ಚಿಕ್ಕಮಗಳೂರು,ಡಿ.22- ಜನರ ಮನರಂಜನೆಗಾಗಿ ನಿತ್ಯವೂ ಮುಖ್ಯಮಂತ್ರಿ ಗಾದಿ ಕುರ್ಚಿ ಫೈಟ್ ನಡೆಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರಕ್ಕೆ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನಬೆಳಗಾದರೆ ಮುಖ್ಯಮಂತ್ರಿ ಕುರ್ಚಿಗಾಗಿ ಹೋರಾಟ ನಡೆಯುತ್ತಿದ್ದು, ಅದರ ಉಸಾಬರಿ ನಮಗೇಕೆ ಬೇಕು?, ರಾಜ್ಯದ ಅಭಿವೃದ್ಧಿಯಾದರೆ ಅಷ್ಟೇ ಸಾಕು ಎಂದು ಹೇಳಿದರು.
ಮುಖ್ಯಮಂತ್ರಿ ಯಾರಾದರೂ ಆಗಲಿ. ಜನರ ಸಮಸ್ಯೆಗಳು ಬಗೆಹರಿದು ರಾಜ್ಯದ ಅಭಿವೃದ್ಧಿಯಾಗಬೇಕು. ರಾಜ್ಯಸರ್ಕಾರಕ್ಕೆ 3 ವರ್ಷವಾಗುತ್ತಾ ಬಂದಿದೆ. ರೈತರ ಪರಿಸ್ಥಿತಿ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಸಮಸ್ಯೆನಿವಾರಿಸಿ ರಾಜ್ಯದ ಅಭಿವೃದ್ಧಿಯಾಗಬೇಕೇ ಹೊರತು ಮುಖ್ಯಮಂತ್ರಿ ಯಾರಾದರೆ ನಮಗೇನು? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಲು 47 ಕೋಟಿ ರೂ. ವೆಚ್ಚವಾಗಿದೆಯಂತೆ. ರಸ್ತೆಗಳನ್ನು ನೋಡಿದರೆ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ ಎಂಬುದು ಗೊತ್ತಾಗುತ್ತದೆ.
ಕೆ.ಆರ್.ಪೇಟೆ ಯಿಂದ ಮೈಸೂರಿಗೆ ಪ್ರಯಾಣಿಸಲು ಅರ್ಧಗಂಟೆ ಸಮಯ ಸಾಕಾದರೂ ಹೆಲಿಕಾಪ್ಟರ್ ಬಳಸುತ್ತಾರೆ. ಕುರ್ಚಿ ಕದನದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದರು. ಮುಖ್ಯಮಂತ್ರಿ ದಾಖಲೆ ಮುಂಗಡಪತ್ರ ಮಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಪಂಚಕ್ಕೆ ಏನು ಮಾಡಬೇಕು ಅಂತಿದ್ದಾರೆ. ಅಲ್ಲಿಗೆ ಹೋಗಿ ಅವರಿಗೆ ಇವರು ಸಹಕಾರ ಕೊಟ್ಟರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನರ ಮೇಲೆ ಯಾರು, ಎಷ್ಟು ತೆರಿಗೆ ಹಾಕಬೇಕು ಎಂದು ಓಡಾಡುತ್ತಿದ್ದಾರೆ. ದೇವರ ಜೊತೆ ಮಾತನಾಡಿದ್ದಾರಂತಲ್ಲ. 45 ದಿನ ಏನಾಗುತ್ತದೆ ನೋಡೋಣ, ಒಬ್ಬರು ಮುಂದಿನ ಮೂರನೇ ಬಜೆಟ್ ನಾನೇ ಮಂಡಿಸುವುದು ಅಂತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮುಂದಿನ ಬಜೆಟ್ ಅನ್ನು ಅವರೇ ಮಂಡಿಸುತ್ತಾರೆ ಎಂಬುದಿದೆ. ಅಧಿವೇಶನದಲ್ಲಿ ಹಲವು ವಿಧೇಯಕಗಳು ಚರ್ಚೆಯಿಲ್ಲದೆ ಅನುಮೋದನೆಯಾಗಿದೆ. ಸದನದಲ್ಲಿ ವಿರೋಧಪಕ್ಷಗಳಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಸಮಯ ಬಂದಾಗ ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆಸಹಿತ ಮಾತನಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.
