ಬೆಂಗಳೂರು, ಮೇ.9 – ಭೂವ್ಯಾಜ್ಯ, ಸಿವಿಲ್ ತಗಾದೆಗಳಲ್ಲಿ ಪೊಲೀಸ್ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಭಾಗಿಯಾಗಿರುವ ದೂರುಗಳು ಕಂಡುಬಂದರೆ ಅವರುಗಳ ವಿರುದ್ಧ ಕಟ್ಟುನಿಟ್ಟಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಎಚ್ಚರಿಕೆ ನೀಡಿದರು.
ನಗರದ ಆಡುಗೋಡಿಯ ಸಿಎಆರ್ ಕವಾಯತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಸೇವಾ ಕವಾಯತಿನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ 2-3 ಪ್ರಕರಣಗಳು ಪೊಲೀಸರ ವಿರುದ್ಧವೇ ದಾಖಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಶಿಸ್ತು ಸಂಯಮಕ್ಕೆ ಚ್ಯುತಿ ಬಾರದಂತೆ ಹದ್ದುಬಸ್ತಿನ ಕಾರ್ಯನಿರ್ವಹಣೆಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಠಾಣೆಗಳಲ್ಲಿ ತಮ್ಮ ಸಿಬ್ಬಂದಿಗಳ ಕಾರ್ಯನಿರ್ವಹಣೆ ಮತ್ತು ಚಟುವಟಿಕೆಗಳ ಮೇಲೆ ಇನ್ ಸ್ಪೆಕ್ಟರ್ಗಳು, ಎಸಿಪಿಗಳು ನಿಗಾ ವಹಿಸಬೇಕು. ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ಹಾಗೂ ಅದರಲ್ಲಿ ಭಾಗವಹಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವಂತೆ ಆದೇಶಿಸಿದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡುಬಂದರೆ ಅದಕ್ಕೆ ಆಯಾ ವ್ಯಾಪ್ತಿಯ ಹಿರಿಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಹದ್ದು ಬಸ್ತಿನ ಪೊಲೀಸ್ಗಿರಿಗೆ ಎಲ್ಲರೂ ಬದ್ದರಾಗಿ ನಡೆದುಕೊಳ್ಳಬೇಕು ಎಂದರು.
ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ಇಳಿಮುಖವಾಗುತ್ತಿವೆ. ಅದರಲ್ಲೂ ಮನೆ ಹಾಗೂ ವಾಹನಗಳ ಕಳ್ಳತನದಂತಹ ಪ್ರಕರಣಗಳು ತಗ್ಗಿವೆ. ಪೊಲೀಸ್ ಠಾಣೆಗಳಲ್ಲಿ ಅಹವಾಲು ಸ್ವೀಕಾರ, ರಾತ್ರಿ ಗಸ್ತು ಹೆಚ್ಚಳ, ನಾಕಾ ಬಂಧಿ ಆಯೋಜಿಸಿದ್ದರಿಂದಾಗಿ ಅಪರಾಧ ಕೃತ್ಯಗಳು ತಗ್ಗಿವೆ ಎಂದು ಹೇಳಿದರು.
ಸೈಬರ್ ಅಪರಾಧಗಳಲ್ಲೂ ಗಣನೀಯ ಇಳಕೆ ಕಂಡುಬಂದಿವೆ. ಕಳೆದ 2 ವರ್ಷಗಳಿಂದ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಡಿಜಿಟಲ್ ಡಿಸ್ಪ್ಲೇ, ಆಡಿಯೊ ಸಂದೇಶ, ವಿಡಿಯೊ ಮಾಹಿತಿಗಳು ಸೈಬರ್ ಅಪರಾಧಗಳು ತಗ್ಗಲು ಕಾರಣವಾಗಿವೆ ಎಂದು ಆಯುಕ್ತರು ಪ್ರಶಂಸಿಸಿದರು.
ಅಪರಾಧ ಪತ್ತೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳ್ಳಬೇಕು ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ಅವರು ಒತ್ತಿ ಹೇಳಿದರು. ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.