ಬೆಂಗಳೂರು, ಜ.14- ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಿಸಿರುವ ಕುರಿತು ಚರ್ಚೆ ನಡೆಸಲು ಜನವರಿ 28 ಮತ್ತು 29 ರಂದು ರಾಜ್ಯ ವಿಧಾನ ಮಂಡಲದ ತುರ್ತು ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯಲ್ಲಿಂದು ನಿರ್ಣಯಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ವಿಧಾನಮಂಡಲದ ತುರ್ತು ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
ಇದೇ ತಿಂಗಳ 27ರಿಂದ ವರ್ಷದ ಮೊದಲ ಅಧಿವೇಶನ ಆರಂಭಿಸಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೊದಲ ದಿನ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಮಾರನೇಯ ದಿನ ಮನ್ರೆಗಾ ಕಾಯ್ದೆ ಬದಲಾವಣೆಯ ಬಗ್ಗೆ ಎರಡು ದಿನಗಳ ವಿಶೇಷ ಚರ್ಚೆ ನಡೆಯಲಿದೆ. ನಂತರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ಅನಂತರ ಮಾರ್ಚ್ 6ರಂದು ಬಜೆಟ್ ಮಂಡನೆಯಾಗುವ ನಿರೀಕ್ಷೆಗಳಿವೆ.
ಮನ್ರೆಗಾ ಸವಾಲು:
ಕೇಂದ್ರ ಸರ್ಕಾರ ಮಹಾತ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆ ಮಾಡಿರುವುದರ ವಿರುದ್ಧ ವ್ಯಾಪಕ ಚರ್ಚೆಗಳಾಗುತ್ತಿವೆ. ಕೇಂದ್ರ ಸರ್ಕಾರ ಮಹಾತ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ಎಂದು ಬದಲಾವಣೆ ಮಾಡಿದೆ.
ಪರಿಷ್ಕೃತ ಯೋಜನೆಯ ಪ್ರಕಾರ ಯೋಜನಾ ವೆಚ್ಚದಲ್ಲಿ ರಾಜ್ಯ ಸರ್ಕಾರಗಳು ಶೇ.40ರಷ್ಟು ವೆಚ್ಚ ಭರಿಸಬೇಕು ಎಂಬ ನಿಯಮ ಇದೆ. ಇದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕಾಮಗಾರಿಗಳ ಆಯ್ಕೆಗೆ ಕೇಂದ್ರ ಸರ್ಕಾರವೇ ಅಧಿಸೂಚಿತ ಪ್ರದೇಶಗಳನ್ನು ಗುರುತಿಸಬೇಕಿದೆ ಹಾಗೂ ಇತರ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸುತ್ತಿದೆ. ರಾಜ್ಯ ಸರ್ಕಾರ ಮಸೂದೆಯಲ್ಲಿನ ನಕಾರಾತಕ ಅಂಶಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಹಾಗೂ ಪಾದಯಾತ್ರೆ ಸೇರಿದಂತೆ ಇತರ ಪ್ರಕಾರಗಳಲ್ಲಿ ಹೋರಾಟ ರೂಪಿಸುತ್ತಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಮನ್ರೆಗಾ ಯೋಜನೆಯಲ್ಲಿ ಕೇವಲ ನೂರು ದಿನ ಮಾತ್ರ ಮಾನವ ದಿನಗಳ ಉದ್ಯೋಗಕ್ಕೆ ಅವಕಾಶ ಇತ್ತು. ಪರಿಷ್ಕೃತ ಕಾಯ್ದೆಯಲ್ಲಿ 125 ದಿನಗಳ ಉದ್ಯೋಗಾವಕಾಶ ದೊರೆಯಲಿದೆ ಎಂದು ಪ್ರತಿಪಾದಿಸುತ್ತಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಕಾಯ್ದೆ ಜನಪರವಾಗಿದೆ ಎಂದು ಬಿಜೆಪಿ ವಾದಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಕಾಯ್ದೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗವಕಾಶಗಳು ಕಡಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸುತ್ತಿದೆ.ಮಹಾತ ಗಾಂಧೀಜಿ ಅವರ ಹೆಸರು ಬದಲಾವಣೆಯಷ್ಟೇ ಅಲ್ಲ ಕಾಯ್ದೆಯಿಂದ ಗ್ರಾಮೀಣ ಭಾಗದ ಉದ್ಯೋಗಗಳೇ ನಾಶವಾಗುತ್ತವೆ ಎಂದು ಕಾಂಗ್ರೆಸ್ಸಿನ ಆರೋಪ.ಈ ನೆಲೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನ ಜೊತೆಗೂ ವಾದ ಪ್ರತಿವಾದಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ.
