ಬೆಂಗಳೂರು,ಡಿ.2- ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ ಕರ್ನಾಟಕದ ರಾಜಭವನ ಇನ್ನು ಮುಂದೆ ಭವಿಷ್ಯದಲ್ಲಿ ಲೋಕಭವನ ಎಂದು ಮರು ನಾಮಕರಣಗೊಳ್ಳಲಿದೆ. ಈಗಾಗಲೇ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಖಂಡ್, ಗುಜರಾತ್ ಸೇರಿದಂತೆ 8 ರಾಜ್ಯಗಳು ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ ರಾಜಭವನವನ್ನು ಲೋಕಭವನ ಎಂದು ಬದಲಾಯಿಸಲಾಗಿದೆ.
ಈಗ ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ರಾಜಭವನದ ಹೆಸರನ್ನು ಬದಲಾಯಿಸಿ ಲೋಕಭವನ ಎಂದು ಮರುನಾಮಕರಣ ಮಾಡಿ ಶೀಘ್ರವೇ ಅಧಿಕೃತ ಆದೇಶವನ್ನು ಹೊರಡಿಸಲಿದ್ದಾರೆ.
ರಾಜಭವನವು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ವ್ಯಾಪ್ತಿಗೆ ಒಳಪಡುವುದರಿಂದ ಹೆಸರು ಬದಲಾಯಿಸಲು ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲವೇ ಅನುಮತಿ ಬೇಕಾಗಿರುವುದಿಲ್ಲ. ರಾಷ್ಟ್ರಪತಿ ಭವನದ ವ್ಯಾಪ್ತಿಗೆ ಬರುವುದರಿಂದ ಕೇಂದ್ರ ಗೃಹ ಇಲಾಖೆಯ ನಿರ್ದೇಶನವನ್ನು ಪಾಲನೆ ಮಾಡಬೇಕಾಗುತ್ತದೆ.
ಈಗಾಗಲೇ ಪಶ್ಚಿಮ ಬಂಗಾಳ, ಉತ್ತರಾಖಾಂಡ್ ಕೇರಳ, ತಮಿಳುನಾಡು, ತ್ರಿಪುರಾ, ಗುಜರಾತ್ ರಾಜ್ಯಗಳಲ್ಲಿನ ರಾಜಭವನದ ಹೆಸರುಗಳನ್ನು ಬದಲಾಯಿಸಲಾಗಿದೆ.
ಏಕೆ ಈ ಬದಲಾವಣೆ?
ಈ ಮೊದಲೇ ಹೇಳಿದಂತೆ ಮೋದಿ ಸರ್ಕಾರ ಜನಸೇವೆಯ ಆಯಂಗಲ್ನಲ್ಲೇ ಸರ್ಕಾರಿ ಬಂಗಲೆಗಳ ಹೆಸರುಗಳನ್ನು, ರಸ್ತೆಗಳನ್ನು ಬದಲಾಯಿಸಿದೆ. ದೆಹಲಿಯ ರೇಸ್ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ಮಾರ್ಗ್ ಎಂದು ಬದಲಾಯಿಸಿದ್ದು, ಹಳೆಯ ಸಂಸತ್ ಭವನವನ್ನು ಸಂವಿಧಾನ್ ಸದನ್ ಎಂದು ಬದಲಾಯಿಸಲಾಗಿದೆ. ಅದೇ ನಿಟ್ಟಿನಲ್ಲಿ ರಾಜಭವನದ ಹೆಸರುಗಳನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅದೇನೂ ಪಕ್ಷಗಳ ಪ್ರತಿಷ್ಠೆಯ ವಿಚಾರವೇನಲ್ಲವಾದ್ದರಿಂದ ಕರ್ನಾಟಕದಲ್ಲೂ ಜಾರಿಗೊಳಿಸುವ ಸಾಧ್ಯತೆಯಿದೆ.
