ಬೆಂಗಳೂರು, ಮೇ 29- ಕರಾವಳಿಯ ದಕ್ಷಿಣ ಕನ್ನಡ ಹಾಗೂ ಇತರ ಭಾಗಗಳಲ್ಲಿ ನಡೆಯುವ ಕೋಮು ಗಲಭೆಗಳನ್ನು ನಿಯಂತ್ರಿಸಲು ಯಾರು,ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.ಬಿ.ಕೆ.ಹರಿಪ್ರಸಾದ್ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿ ಪ್ರಸಾದ್ ನಮ ಪಕ್ಷದ ಹಿರಿಯ ನಾಯಕರು, ಆಹ್ವಾನದ ಮೇರೆಗೆ ಅವರ ಮನೆಗೆ ಉಪಹಾರಕ್ಕೆ ಬಂದಿದ್ದೆ. ಸಾಮಾನ್ಯವಾಗಿ ಚರ್ಚೆ ಮಾಡಿದ್ದೇವೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದತೆ ಪಾಲನೆ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಪ್ರಮುಖವಾಗಿ ಚರ್ಚೆ ಮಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ ಬರಬೇಕು , ಹಿಂದುಗಳು ಮುಸ್ಲಿಂರು ಒಟ್ಟಾಗಿರಬೇಕು. ಯಾವುದೇ ಕಾರಣಕ್ಕೂ ದ್ವೇಷ ಇರಬಾರದು. ಹರಿ ಪ್ರಸಾದ್ ಗೆ ನೀವು ಅಲ್ಲಿಗೆ ಒಮೆ ಹೋಗಿ ಬನ್ನಿ ಎಂದಿದ್ದೇನೆ ಎಂದು ಮನವಿ ಮಾಡಿದ್ದೇನೆ ಎಂದರು.
ಮಂಗಳೂರಿನಲ್ಲಿನ ಸರಣಿ ಕೊಲೆಗಳನ್ನು ನಿಯಂತ್ರಿಸಲು ಯಾರೇ, ಎಷ್ಟೇ ಪ್ರಭಾವಿಗಳಿದ್ದರೂ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಇದೇ ವೇಳೆ ಸ್ಪಷ್ಟ ಪಡಿಸಿದರು.
ಮಳೆ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ನಾಳೆಯಿಂದ ಎರಡು ದಿನಗಳ ಸಭೆ ನಡೆಸಲಾಗುವುದು. ಸಚಿವರು, ಮುಖ್ಯಕಾರ್ಯದರ್ಶಿ, ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಸಿಇಒಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೂದಿ ಮುಚ್ಚಿದ ಕೆಂಡದಂತಿರುವ ದಕ್ಷಿಣ ಕನ್ನಡ:
ಮಂಗಳೂರಿನಲ್ಲಿ ಇತ್ತೀಚೆಗೆ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಅದರ ಬೆನ್ನಲೆ ನಿನ್ನೆ ಅಬ್ದುಲ್ ರಹೀಂಖಾನ್ ಹತ್ಯೆಯಾಗಿದೆ. ಇದು ಕರಾವಳಿ ಜಿಲ್ಲೆಯಲ್ಲಿ ಕೋಮು ಸಂಘರ್ಷದ ವಾತಾವರಣ ನಿರ್ಮಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯ ಸರ್ಕಾರ ಕೋಮು ಶಕ್ತಿಗಳನ್ನು ಹತ್ತಿಕ್ಕಲು ನಕ್ಸಲ್ ನಿಗ್ರಹ ಪಡೆಯ ಮಾದರಿಯಲ್ಲಿ ಕೋಮುವಾದ ನಿಗ್ರಹ ಪಡೆ ರಚಿಸುವುದಾಗಿ ಘೋಷಿಸಿದೆ. ಅದರ ಹೊರತಾಗಿಯೂ ಹತ್ಯೆಗಳು ನಿಂತಿಲ್ಲ.
ಅಬ್ದುಲ್ ರಹೀಂಖಾನ್ ಹತ್ಯೆ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿದ್ದ ಮುಸ್ಲಿಂ ನಾಯಕರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಇದು ತಲೆ ನೋವಾಗಿ ಪರಿಣಮಿಸಿದೆ. ಬಿ.ಕೆ.ಹರಿಪ್ರಸಾದ್ ಕರಾವಳಿ ಭಾಗದವರಾಗಿದ್ದು, ಅಲ್ಲಿಗೆ ಒಮೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಸಲಹೆ ನೀಡಿರುವುದು ಕುತೂಹಲ ಕೆರಳಿಸಿದೆ.