ಬೆಂಗಳೂರು,ಆ.28- ಅಯ್ಯೋ ನಾನು ಹೇಳಿದ್ದೇಲಾ ಸುಳ್ಳು… ನನ್ನ ದಾರಿ ತಪ್ಪಿಸಿದ್ದು ಆ ಬುರುಡೆ ಗ್ಯಾಂಗ್…ನನ್ನನ್ನು ಬಿಟ್ಟುಬಿಡಿ… ನೀವು ಒಪ್ಪಿದ್ದರೆ ನಾನು ನನ್ನ ಕೇಸ್ ವಾಪಸ್ ಪಡೆದುಕೊಳ್ಳುತ್ತೇನೆ…ಹೀಗಂತಾ ಎಸ್ಐಟಿ ಅಧಿಕಾರಿಗಳ ಮುಂದೆ ಅನನ್ಯಾ ಭಟ್ ನಾಪತ್ತೆ ಪ್ರಕರಣದ ರೂವಾರಿ 85 ವರ್ಷದ ಸುಜಾತ ಭಟ್ ಬೊಬ್ಬೆ ಹೊಡೆಯುತ್ತಿದ್ದಾರೆ.
ಆದರೆ, ಅವರ ಮಾತಿಗೆ ಕ್ಯಾರೆ ಎನ್ನದ ಎಸ್ಐಟಿ ಅಧಿಕಾರಿಗಳು ಇಂದು ಸುಜಾತ ಭಟ್ ಅವರನ್ನು ಮೂರನೇ ದಿನವೂ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಅವರನ್ನು ಬಂಧಿಸುವ ಸಾದ್ಯತೆ ಇದೆ.
ನನ್ನ ಮಗಳು ಅನನ್ಯಾ ಭಟ್ ಅವರನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಲಾಗಿದೆ. ನನಗೆ ನನ್ನ ಮಗಳ ಅಸ್ಥಿಪಂಜರ ಹುಡುಕಿಕೊಟ್ಟರೆ ಹಿಂದೂ ಸಂಪ್ರದಾಯದಂತೆ ಸಂಸ್ಕಾರ ನಡೆಸುವ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದ ಸುಜಾತ ಭಟ್ ನಂತರ ದಿನಕ್ಕೊಂದು ಹೇಳಿಕೆ ನೀಡಿ ಪೊಲೀಸರ ದಾರಿ ತಪ್ಪಿಸಿದ್ದರು.
ಹೀಗಾಗಿ ಭಟ್ ಅವರಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ನನಗೆ ವಯಸ್ಸಾಗಿದೆ ಹಾಗೂ ಜೀವಬೆದರಿಕೆ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದಿದ್ದ ಅವರು ಮೊನ್ನೆ ಇದ್ದಕ್ಕಿದ್ದಂತೆ ಬೆಳಗಿನ ಜಾವ 5 ಗಂಟೆಗೆ ತಮ ವಕೀಲರೊಂದಿಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿ ಅನನ್ಯಾ ಭಟ್ ನನ್ನ ಮಗಳು ಎಂದು ವಾದಿಸಿದ್ದರು. ಆಗ ಪೊಲೀಸರು ಸಮರ್ಪಕ ದಾಖಲೆಯೊಂದಿಗೆ ನಾಳೆ ಬರುವಂತೆ ಸೂಚಿಸಿದ್ದರು.
ಹೀಗಾಗಿ ನಿನ್ನೆ ಕೂಡ ಸತತ 11 ಗಂಟೆಗಳ ಕಾಲ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ಸುಜಾತ ಭಟ್ ಅವರು, ಕಣ್ಣೀರು ಹಾಕುತ್ತ ಅನನ್ಯಾ ಭಟ್ ನನ್ನ ಮಗಳಲ್ಲ. ನನ್ನ ದಾರಿ ತಪ್ಪಿಸಿದ್ದು ಬುರುಡೆ ಗ್ಯಾಂಗ್ ಅವರ ಮಾತು ಕೇಳಿ ನಾನು ಸುಳ್ಳು ಹೇಳಿದ್ದೇನೆ. ನನ್ನನ್ನು ಬಿಟ್ಟುಬಿಡಿ. ನೀವು ಅನುಮತಿ ನೀಡಿದರೆ ನಾನು ನೀಡಿರುವ ದೂರನ್ನು ವಾಪಸ್ ಪಡೆಯುತ್ತೇನೆ ಎಂದು ಅಲವತ್ತುಕೊಂಡಿದ್ದಾರೆ.
ಆದರೆ, ಅವರ ಗೋಸುಂಬೆ ಮಾತಿಗೆ ಮರುಳಾಗದ ಎಸ್ಐಟಿ ಪೊಲೀಸರು ಅದಕ್ಕೆ ಅನುಮತಿ ನೀಡದೆ ನೀವು ನಾಳೆಯೂ ಬಂದು ವಿಚಾರಣೆಗೆ ಒಳಗಾಗಬೇಕು ಎಂದು ಸೂಚಿಸಿ ಕಳುಹಿಸಿದ್ದರು. ಹೀಗಾಗಿ ಇಂದು ಕೂಡ ಬೆಳ್ತಂಗಡಿಗೆ ಆಗಮಿಸಿರುವ ಸುಜಾತ ಭಟ್ ಅವರು ಎಸ್ಐಟಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಬಂಧಿಸುವ ಸಾದ್ಯತೆಗಳಿವೆ.
ಅತ್ತ, ಮಾಸ್ಕ್ಮ್ಯಾನ್ ಚಿನ್ನಯ್ಯ. ಇತ್ತ ಸುಜಾತ ಭಟ್ ಇರುವ ಸತ್ಯವನ್ನು ಎಸ್ಐಟಿ ತನಿಖಾಧಿಕಾರಿ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಧರ್ಮಸ್ಥಳ ಪ್ರಕರಣ ಸೃಷ್ಟಿಸಿದ್ದ ಸೂತ್ರಧಾರರು ಪತರಗುಟ್ಟಿ ಹೋಗಿದ್ದು, ಇಬ್ಬರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ, ಕರ್ನಾಟಕದ ಹೆಮೆಯ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಹೋಗಿ ಕಟ್ಟುಕತೆ ಕಟ್ಟಿದ್ದ ಸೂತ್ರಧಾರರು ತಾವೇ ತೋಡಿಸಿದ್ದ ಗುಂಡಿಗೆ ಬಿದ್ದು ವಿಲ ವಿಲ ಒದ್ದಾಡುವಂತೆ ಆಗಿರುವುದು ಮಾತ್ರ ಮಂಜುನಾಥ ಸ್ವಾಮಿ ಆಣೆಗೂ ಸತ್ಯ.
- ಕೊಡಗಿನ ರೋಷನ್ ಜೊತೆ ಹಸೆಮಣೆ ಏರಿದ ಆ್ಯಂಕರ್ ಅನುಶ್ರೀ
- ಡಿಕೆಶಿ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ : ಯದುವೀರ್
- ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲವೆಂದಾದರೆ ಮುಜರಾಯಿ ಸುಪರ್ದಿಗೆ ಏಕೆ..?
- ಸರ್ಕಾರಕ್ಕೆ ಮಂಜುನಾಥಸ್ವಾಮಿಯೇ ಶಿಕ್ಷೆ ಕೊಡುತ್ತಾನೆ : ಹೆಚ್.ಡಿ.ಕುಮಾರಸ್ವಾಮಿ
- ಬೆಂಗಳೂರಲ್ಲಿ ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿ ಆತ್ಮಹತ್ಯೆ