ತುಮಕೂರು,ಜ.24- ಹೊಸ ಇ-ಪೌತಿ ಸಾಫ್ಟ್ ವೇರ್ ಅಳವಡಿಕೆಯ ಕಾರಣದಿಂದ ಗ್ರಾಮಪಂಚಾಯತಿ, ಪುರಸಭೆ, ನಗರಸಭೆ ಹಾಗೂ ಕಾರ್ಪೊರೇಷನ್ ವ್ಯಾಪ್ತಿಯ ಎಲ್ಲಾ ಇ ಖಾತಾಗಳನ್ನು ಕಳೆದ 45 ದಿನಗಳಿಂದ ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಡೆವಲಪರ್ರಸ, ನಾಗರಿಕರು ಮತ್ತು ಹೂಡಿಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದ ಚಿದಾನಂದ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಖಾತಾ ಸ್ಥಗಿತದಿಂದ ಬ್ಯಾಂಕ್ನಿಂದ ಸಾಲಸೌಲಭ್ಯ ದೊರೆಯದೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿಸಿ ಹಾಗೂ ಒಸಿ ಪಡೆಯುವ ಪ್ರಕ್ರಿಯೆ ಸುಮಾರು 2 ವರ್ಷಗಳಿಂದ ವಿಳಂಬವಾಗುತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಲ್ಡಿಂಗ್ ಲೈಸೆನ್ಸ್ ಗಳು ಆನ್ಲೈನ್ನಲ್ಲಿ ಅಪ್ಲೋಡ್ ಆಗದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗಿದೆ. ಪೂರ್ಣಗೊಂಡಿರುವ ರೆಸೆಡೆನ್ಶಿಯಲ್ ಲೇ ಔಟ್ ಫ್ಲಾಟ್ಗಳಿಗೆ ಲೈಸೆನ್ಸ್ ನೀಡುವಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ವರ್ತನೆ ಡೆವಲಪರ್ಸ್ಗಳಿಗೆ ಸಂಕಷ್ಟ ತಂದಿದೆ ಎಂದು ಅವರು ಆರೋಪಿಸಿದರು.
ಆಂಧ್ರಪ್ರದೇಶದೊಂದಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಯಾದ ನಿಯಮಾವಳಿ ಮತ್ತು ಜಟಿಲ ಕಾನೂನು ಪ್ರಕ್ರಿಯೆಗಳಿವೆ. ಇದರಿಂದಾಗಿ ಹೂಡಿಕೆದಾರರು ಕರ್ನಾಟಕದಿಂದ ಹಿಂದೆ ಸರಿಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪೌತಿ ಖಾತೆ ವರ್ಗಾವಣೆ ಪ್ರಕ್ರಿಯೆ ತೀವ್ರವಾಗಿ ವಿಳಂಬವಾಗುತ್ತಿದೆ. ಎಂಇಆರ್-19 ಅಡಿಯಲ್ಲಿ ಲೈಸೆನ್ಸ್ ನೀಡುವ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ಇದೆ. ಪಾರ್ಕ್, ಸಿಎ ಹಾಗೂ ರಸ್ತೆಗಳಿಗೆ ಸಂಬಂಧಿಸಿದ ಡೀಡ್ ನೀಡುವ ಪ್ರಕ್ರಿಯೆಯಲ್ಲಿನ ವಿಳಂಬವು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಇ-ಖಾತಾ ಸಾಫ್ಟ್ ವೇರ್ ಅನ್ನು ತುರ್ತು ಪರಿಷ್ಕರಣೆ ಮಾಡಿ ಸರಿ ಹೋಗುವವರೆಗೂ ಹಿಂದಿನ ವ್ಯವಸ್ಥೆಯನ್ನು ಮುಂದುವರೆಸಬೇಕು ಎಂದು ಅವರು ಮನವಿ ಮಾಡಿದರು.
