ಬೆಳಗಾವಿ(ಸುವರ್ಣಸೌಧ),ಡಿ.8- ಒಂದು ವೇಳೆ ಸದನದಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸರ್ಕಾರದ ತೀರ್ಮಾನಕ್ಕೆ ತಲೆಬಾಗುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ತಮ ವಿರುದ್ಧ ಸರ್ಕಾರ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಮಂಡನೆ ಮಾಡಿದರೆ ಅದಕ್ಕೆ ತಲೆಬಾಗಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅವಿಶ್ವಾಸ ನಿರ್ಣಯ ಮಂಡಿಸುವುದು ಬಿಡುವುದು ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಷಯ. ಸಭಾಪತಿಯಾಗಿ ನಾನು ನಿಯಮಗಳ ಅಡಿ ಸದನ ನಡೆಸುವುದು ನನ್ನ ಕರ್ತವ್ಯ ಉಳಿದ ವಿಷಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರದ ತೀರ್ಮಾನಕ್ಕೆ ತಲೆಬಾಗಲೇ ಬೇಕಾಗುತ್ತದೆ ಎಂದು ತಿಳಿಸಿದರು.
ಕೆಲವು ಸದಸ್ಯರು ನನಗೆ ಸದನದಲ್ಲಿ ಬಹುಮತವಿಲ್ಲ ನೈತಿಕ ರಾಜೀನಾಮೆ ನೀಡಬೇಕೆಂದು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಭಾಪತಿ ಸ್ಥಾನಕ್ಕೆ ಗೌರವ ತರುವುದಿಲ್ಲ. ಸದನದಲ್ಲಿ ಸದಸ್ಯರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಪುನರುಚ್ಚರಿಸಿದರು.
ಬಹುಮತ ಇದೆಯೋ ಇಲ್ಲವೋ ಸರ್ಕಾರಕ್ಕೆ ಬಿಟ್ಟ ವಿಚಾರ, ಸದನದ ತೀರ್ಮಾನ ಅಂತಿಮವಾಗಿದೆ. ಚರ್ಚೆಗೆ ಬಂದರೆ ನಿಯಮದ ಪ್ರಕಾರ ಹೋಗುತ್ತೇನೆ. ಆದರೆ ವಿಧಾನಪರಿಷತ್ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಇತಿಹಾಸ ಇಲ್ಲ. ಕಳೆದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ .ರವಿ ನಡುವಿನ ಜಟಾಪಟಿ ವಿಚಾರವಾಗಿ ಮಾತನಾಡಿ, ಈ ಘಟನೆ ನಡೆದ ಸಂದರ್ಭದಲ್ಲಿ ಪರಿಷತ್ ಇಬ್ಬರು ಕಾರ್ಯದರ್ಶಿ ಜೊತೆಗೆ ಚರ್ಚೆ ಮಾಡಲಾಗಿದೆ. ಅಲ್ಲದೆ 18-1-25 ಕ್ಕೆ ಈ ವಿಚಾರವನ್ನುನೀತಿ ನಿರೂಪಣಾ ಸಮಿತಿಗೆ ಕೊಡಲಾಗಿದೆ. ನೀತಿ ನಿರೂಪಣಾ ಸಮಿತಿ ಎರಡು ಬಾರಿ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಇಬ್ಬರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದರು.
ನಮ ಕಡೆಯಿಂದ ಏನಾಗಬೇಕೋ ಅದನ್ನು ಮಾಡಿದ್ದೇವೆ. ಜವಾಬ್ದಾರಿಯಿಂದ ನಮ ಕೆಲಸ ನಿರ್ವಹಣೆ ಮಾಡಿದ್ದೇವೆ. ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ, ಒಂದೇ ಒಂದು ಪೈಸೆ ಭ್ರಷ್ಟಾಚಾರ ಆಗಿದೆ ಎಂದು ಸಾಬೀತಾದರೆ ಒಂದು ಕ್ಷಣ ಈ ಸ್ಥಾನದಲ್ಲಿ ಇರಲ್ಲ. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಿದೆ. 30 ಹುದ್ದೆಗಳನ್ನು ಕೆ ಇ ಎ ಮೂಲಕ ನೇಮಕಾತಿ ಮಾಡಲಾಗಿದೆ. ಏನಾದರೂ ಅವ್ಯವಹಾರ ಆದರೆ ಕಾನೂನು ಪ್ರಕಾರ ಕ್ರಮ ಆಗಲಿ ಎಂದು ತಿಳಿಸಿದರು.
ಕೆ ಇ ಎ ಮೂಲಕ ನೇಮಕಾತಿ ಆಗಿದೆ, ನಮ ಪಾತ್ರ ಇಲ್ಲ. ಶಾಸಕರು ಆಪಾದನೆ ಮಾಡಬೇಕಾದರೆ ಯೋಚನೆ ಮಾಡಬೇಕು ಎಂದರು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಆದ್ಯತೆ ಈ ಬಾರಿ ಸದನದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆಗೆ ಆದ್ಯತೆ ನೀಡಲಾಗುವುದು. ಕಳೆದ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಉತ್ತರ ಕರ್ನಾಟಕ ಚರ್ಚೆ ಆಗಿದೆ. ಪ್ರತಿದಿನ ಒಂದು ವಿಷಯ ಕುರಿತು ಉತ್ತರ ಕರ್ನಾಟಕದ ಬಗ್ಗೆ ಗಮನ ಸೆಳೆಯುವ ಸೂಚನೆಯಲ್ಲಿ ಚರ್ಚೆಗೆ ಅವಕಾಶ ಕೊಡಲಾಗುವುದು. ಬುಧವಾರ ಉತ್ತರ ಕರ್ನಾಟಕದ ಬಗ್ಗೆ ಸಂಪೂರ್ಣ ಚರ್ಚೆಗೆ ಅವಕಾಶ ಕೊಡಲಾಗುವುದು. ಈ ಬಾರಿ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಮುಖ್ಯವಾಗಿ ಕಳಸಾ ಬಂಡೂರಿ, ಕೃಷ್ಣ ಮೇಲ್ಡಂಡೆ, ಉದ್ಯೋಗ ಸೃಷ್ಟಿ ವಿಚಾರ ಚರ್ಚೆ ಆಗಲಿದೆ. ಅಜೆಂಡದ ವಿಚಾರ ಎಷ್ಟೇ ಹೊತ್ತಾದರೂ ಅದನ್ನ ಮುಗಿಸುತ್ತೇವೆ. ಇದರ ಸದುಪಯೋಗ ಆಗಬೇಕಿದೆ. 8 ರಿಂದ 19 ರವರೆಗೆ ಸದನ ಇರಲಿದೆ. ಸಂತಾಪ ಸೂಚನೆ, ಉತ್ತರ ಕರ್ನಾಟಕ ಭಾಗದ ಚರ್ಚೆ ಆಗಲಿದೆ. ಒಟ್ಟು ಆರು ಗಂಟೆ 35 ನಿಮಿಷ ಉತ್ತರ ಕರ್ನಾಟಕದ ಬಗ್ಗೆ ಹಿಂದಿನ ಸದನದಲ್ಲಿ ಚರ್ಚೆ ಆಗಿದೆ ಎಂದು ಹೇಳಿದರು.
ಸದನದಲ್ಲಿ ಹೆಬ್ಬಾಳ್ಕರ್, ಸಿ.ಟಿ.ರವಿ ಗಲಾಟೆ ವಿಚಾರದಲ್ಲಿ ಹೆಬ್ಬಾಳ್ಕರ್ ರಕ್ಷಣೆಗೆ ಹೊರಟ್ಟಿ ಬಂದಿಲ್ಲ ಎಂಬ ನಾಗರಾಜ್ ಯಾದವ್ ಆರೋಪವಾಗಿ ಪ್ರತಿಕ್ರಿಯಿಸಿದ ಬಸವರಾಜ್ ಹೊರಟ್ಟಿ, ನಾನು ಕಾರ್ಯದರ್ಶಿಗಳನ್ನು ಕೂರಿಸಿಕೊಂಡು ಚರ್ಚೆ ಮಾಡಿದ್ದೇನೆ. ನೀತಿ ನಿರೂಪಣೆ ಸಮಿತಿಗೆ ನೀಡಲಾಗಿದೆ. 18-01-25 ರಂದು ನೀತಿ ನಿರೂಪಣೆ ಸಮಿತಿ ನೀಡಲಾಗಿದೆ. ಈಗಾಗಲೇ ಎರಡು ಬಾರಿ ಸಮಿತಿ ಸಭೆ ನಡೆದಿದೆ. ಜೊತೆಗೆ ಇಬ್ಬರನ್ನ ಕರೆಸಿ ಮಾಹಿತಿ ಪಡೆಯಲಾಗಿದೆ. ತೀರ್ಮಾನ ಇನ್ನೂ ಸಮಿತಿ ಮುಂದಿದೆ ಎಂದು ವಿವರಿಸಿದರು.
ನಾಗರಾಜ್ ಯಾದವ್ ಸದನದ ಸದಸ್ಯರು. ಒಂದು ವರ್ಷ ಸುಮನೆ ಇದ್ದು ಈಗ ಯಾಕೆ ಮಾತಾಡುತ್ತಿದ್ದಾರೆ. ಹಕ್ಕುಬಾಧ್ಯತಾ ಸಮಿತಿಗೆ ಮೊದಲ ಬಾರಿ ಶಾಸಕರಾದವರನ್ನು ಮಾಡಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಯಾರೇ ಆರೋಪ ಮಾಡಿದರೂ ನಾನು ಉತ್ತರ ಕೊಡುತ್ತೇನೆ. ಭ್ರಷ್ಟಾಚಾರ ಸಾಬೀತು ಮಾಡಿದರೆ ನಾನು ಈ ಕುರ್ಚಿಯಲ್ಲಿ ಒಂದೇ ಒಂದು ನಿಮಿಷ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಣ್ಣಪುಟ್ಟ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿದ್ದೇನೆ. ಆರೋಪ ಸಾಬೀತು, ದಾಖಲೆ ಕೊಡಲಿಲ್ಲ ಎಂದರೆ ಅಂತಹವರನ್ನು ಹೇಡಿ ಎಂದು ಕರೆಯಬೇಕಾಗುತ್ತದೆ. ಅವರು ಮಾಡಿದ್ದು ಸುಳ್ಳು ಎಂದಾದರೆ ನಾನು ಸಹ ಅವರಂತೆ ಮಾತನಾಡುವುದಿಲ್ಲ ಎಂದು ಅಸಮಾಧಾನದಿಂದಲೇ ಹೇಳಿದರು.
