ಬೆಳಗಾವಿ,ಡಿ.9- ಆಡಳಿತಾರೂಢ ಕಾಂಗ್ರೆಸ್ ವಿಧಾನಪರಿಷತ್ ಗೆ ನಾಲ್ಕು ಸದಸ್ಯರನ್ನು ನಾಮನಿರ್ದೇಶನ ಮಾಡಿರುವ ಕಾರಣ ಮೇಲ್ಮನೆಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು ವೃದ್ಧಿಸಿಕೊಂಡಿದೆ. 75 ಸದಸ್ಯ ಬಲದ ವಿಧಾನಪರಿಷತ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ವಿಪಕ್ಷಗಳ ಬಲ ಹೆಚ್ಚಿದ್ದವು. ಇದರಿಂದಾಗಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆಯಾಗಿ ಅಂಗೀಕಾರಗೊಡರೂ ಪರಿಷತ್ನಲ್ಲಿ ಹಿನ್ನಡೆಯಾಗುತ್ತಿತ್ತು. ಸಭಾಪತಿ ಹಾಗೂ ಉಪ ಸಭಾಪತಿ ಸ್ಥಾನಗಳು ಬಿಜೆಪಿಯ ಬಳಿ ಇರುವುದರಿಂದ ಆಡಳಿತದಲ್ಲಿದ್ದರೂ ಕಾಂಗ್ರೆಸ್ಗೆ ಪರಿಷತ್ ಬಲಿಷ್ಠವಾಗಲು ಸಾಧ್ಯವಿರಲಿಲ್ಲ.
ಇದೀಗ ನಾಲ್ವರು ನಾಮನಿರ್ದೇಶಿತ ಸದಸ್ಯರು ಪರಿಷತ್ ಗೆ ನೇಮಕವಾಗಿದ್ದಾರೆ, ಈ ಮೂಲಕ ಕಾಂಗ್ರೆಸ್ ಸಂಖ್ಯಾ ಬಲ 37, ಬಿಜೆಪಿ, 29, ಜೆಡಿಎಸ್ 7 ಪಕ್ಷೇತರ 1 ಇರಲಿದೆ. ಈ ಮೂಲಕ ಕಾಂಗ್ರೆಸ್ ವಿಧಾನಪರಿಷತ್ನಲ್ಲೂ ಮೇಲುಗೈ ಸಾಧಿಸಿದೆ. ಮೇಲನೆ ನಾಲ್ಕು ಸ್ಥಾನಕ್ಕೆ ಕೆ ಶಿವಕುಮಾರ್, ರಮೇಶ್ ಬಾಬು, ಜಕ್ಕಪ್ಪವರ ಹಾಗೂ ಆರತಿ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಸ್ಥಾನಕ್ಕೆ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದರು.
ನಾಲ್ವರ ಪೈಕಿ ರಮೇಶ್ ಬಾಬು ಅವರ ಅಧಿಕಾರ ಅವಧಿ 2026ರ ಜುಲೈ 21 ರವರೆಗೆ ಇರಲಿದೆ. ಉಳಿದವರಿಗೆ ಆರು ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ಇರುವ ಅವಕಾಶ ಇದೆ. ಒಂದು ವೇಳೆ ನನ್ನ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ನಾನು ಒಂದು ಕ್ಷಣವೂ ಅಧಿಕಾರದಲ್ಲಿ ಕೂರುವುದಿಲ್ಲ ಎಂದು ಈಗಾಗಲೇ ಬಸವರಾಜ್ ಹೊರಟ್ಟಿಯವರು ಹೇಳಿದ್ದಾರೆ.
ಒಂದು ಮೂಲದ ಪ್ರಕಾರ, ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಗಳು ತೀರಾ ಕಡಿಮೆ. ಜನವರಿ ತಿಂಗಳಿನಲ್ಲಿ ನಡೆಯುವ ವರ್ಷದ ಮೊದಲ ಅಧಿವೇಶನ ನಂತರ ಮಾರ್ಚ್ನಲ್ಲಿ ಬಜೆಟ್ ಅಧಿವೇಶನದ ವೇಳೆ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಂಭವವಿದೆ. ಅಷ್ಟರೊಳಗೆ ಅವರು ಗೌರವಯುತವಾಗಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸರ್ಕಾರ ಈ ಪ್ರಯತ್ನದಿಂದ ಹಿಂದೆ ಸರಿಯಲಿದೆ.
ಮುಂದುವರಿಯುವ ದುಸ್ಸಾಹಸಕ್ಕೆ ಬಂದರೆ, ವಿಧಿಯಿಲ್ಲದೆ ಸಭಾಪತಿ ಮತ್ತು ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆ ಇದೆ. ಸದನದಲ್ಲಿ ತಮಗೆ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಿದ್ದು, ಪಕ್ಷೇತರ ಅಭ್ಯರ್ಥಿಯಾಗಿರುವ ಲಖನ್ ಜಾರಕಿಹೊಳಿ ಅವರ ಬೆಂಬಲದಿದ ಸಭಾಪತಿ ಮತ್ತು ಉಪಸಭಾಪತಿ ಸ್ಥಾನವನ್ನು ಪಡೆಯಬಹುದೆಂದು ಕೆಲವು ಸದಸ್ಯರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
