ಬೆಂಗಳೂರು,ಡಿ.6- ನಾಯಕತ್ವ ಬದಲಾವಣೆ ಗೊಂದಲ, ಸರಕಾರದಲ್ಲಿ ಶೇ.63ರ ಷ್ಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿದೆ.
ಸೋಮವಾರದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ 10 ದಿನಗಳ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುವುದು ಬಹುತೇಕ ಖಚಿತ. ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿದೆ.
ಇದಕ್ಕೆ ಪ್ರತಿಯಾಗಿ ಹಿಂದಿನ ಸರ್ಕಾರಗಳ ಹಗರಣಗಳನ್ನು ಕೆದಕಿ ಪ್ರತಿಪಕ್ಷಗಳ ಅಸ್ತ್ರವನ್ನು ನಿಶಸ್ತ್ರಗೊಳಿಸಲು ಆಡಳಿತ ಪಕ್ಷ ಕೂಡ ಕಾರ್ಯತಂತ್ರ ರೂಪಿಸಿದೆ. ಎರಡೂವರೆ ವರ್ಷಗಳ ಯಶಸ್ಸಿನ ಆಡಳಿತದ ಹುಮಸ್ಸಿನಲ್ಲಿರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಅದೇ ರೀತಿ ಗ್ಯಾರಂಟಿಗಳ ಅನುಷ್ಠಾನದಲ್ಲಿನ ಲೋಪ, ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಿರುವುದು, ಅಧಿಕಾರ ಹಂಚಿಕೆಯಂಥ ಅಸ್ತ್ರಗಳೊಂದಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ ಎಂದು ತಿಳಿದುಬಂದಿದೆ.
ಪ್ರತಿಪಕ್ಷಗಳು ಪ್ರಸ್ತಾಪಿಸುವ ಯಾವ್ಯಾವ ವಿಚಾರಗಳ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅವರಿಗೆ ಪೂರಕವಾಗಿ ಯಾರೆಲ್ಲ ಶಾಸಕರು ಸಾಥ್ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ. ಹೀಗಾಗಿ ಆಡಳಿತ-ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳ ಮೂಲಕ ಚಳಿಗಾಲದ ಅಧಿವೇಶನವು ಬಿಸಿಯೇರುವ ಸಾಧ್ಯತೆಯಿದೆ.
ಈಗಾಗಲೇ ಪ್ರತಿಪಕ್ಷಗಳನ್ನು ಸದನದಲ್ಲಿ ಹೇಗೆ ಕಟ್ಟಿ ಹಾಕಬೇಕು? ಎಂಬುದರ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಮ ಸಚಿವರು ಮತ್ತು ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಪ್ರತಿಪಕ್ಷಗಳನ್ನು ಉತ್ತರದಿಂದಲೇ ಕಟ್ಟಿ ಹಾಕಬೇಕೆಂದು ಇಬ್ಬರೂ ನಾಯಕರು ಸೂಚನೆ ಕೊಟ್ಟಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಇಲಾಖೆವಾರು ಹಗರಣಗಳ ಪಟ್ಟಿಯಲ್ಲಿ ಸಿದ್ದ ಮಾಡಿಕೊಂಡಿರುವ ಕಾಂಗ್ರೆಸ್ ಪ್ರತಿ ಪಕ್ಷಗಳು ಎತ್ತುವ ಪ್ರತಿಯೊಂದು ಆರೋಪಕ್ಕೂ ಪ್ರತ್ಯುತ್ತರ ನೀಡುವಂತೆ ತಮ ಸಂಪುಟದ ಸಹೋದ್ಯೋಗಿಗಳಿಗೆ ಮೌಖಿಕವಾಗಿ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮಾಯಿ ಅಧಿಕಾರವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಸರ್ಕಾರವೇ ನೇಮಿಸಿದ್ದ ತನಿಖೆ ಆಯೋಗ ವರದಿಯಲ್ಲಿ ಇದು ಕಂಡುಬಂದಿದೆ ಹೀಗಾಗಿ ಪ್ರತಿಪಕ್ಷಗಳು ಯಾವುದೇ ವಿಷಯ ಪ್ರಸ್ತಾಪ ಮಾಡಿದರೆ,ಅದಕ್ಕೆ ಪ್ರತಿಯಾಗಿ ದಾಖಲೆಗಳನ್ನು ಮುಂದಿಟ್ಟುಕೊಂಡು ಉತ್ತರ ನೀಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ.
ಮಹತ್ವದ ಮಸೂದೆಗಳ ಮಂಡನೆ
ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಕೆಲವು ಮಹತ್ವದ ಮಸೂದೆಗಳನ್ನು ಮಂಡನೆ ಮಾಡಲಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡನೆಗೆ ಆಡಳಿತಾಕ ಅನುಮೋದನೆ ನೀಡಲಾಗಿದೆ.
ಬಹು ಮುಖ್ಯವಾಗಿ ಜನಾಂಗೀಯ ನಿಂದನೆ, ಭಾಷೆ, ಜನಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದನ್ನು ತಡೆಗಟ್ಟುವುದು ಮತ್ತು ಸಾಮಾಜಿಕ ಬಹಿಷ್ಕಾರ ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆ ಸೇರಿದಂತೆ ಒಟ್ಟು 21 ವಿಧೇಯಕಗಳನ್ನು ಮಂಡಿಸಲು ಕಾಂಗ್ರೆಸ್ ಸರ್ಕಾರವು ಸಿದ್ಧತೆ ನಡೆಸಿದೆ.
ಮಂಡನೆಯಾಗಲಿರುವ ವಿಧೇಯಕಗಳ ಪಟ್ಟಿ
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ )ವಿಧೇಯಕ 2025, ಬಯಲು ಸೀಮೆ ಪ್ರಾಧಿಕಾರ (ತಿದ್ದುಪಡಿ) 2025, ಕರ್ನಾಟಕ ಕಟ್ಟಡ ಉಲ್ಲಂಘನೆ ನಿಯಂತ್ರಣ ವಿಧೆಯಕ ಕರ್ನಾಟಕ ಅಪಾರ್ಟ್ಮೆಂಟ್ 2025, ಮಾಲೀಕತ್ವ ನಿಯಂತ್ರಣ) ಮಸೂದೆ 2025, ಶ್ರೀಘಾಟಿ ಸುಬ್ರಮಣ್ಯ ಕ್ಷೇತ್ರ ಪ್ರಾಧಿಕಾರ (ತಿದ್ದುಪಡಿ) 2025ರ ವಿಧೇಯಕ, ಚಂದ್ರಗುತ್ತಿ ಶ್ರೀರೇಣುಕಾಂಬ ಕ್ಷೇತ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ )ವಿಧೇಯಕ 2025, ಬಯಲು ಸೀಮೆ ಪ್ರಾಧಿಕಾರ (ತಿದ್ದುಪಡಿ) 2025, ಕರ್ನಾಟಕ ಕಟ್ಟಡ ಉಲ್ಲಂಘನೆ ನಿಯಂತ್ರಣ ವಿದೇಯಕ, ಮಾಲೀಕತ್ವ ನಿಯಂತ್ರಣ) ಮಸೂದೆ 2025, ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ (ತಿದ್ದುಪಡಿ) 2025, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ದತ್ತಿ (ತಿದ್ದುಪಡಿ) ವಿಧೇಯಕ, ಕರ್ನಾಟಕ ಗೃಹ ಕೆಲಸಗಾರರ (ಸಾಮಾಜಿಕ ಭದ್ರತೆ, ಕಲ್ಯಾಣ (ತಿದ್ದುಪಡಿ), ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ವಿಧೇಯಕ, ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಮಂಡಿಸಲಿದೆ.
ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ (ತಿದ್ದುಪಡಿ ) ವಿಧೇಯಕ, ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ ) 2025, ಕರ್ನಾಟಕ ಪರಿಶಿಷ್ಟ ಜಾತಿಗಳು ( ಉಪ ಪಂಗಡಗಳ ಮೀಸಲಾತಿ), ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ (ಎರಡನೇ ತಿದ್ದುಪಡಿ), ವಿಧೇಯಕ, ಕರ್ನಾಟಕದಲ್ಲಿ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಗೋ ಸಂರಕ್ಷಣೆ (ತಿದ್ದುಪಡಿ) ವಿಧೇಯಕ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿ (ನಿಷೇಧ) ಮಸೂದೆಯೂ ಸೇರಿದೆ.
ದ್ವೇಷ ಭಾಷಣವು ದೇಶದ ಜಾತ್ಯತೀತ ಸಂರಚನೆಗೆ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು. ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ತಡೆಗಟ್ಟುವಿಕೆ ಮತ್ತು ಶಿಕ್ಷಿಸುವ ವಿಧೇಯಕವನ್ನು ರೂಪಿಸಿದೆ.
ರಾಜ್ಯದಲ್ಲಿ ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಹೇರುವುದು ಅಥವಾ ಹೇರಲು ಕಾರಣಕರ್ತನಾದರೇ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಆಚರಿಸಿರುವುದು ಸಾಬೀತಾದರೇ ಅಂತಹ ವ್ಯಕ್ತಿಗಳ ವಿರುದ್ಧ 7 ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ. ಜುಲಾನೆ ವಿಧಿಸಲಿದೆ.
