ಬೆಂಗಳೂರು,ಡಿ.20- ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿದ ದ್ವೇಷ ಭಾಷಣ ಮಸೂದೆ ಸಾರ್ವಜನಿಕರ ಬಾಯಿ ಮುಚ್ಚಿಸುವ ಆದೇಶವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಎಕ್್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಮಸೂದೆ ಮೂಲಕ ಸಂವಿಧಾನದ 19ನೇ ವಿಧಿಯ ವಾಕ್ ಸ್ವಾತಂತ್ರ್ಯಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಸರ್ಕಾರದ ಇಂತಹ ನೀತಿಗಳಿಂದಾಗಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬ್ರಿಟಿಷರ ಕಾಲದ ವಸಾಹತುಶಾಹಿಗಳ ಅಸ್ಪಷ್ಟ ವ್ಯಾಖ್ಯಾನಗಳು, ವ್ಯಾಪಕ ಅಧಿಕಾರದ ದಾಹ ಮತ್ತು ಕಠಿಣ ಕ್ರಿಮಿನಲ್ ಶಿಕ್ಷೆ ಮೂಲಕ ಜನಪರ ಹೋರಾಟವನ್ನು ಹತ್ತಿಕ್ಕಲು ನೋಡಿದೆ. ಈ ಸರ್ಕಾರ ದಬ್ಬಾಳಿಕೆಗಾಗಿ ಇಂತಹ ಕಾನೂನುಗಳನ್ನು ಬಳಸಿಕೊಳ್ಳಲು ನೋಡುತ್ತಿದೆ. ಸಂವಿಧಾನದ ನಿಬಂಧನೆಗಳನ್ನು ಕಿಂಚಿತ್ತೂ ಗೌರವಿಸದೇ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
