ಬೆಂಗಳೂರು,ಡಿ.26– ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಖಾಸಗಿ ಬಸ್- ಕಂಟೇನರ್ ಲಾರಿ ನಡುವೆ ನಡೆದ ಭೀಕರ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ. ನಿನ್ನೆ ಬೆಳಗಿನ ಜಾವ ಈ ಅಪಘಾತ ಸಂಭವಿಸಿದ ನಂತರ ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಚನೆ ನೀಡಿದ್ದರು.
ಅದರಂತೆ ಯೋಗೀಶ್ ಮತ್ತವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಮುಖ್ಯವಾಗಿ ಕಂಟೇನರ್ ಲಾರಿ ಚಾಲಕ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಉಲ್ಲೇಖಿಸಲಾಗಿದೆ.
ನಿದ್ದೆ ಮಂಪರಿನಲ್ಲಿ ಚಾಲಕ ಕಂಟೇನರ್ ಲಾರಿಯನ್ನು ವೇಗವಾಗಿ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ನುಗ್ಗಿ ಎದುರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ಗೆ ಡಿಕ್ಕಿ ಹೊಡೆದಿದೆ. ಚಾಲಕ ಸ್ವಲ್ಪ ಜಾಗ್ರತೆ ವಹಿಸಿದ್ದರೆ, ಅಪಘಾತವನ್ನು ತಡೆಯಬಹುದಿತ್ತು. ಜೊತೆಗೆ ಖಾಸಗಿ ಬಸ್ನಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಪ್ರಾಣವನ್ನು ರಕ್ಷಿಸಬಹುದಿತ್ತು. ಅಂದರೆ ಬಸ್ಗೆ ತುರ್ತು ನಿರ್ಗಮನದ ದ್ವಾರ ಇದ್ದಿದ್ದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ವರದಿ ಹೇಳಿದೆ.
ಕಂಟೇನರ್ ಲಾರಿ ನೇರವಾಗಿ ಬಸ್ನ ಡೀಸೆಲ್ ಟ್ಯಾಂಕ್ಗೆ ಗುದ್ದಿದೆ. ಹೀಗಾಗಿ ಡೀಸೆಲ್ ಟ್ಯಾಂಕ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತನಿಖೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಇಲಾಖೆ ಅಧಿಕಾರಿಗಳು ಪ್ರಾಥಮಿಕವಾಗಿ ಮಾಹಿತಿ ಕಲೆ ಹಾಕಿದ್ದಾರೆ. ವಿರುದ್ಧ ದಿಕ್ಕಿನಿಂದ ಬಂದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಸ್ಗೆ ಡಿಕ್ಕಿಯಾದ ಪರಿಣಾಮ ಅವಘಡ ಸಂಭವಿಸಿದೆ. ಹಿರಿಯೂರು ಬಳಿಯ ಈ ಜಾಗದಲ್ಲಿ ಪದೇ ಪದೇ ಅವಘಡ ಆಗುತ್ತಿದೆ ಎಂಬ ಮಾಹಿತಿ ಇದೆ. ಅದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಖಾಸಗಿ ಬಸ್ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳನ್ನು ಹೊಂದಿದ್ದು, ಸೀಬರ್ಡ್ ಟೂರಿಸ್ಟ್ಗೆ ಸೇರಿದ ಬಸ್ಸಾಗಿದೆ. ನ. 12 ರಂದು ಇಲಾಖೆ ನಡೆಸಿದ ಅನಿರೀಕ್ಷಿತ ತಪಾಸಣೆಯಲ್ಲಿ ಪಾಸ್ ಆಗಿತ್ತು. ಸೀಬರ್ಡ್ ಟೂರಿಸ್ಟ್ ಕಳೆದ 25 ವರ್ಷಗಳಿಂದ ಬೆಂಗಳೂರಿನಿಂದ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ಒಂದು ತಿಂಗಳಿನಿಂದ, ನಾವು ದೀರ್ಘ ಪ್ರಯಾಣಗಳಲ್ಲಿ ಕಾರ್ಯನಿರ್ವಹಿಸುವ ಬಸ್ಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಭಿಯಾನದ ಸಮಯದಲ್ಲಿ ಈ ನಿರ್ದಿಷ್ಟ ಬಸ್ನ್ನು ಪರಿಶೀಲಿಸಲಾಯಿತು. ಅದರಲ್ಲಿ ಎಲ್ಲಾ ಅಗತ್ಯತೆಗಳನ್ನು ಪರಿಶೀಲಿಸಲಾಗಿದೆ ಎಂಬುವುದು ಕಂಡುಬಂದಿದೆ.
ರಾತ್ರಿಯ ಸಮಯದಲ್ಲಿ ಪ್ರಯಾಣಿಸುವ ವಾಹನಗಳಿಗೆ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್ಒಪಿ) ಸಿದ್ಧಪಡಿಸುವಂತೆ ಕೇಳಿದ್ದಾರೆ. ಇದು ಬಸ್ಗಳಿಗೆ ಮಾತ್ರವಲ್ಲ, ಟ್ರಕ್ಗಳು ಮತ್ತು ಲಾರಿಗಳಂತಹ ಇತರ ವಾಹನಗಳಿಗೂ ಅನ್ವಯಿಸುತ್ತದೆ. ಎಸ್ಒಪಿ ಅನ್ನು ಸಂಬಂಧಪಟ್ಟ ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು. ದೀರ್ಘ ಪ್ರಯಾಣದಲ್ಲಿ ಚಾಲಕರು ವಿಶ್ರಾಂತಿ ಪಡೆಯಲು ಸಾಕಷ್ಟು ವಿಶ್ರಾಂತಿ ಸ್ಥಳಗಳನ್ನು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಬಸ್ ಗಳ ತಪಾಸಣೆ
ಕಳೆದ ಅಕ್ಟೋಬರ್ 24 ರಂದು ಸಂಭವಿಸಿದ ಕರ್ನೂಲ್ ಬಸ್ ಬೆಂಕಿ ಅಪಘಾತದ ನಂತರ, ಕರ್ನಾಟಕ ಸಾರಿಗೆ ಇಲಾಖೆಯು ಬೆಂಗಳೂರಿನಿಂದ ಹೊರಡುವ ಖಾಸಗಿ ಬಸ್ಗಳ ತಪಾಸಣೆ ಅಭಿಯಾನವನ್ನು ಪ್ರಾರಂಭಿಸಿದೆ. ವಿಶೇಷವಾಗಿ ನಾಗಾಲ್ಯಾಂಡ್ ಮತ್ತು ಒಡಿಶಾದಂತಹ ಇತರ ರಾಜ್ಯಗಳಲ್ಲಿ ನೋಂದಾಯಿಸಲಾದ ಆದರೆ ಕರ್ನಾಟಕದಿಂದ ಕಾರ್ಯನಿರ್ವಹಿಸುವ ಬಸ್ಗಳ ಮೇಲೆ ಕೇಂದ್ರೀಕರಿಸಿದೆ.
ಈ ಅಭಿಯಾನದಲ್ಲಿ ತುರ್ತು ನಿರ್ಗಮನಗಳು ಮತ್ತು ಅಗ್ನಿ ಸುರಕ್ಷತಾ ಸಾಧನಗಳ ತಪಾಸಣೆಯೂ ಸೇರಿದೆ. ಅಂತಹ ತಪಾಸಣೆ ಅಭಿಯಾನಗಳನ್ನು ಹೊಸ ವರ್ಷಕ್ಕೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಬಸ್ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ನಾವು ನೋಡಿಕೊಳ್ಳುತ್ತೇವೆ. ಬಸ್ಗಳಲ್ಲಿ ಬಳಸಲಾಗುವ ಅಗ್ನಿಶಾಮಕ ಸಾಮಗ್ರಿಗಳನ್ನು ಸಹ ನಾವು ಪರಿಶೀಲಿಸುತ್ತೇವೆ. ಅಪಘಾತ ಸಂಭವಿಸಿದರೂ, ಹಾನಿಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಬಸ್ ನಿರ್ವಾಹಕರೊಂದಿಗೆ ಇದನ್ನು ಚರ್ಚಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
