು ಓದುಗರನ್ನು ಹೊಂದಿರುವ ಪತ್ರಿಕೆಗಳನ್ನು ಬಿಟ್ಟು ರಾಜ್ಯದಲ್ಲಿ ನಿಷ್ಕಿಯವಾಗಿರುವ ದಿನಪತ್ರಿಕೆಗೆ ಹಣ ನೀಡಿದ್ದು, ವಿಶ್ವಾಸಾರ್ಹ ದಿನಪತ್ರಿಕೆಗಳಿಗೆ ಏನೂ ಸಿಗದಂತೆ ಲೂಟಿ ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ನಕಲಿ ಗಾಂಧಿ ಕುಟುಂಬವನ್ನು ಮತ್ತಷ್ಟು ಓಲೈಸಲು ಮಾಡಿದ ಪಿತೂರಿಯೇ? ಎಂದಿರುವ ಜೋಶಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನಿನ ಮೇಲೆ ಬಿಡುಗಡೆಯಾದಾಗ, ಕಾಂಗ್ರೆಸ್ ಸರ್ಕಾರ 2024-25ರಲ್ಲಿ 1 ಕೋಟಿ ಬದಲಿಗೆ 3 ಕೋಟಿ ಹಣ ನೀಡಿತು ಎಂದು ಜೋಶಿ ಆರೋಪಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಗೃಹಲಕ್ಷಿ ಫಲಾನುಭವಿಗಳಿಗೆ ಹಣವಿಲ್ಲ. ಆದರೆ ನಿಷ್ಕ್ರಿಯವಾದ ಒಂದು ಪತ್ರಿಕೆ ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಹಣ ಪಡೆಯುತ್ತದೆ. ಇದು ದುರಾಡಳಿತದ ಪರಮಾವಧಿ ಮತ್ತು ಅಧಿಕಾರ ದುರುಪಯೋಗ, ಹಗಲು ದರೋಡೆಯೇ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಗರಣದಲ್ಲಿ ಸೋನಿಯಾ ಗಾಂಧಿ ಜಾಮೀನು ಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲೂ ಪ್ರಕರಣವಿದೆ. ಕರ್ನಾಟಕದಲ್ಲಿ ಒಬ್ಬರ ಮನೆಗೂ ಈ ಪತ್ರಿಕೆ ಬರುವುದಿಲ್ಲ. ಆದರೆ ದಾಖಲೆಗಳ ವೀರ ಸಿಎಂ ಸಿದ್ದರಾಮಯ್ಯ ಈ ಪತ್ರಿಕೆಗೆ 2023-24 ರಲ್ಲಿ 1.90 ಕೋಟಿ ರೂ. ಮೊತ್ತದ ಜಾಹೀರಾತು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
2024-25ರಲ್ಲಿ 1.42 ಕೋಟಿ ಮೊತ್ತದ ಜಾಹೀರಾತು ನೀಡಿದ್ದಾರೆ. ಒಟ್ಟು 4.31 ಕೋಟಿ ಮೊತ್ತದ ಜಾಹೀರಾತು ನೀಡಿದ್ದಾರೆ. ಇಡೀ ಜಗತ್ತಿನಿಂದ ಬಂದ ಜಾಹೀರಾತು ಪ್ರಮಾಣ ಶೇ.31 ಆಗಿದ್ದು, ಕರ್ನಾಟಕದಿಂದ ಶೇ.69ರಷ್ಟು ಬಂದಿದೆ. ಇದು ಹಗಲು ದರೋಡೆಯಾಗಿದ್ದು, ಎಲ್ಲ ಟ್ರಸ್ಟಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳೆಯರಿಗೆ ಇನ್ನೂ ಗೃಹಲಕ್ಷಿಯ ಹಣ ನೀಡಿಲ್ಲ. ಎರಡು ತಿಂಗಳ 5,000 ಕೋಟಿ ರೂ. ಲೂಟಿ ಮಾಡಿದ್ದಾರೆ. ಈಗ ಮುದ್ರಣವಾಗದ ಹಗರಣದ ಪತ್ರಿಕೆಗೆ ಜಾಹೀರಾತು ನೀಡಿರುವುದು ಅಪರಾಧ. ಈ ಬಗ್ಗೆ ಮುಖ್ಯಮಂತ್ರಿಗಳು ಲೆಕ್ಕ ಕೊಡಬೇಕು. ಈಗಾಗಲೇ ಎಲ್ಲ ಪಾಲಿಕೆಗಳಲ್ಲಿ ಅನುದಾನ ಕೊರತೆಯಿದೆ. ಈಗ ಪಾಲಿಕೆಯ ಹಣದಲ್ಲಿ ಪ್ರತಿಮೆ ನಿರ್ಮಿಸುವುದು ತಪ್ಪು. ಬೇಕಿದ್ದರೆ ಕಾಂಗ್ರೆಸ್ ಕಚೇರಿಯಿಂದ ಹಣ ಖರ್ಚು ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಗಿಲು ಬಡಾವಣೆಯಲ್ಲಿ ತ್ವರತವಾಗಿ ಮನೆ ಮಂಜೂರು ಮಾಡುವ ನಿಯಮ ಯಾವಾಗ ಬಂದಿದೆ ಎಂದು ತಿಳಿಸಬೇಕು. ಹತ್ತು ವರ್ಷ ವಾಸ, ವಂಶವೃಕ್ಷ, ಆದಾಯ ಮಿತಿ ಸೇರಿದಂತೆ ಆಶ್ರಯ ಸಮಿತಿ, ವಸತಿ ಯೋಜನೆಗಳ ಮಾನದಂಡ ಹಾಗೂ ನಿಯಮಗಳನ್ನು ಸಂಪೂರ್ಣ ರದ್ದು ಮಾಡುವುದು ಉತ್ತಮ. ಇದು ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರಿಗೆ ಗುಲಾಮಗಿರಿ ಮಾಡುವ ಸರ್ಕಾರ ಎಂದು ಅಶೋಕ್ ಟೀಕಿಸಿದ್ದಾರೆ.
